ಬೆಂಗಳೂರು: ದೇಶದ ಬೆನ್ನೆಲುಬಾಗಿರುವ ರೈತರ ಆರ್ಥಿಕ ಸಬಲೀಕರಣ, ಕೃಷಿ ಆಧುನೀಕರಣ ಮತ್ತು ಸಂಕಷ್ಟದ ಸಮಯದಲ್ಲಿ ನೆರವಾಗಲು ಸರ್ಕಾರವು ಕೃಷಿ ಇಲಾಖೆಯ ಮೂಲಕ ಹತ್ತಾರು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಕೃಷಿ ಉತ್ಪಾದನೆ ಹೆಚ್ಚಿಸುವುದರಿಂದ ಹಿಡಿದು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಆಸರೆಯಾಗುವವರೆಗೆ ಸರ್ಕಾರ ನೀಡುತ್ತಿರುವ ಪ್ರಮುಖ ಸೌಲಭ್ಯಗಳು ಮತ್ತು ಸಬ್ಸಿಡಿಗಳ (ಸಹಾಯಧನ) ಸಮಗ್ರ ಮಾಹಿತಿ ಇಲ್ಲಿದೆ.
1. ಬಿತ್ತನೆ ಬೀಜ ಹಾಗೂ ಸಸ್ಯ ಸಂರಕ್ಷಣೆಗೆ ಭಾರಿ ರಿಯಾಯಿತಿ
ಗುಣಮಟ್ಟದ ಬೀಜಗಳ ಪೂರೈಕೆ: ರಾಜ್ಯದ ಎಲ್ಲಾ ವರ್ಗದ ರೈತರಿಗೆ ವಿವಿಧ ಕೃಷಿ ಬೆಳೆಗಳ ಪ್ರಮಾಣಿತ ಬಿತ್ತನೆ ಬೀಜಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಷ್ಟು ಹಾಗೂ ಪರಿಶಿಷ್ಟ ಜಾತಿ (ಪ.ಜಾ)/ ಪರಿಶಿಷ್ಟ ಪಂಗಡದ (ಪ.ಪಂ) ರೈತರಿಗೆ ಶೇ. 75 ರಷ್ಟು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ.
ಸಸ್ಯ ಸಂರಕ್ಷಣೆ: ಕೀಟ ಹಾಗೂ ರೋಗ ಬಾಧೆ ತಡೆಯಲು ಪೀಡನಾಶಕ, ಜೈವಿಕ ಪೀಡನಾಶಕ ಮತ್ತು ಜೈವಿಕ ನಿಯಂತ್ರಣ ಕಾರಕಗಳನ್ನು ಶೇ. 50 ರಷ್ಟು ರಿಯಾಯಿತಿ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ.
2. ಕೃಷಿ ಯಾಂತ್ರೀಕರಣ ಮತ್ತು ಸಂಸ್ಕರಣೆಗೆ ಬಂಪರ್ ಸಹಾಯಧನ
ಕೃಷಿ ಯಾಂತ್ರೀಕರಣ: ಕೃಷಿ ಚಟುವಟಿಕೆಗಳನ್ನು ಸಕಾಲದಲ್ಲಿ ಕೈಗೊಳ್ಳಲು ಮತ್ತು ಕೂಲಿ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಮಾಡಲು ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಷ್ಟು ಮತ್ತು ಪ.ಜಾ/ಪ.ಪಂ ರೈತರಿಗೆ ಶೇ. 90 ರಷ್ಟು (ಗರಿಷ್ಠ 1 ಲಕ್ಷ ರೂ. ಮಿತಿಗೊಳಪಟ್ಟು) ಸಹಾಯಧನ ನೀಡಲಾಗುತ್ತಿದೆ.
