ಬೆಂಗಳೂರು: “ನಾನು ಮುಖ್ಯಮಂತ್ರಿಯಾದ ಮೇಲೆ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಇಲಾಖೆಯ ಉಸ್ತುವಾರಿಯನ್ನು ನೀಡುತ್ತೇನೆ ಎಂದು ಮಾತು ಕೊಟ್ಟಿದ್ದು ನಿಜ” ಎಂಬುದನ್ನು ಸಿಎಂ ಡಿ.ಕೆ. ಶಿವಕುಮಾರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ನೂತನ ಸಚಿವ ಸಂಪುಟದಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮಗೆ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಅವರ ನಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಅಧಿಕೃತ ಪ್ರತಿಕ್ರಿಯೆ ನೀಡಿದ್ದಾರೆ.
ವರಿಷ್ಠರ ತೀರ್ಮಾನಕ್ಕೆ ಬದ್ಧ, ರಾಮಲಿಂಗಾರೆಡ್ಡಿ ಜೊತೆ ಮಾತನಾಡ್ತೇನೆ:
ಈ ಕುರಿತು ವಿವರಣೆ ನೀಡಿದ ಡಿ.ಕೆ. ಶಿವಕುಮಾರ್, “ಹಿಂದೆ ಅವರಿಗೆ ಸಾರಿಗೆ ಇಲಾಖೆ ನೀಡಿದಾಗ ನಾನು ಮತ್ತು ನನ್ನ ಸಹೋದರ (ಡಿ.ಕೆ. ಸುರೇಶ್) ಹೋಗಿ ಅವರ ಮನವೊಲಿಸಿದ್ದೆವು. ನಂತರ ಕೆ. ಸುಧಾಕರ್ ಅವರ ಬಳಿ ಇದ್ದ ಮುಜರಾಯಿ ಇಲಾಖೆಯನ್ನೂ ತೆಗೆದುಕೊಟ್ಟಿದ್ದು ನಿಜ. ಆದರೆ ಈ ಬಾರಿ ಹೈಕಮಾಂಡ್ ವರಿಷ್ಠರು ತೀರ್ಮಾನ ಕೈಗೊಂಡಿದ್ದು, ಕೃಷ್ಣಬೈರೇಗೌಡ ಅವರಿಗೆ ಬೆಂಗಳೂರು ಅಭಿವೃದ್ಧಿ ಇಲಾಖೆಯನ್ನು ಹಂಚಿಕೆ ಮಾಡಿದ್ದಾರೆ” ಎಂದರು.
“ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡಿಸಲು ನಾನು ಹೈಕಮಾಂಡ್ ಬಳಿ ಪ್ರಯತ್ನ ಪಟ್ಟಿದ್ದೆ. ಆದರೆ ಈಗ ಆಗಿರುವುದು ಆಗಿದೆ. ರಾಮಲಿಂಗಾರೆಡ್ಡಿ ಅವರು ಸದ್ಯ ಬೇರೆ ಕಡೆಗೆ ಹೋಗಿದ್ದರು, ಈಗ ವಾಪಸ್ ಬರುತ್ತಿದ್ದಾರೆ. ನಾನು ಖುದ್ದಾಗಿ ಅವರ ಬಳಿ ಹೋಗಿ ಮಾತನಾಡುತ್ತೇನೆ” ಎಂದು ಸಿಎಂ ತಿಳಿಸಿದರು.
ಅವರು ಕೇಳುವುದರಲ್ಲಿ ತಪ್ಪಿಲ್ಲ:
ಪ್ರಸ್ತುತ ರಾಮಲಿಂಗಾರೆಡ್ಡಿ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ (ಜಲಸಂಪನ್ಮೂಲ) ಇಲಾಖೆಯನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಸಿಎಂ, “ಜಲಸಂಪನ್ಮೂಲ ಕೂಡ ದೊಡ್ಡ ಇಲಾಖೆಯೇ. ಆದರೆ ರಾಮಲಿಂಗಾರೆಡ್ಡಿ ಅವರು ‘ನಾನು ನಗರದಲ್ಲೇ ಇರುವವನು, ಇಲ್ಲೇ ನನ್ನ ಬದುಕು ಮತ್ತು ರಾಜಕೀಯವನ್ನು ಮಾಡಿದ್ದೇನೆ, ಹಾಗಾಗಿ ಬೆಂಗಳೂರು ಉಸ್ತುವಾರಿಯನ್ನೇ ಕೊಡಿ’ ಎಂದು ಕೇಳಿದ್ದಾರೆ. ಅವರು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಏನೇ ಮಾಡಿದರೂ ಪಕ್ಷದ ವರಿಷ್ಠರನ್ನು ಬಿಟ್ಟು ಮಾಡಲು ಸಾಧ್ಯವಿಲ್ಲ, ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಸಮಜಾಯಿಷಿ ನೀಡಲಾಗುವುದು” ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ಖಡಕ್ ಟಾಸ್ಕ್: ‘ಒಪ್ಪದಿದ್ದರೆ ರಾಜೀನಾಮೆ ಅಂಗೀಕರಿಸಿ’ ಎಂದ ರಾಹುಲ್ ಗಾಂಧಿ!
ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಂದ ರಾಮಲಿಂಗಾರೆಡ್ಡಿ ಅವರ ಅಸಮಾಧಾನದ ಸಂಪೂರ್ಣ ವಿವರಗಳನ್ನು ಆಲಿಸಿರುವ ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ ಅವರು ರಾಜ್ಯ ನಾಯಕತ್ವಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಮನವೊಲಿಸುವ ಜವಾಬ್ದಾರಿಯನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿರುವ ರಾಹುಲ್ ಗಾಂಧಿ, “ಮೊದಲು ಅವರ ಮನವೊಲಿಸಲು ಪ್ರಯತ್ನಿಸಿ, ಒಂದು ವೇಳೆ ಅವರು ಒಪ್ಪದೇ ಇದ್ದರೆ ಅವರ ರಾಜೀನಾಮೆಯನ್ನು ಅಂಗೀಕರಿಸಿ” ಎಂದು ಹೈಕಮಾಂಡ್ ಪರವಾಗಿ ಒಂದು ಸಾಲಿನ ಖಡಕ್ ತೀರ್ಮಾನವನ್ನು ತಿಳಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ವರದಿ ಮಾಡಿವೆ.
ಸಚಿವ ಸ್ಥಾನಕ್ಕೆ ಕೆ.ಜೆ ಜಾರ್ಜ್ ರಾಜೀನಾಮೆ ವದಂತಿಗಳ ಬಗ್ಗೆ ಹೇಳಿದ್ದೇನು ಗೊತ್ತಾ?
BREAKING: ನಾಳೆ ಯುಜಿಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ; ಕೆಇಎ ಘೋಷಣೆ | UGCET Exam Results