ಟ್ರಾಕ್ಟರ್ ಖರೀದಿಗೆ ನೆರವು: 45 ಪಿ.ಟಿ.ಓ ಹೆಚ್.ಪಿ ವರೆಗಿನ ಟ್ರಾಕ್ಟರ್ಗಳಿಗೆ ಸಾಮಾನ್ಯ ವರ್ಗದ ರೈತರಿಗೆ 0.75 ಲಕ್ಷ ರೂ. ಹಾಗೂ ಪ.ಜಾ/ಪ.ಪಂ ರೈತರಿಗೆ ಶೇ. 90 ರಷ್ಟು ಅಂದರೆ ಗರಿಷ್ಠ 3.00 ಲಕ್ಷ ರೂ. ಸಹಾಯಧನ ಲಭ್ಯವಿದೆ.
ಕೃಷಿ ಸಂಸ್ಕರಣೆ: ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳು, ಟಾರ್ಪಾಲಿನ್ ಮತ್ತು ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳಿಗೆ ಸಾಮಾನ್ಯ ವರ್ಗಕ್ಕೆ ಶೇ. 50 ಹಾಗೂ ಪ.ಜಾ/ಪ.ಪಂ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತಿದೆ. ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳಿಗೆ ಸಾಮಾನ್ಯ ವರ್ಗಕ್ಕೂ ಶೇ. 75 ರಷ್ಟು ನೆರವು ಸಿಗಲಿದ್ದು, ಗರಿಷ್ಠ ಮಿತಿ 1.00 ಲಕ್ಷ ರೂ. ಆಗಿದೆ.
3. ನೀರಾವರಿ ಸೌಲಭ್ಯಗಳು ಮತ್ತು ‘ಕೃಷಿ ಭಾಗ್ಯ‘
ಸೂಕ್ಷ್ಮ ನೀರಾವರಿ (ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ): ಹನಿ ಮತ್ತು ತುಂತುರು ನೀರಾವರಿ ಅಳವಡಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಯೋಗದೊಂದಿಗೆ (60:40 ಅನುಪಾತ) ರಾಜ್ಯದ ಹೆಚ್ಚುವರಿ ಸಹಾಯಧನವನ್ನೂ ಸೇರಿಸಿ ಎಲ್ಲಾ ವರ್ಗದ ರೈತರಿಗೆ ಭರ್ಜರಿ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತಿದೆ (ಗರಿಷ್ಠ 5.0 ಹೆಕ್ಟೇರ್ ಪ್ರದೇಶದವರೆಗೆ).
ಕೃಷಿ ಭಾಗ್ಯ ಯೋಜನೆ: ರೈತರ ಜಮೀನಿನಲ್ಲಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ನೀರು ಎತ್ತಲು ಡೀಸೆಲ್/ಪೆಟ್ರೋಲ್/ಸೋಲಾರ್ ಪಂಪ್ ಸೆಟ್ಗಳಿಗೆ ಸಾಮಾನ್ಯ ರೈತರಿಗೆ ಶೇ. 80 ಹಾಗೂ ಪ.ಜಾ/ಪ.ಪಂ ರೈತರಿಗೆ ಶೇ. 90 ರಷ್ಟು ಸಹಾಯಧನವಿದೆ. ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣಕ್ಕೆ ಶೇ. 40 ರಿಂದ ಶೇ. 50 ರಷ್ಟು ಸಹಾಯಧನ ಸಿಗಲಿದೆ.
4. ಸಿರಿಧಾನ್ಯ ಪ್ರೋತ್ಸಾಹ ಮತ್ತು ಸಾವಯವ ಕೃಷಿ
ರೈತ ಸಿರಿ ಕಾರ್ಯಕ್ರಮ: ಸಿರಿಧಾನ್ಯಗಳಾದ ನವಣೆ, ಹಾರಕ, ಕೊರಲೆ, ಸಾಮೆ, ಊದಲು, ಬರಗು ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ಆಧಾರದ ಮೇಲೆ ಪ್ರತಿ ಹೆಕ್ಟೇರಿಗೆ 10,000/- ರೂ. ನಂತೆ (ಗರಿಷ್ಠ ಎರಡು ಹೆಕ್ಟೇರ್ಗೆ) ನೇರ ನಗದು ವರ್ಗಾವಣೆ (DBT) ಮೂಲಕ ಪ್ರೋತ್ಸಾಹಧನ ನೀಡಲಾಗುತ್ತಿದೆ.
ಸಾವಯವ ಇಂಗಾಲ ಅಭಿಯಾನ: ಮಣ್ಣಿನ ಫಲವತ್ತತೆ ಮತ್ತು ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸಲು ದ್ವಿದಳ ಧಾನ್ಯಗಳ ವಿಸ್ತೀರ್ಣ ಹೆಚ್ಚಿಸುವ ಸಲುವಾಗಿ ಶೇ. 75 ರ ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.
5. ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಬೆಲೆ ರಕ್ಷಣೆ
ಪಿ.ಎಂ.ಕಿಸಾನ್ ಯೋಜನೆ: ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ಒಟ್ಟು 6,000 ರೂ.ಗಳ ಹಣಕಾಸಿನ ನೆರವನ್ನು 3 ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಬೆಂಬಲ ಬೆಲೆ ಯೋಜನೆ: ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಮುಂಚಿತವಾಗಿಯೇ ಬೆಂಬಲ ಬೆಲೆ ಘೋಷಣೆ ಮಾಡಲಾಗುತ್ತಿದ್ದು, ಮಾರುಕಟ್ಟೆ ದರ ಕುಸಿದಾಗ ಸರ್ಕಾರವೇ ರೈತರಿಂದ ಉತ್ಪನ್ನಗಳನ್ನು ಖರೀದಿಸುತ್ತದೆ.
ಕೃಷಿ ಆವರ್ತ ನಿಧಿ: ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಉಂಟಾದಾಗ ಮಧ್ಯಪ್ರವೇಶಿಸಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಕರ್ನಾಟಕ ಸರ್ಕಾರದಲ್ಲಿ ಆವರ್ತ ನಿಧಿಯನ್ನು ನಿರ್ವಹಿಸಲಾಗುತ್ತಿದೆ.
6. ಸಾಲ ಸೌಲಭ್ಯಗಳು ಮತ್ತು ವಿಮಾ ರಕ್ಷಣೆ
ಶೂನ್ಯ ಬಡ್ಡಿ ದರದಲ್ಲಿ ಸಾಲ: ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 5.00 ಲಕ್ಷ ರೂ. ವರೆಗೆ ಅಲ್ಪಾವಧಿ ಕೃಷಿ ಸಾಲ ಹಾಗೂ ಶೇ. 3 ರ ಬಡ್ಡಿ ದರದಲ್ಲಿ 15.00 ಲಕ್ಷ ರೂ. ವರೆಗೆ ಮಧ್ಯಮಾವಧಿ ಸಾಲ ನೀಡಲಾಗುತ್ತಿದೆ.
ಬೆಳೆ ಸಾಲಕ್ಕೆ ಬಡ್ಡಿ ಸಹಾಯಧನ: ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಅಲ್ಪಾವಧಿ ಕೃಷಿ ಸಾಲ ಪಡೆದು ನಿಗದಿತ ಅವಧಿಯೊಳಗೆ ಮರುಪಾವತಿಸುವ ರೈತರಿಗೆ ಶೇ. 1 ರಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ.
ಹೊಸ ಬೆಳೆ ವಿಮಾ ಯೋಜನೆ & ಬೆಳೆ ಪರಿಹಾರ: ಪ್ರಕೃತಿ ವಿಕೋಪ, ಕೀಟ ಮತ್ತು ರೋಗಬಾಧೆಯಿಂದ ಬೆಳೆ ವಿಫಲವಾದರೆ ಹಣಕಾಸಿನ ರಕ್ಷಣೆ ನೀಡಲಾಗುತ್ತದೆ. ನೈಸರ್ಗಿಕ ವಿಕೋಪಗಳಿಂದ ಬೆಳೆಹಾನಿಯಾದಾಗ ರಾಷ್ಟ್ರೀಯ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಬೆಳೆ ಪರಿಹಾರ ವಿತರಿಸಲಾಗುತ್ತಿದೆ.
7. ಹೈಟೆಕ್ ಹಾರ್ವೆಸ್ಟರ್ ಹಬ್ ಮತ್ತು ಸಮಗ್ರ ಕೃಷಿ
ಹೈಟೆಕ್ ಹಾರ್ವೆಸ್ಟರ್ ಹಬ್: ದೊಡ್ಡ ಕೃಷಿ ಯಂತ್ರಧಾರೆ ಕೇಂದ್ರಗಳು ಮತ್ತು ಸಂಘ-ಸಂಸ್ಥೆಗಳಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆಗಾಗಿ ಶೇ. 40 ರಿಂದ ಶೇ. 70 ರಷ್ಟು (ಪ್ರತಿ ಘಟಕಕ್ಕೆ ಗರಿಷ್ಠ 100.00 ಲಕ್ಷ ರೂ. ಮೀರದಂತೆ) ಅನುದಾನ ಒದಗಿಸಲಾಗುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಆಹಾರ ಸುರಕ್ಷತಾ ಅಭಿಯಾನ: ತೋಟಗಾರಿಕೆ, ಪಶುಸಂಗೋಪನೆ ಒಳಗೊಂಡ “ಸಮಗ್ರ ಕೃಷಿ ಪದ್ಧತಿ” ಮೂಲಕ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ವಿವಿಧ ಆಹಾರ ಧಾನ್ಯಗಳು, ಹತ್ತಿ, ಕಬ್ಬು ಮತ್ತು ಎಣ್ಣೆಕಾಲುಗಳ ಉತ್ಪಾದನೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳು, ಲಘು ಪೋಷಕಾಂಶಗಳು ಮತ್ತು ಕೃಷಿ ಉಪಕರಣಗಳನ್ನು ಶೇ. 50 ರಷ್ಟು ಸಹಾಯಧನದಲ್ಲಿ ನೀಡಲಾಗುತ್ತಿದೆ.
8. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಂತ್ವನ ಮತ್ತು ಪರಿಹಾರ
ಯಾವುದೇ ಕಾರಣಕ್ಕಾದರೂ ರೈತರು ಆತ್ಮಹತ್ಯೆ ಹಾದಿ ಹಿಡಿಯಬಾರದು ಎಂದು ಸರ್ಕಾರ ಜಾಗೃತಿ ಮೂಡಿಸುತ್ತಿದೆ. ಆದಾಗ್ಯೂ, ಆತ್ಮಹತ್ಯೆ ಮಾಡಿಕೊಂಡ ಅರ್ಹ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ಹಿರಿಯ ಅಧಿಕಾರಿಗಳ ತಂಡ ಮನೆಗೆ ಭೇಟಿ ನೀಡಲಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಮೂಲಕ ತನಿಖೆ ನಡೆಸಿ ಮೃತರ ವಾರಸುದಾರರಿಗೆ 5.00 ಲಕ್ಷ ರೂ. ಪರಿಹಾರ ಧನ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಸೌಲಭ್ಯಗಳನ್ನು ಕಂದಾಯ ಇಲಾಖೆ ವತಿಯಿಂದ ಒದಗಿಸಲಾಗುತ್ತಿದೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಇಲಾಖೆಯ ಎಲ್ಲಾ ತರಬೇತಿಗಳಲ್ಲೂ ವಿಶೇಷ ಅರಿವು ಮೂಡಿಸಲಾಗುತ್ತಿದೆ.
ಸರ್ಕಾರದ ಈ ಎಲ್ಲಾ ಯೋಜನೆಗಳ ಲಾಭ ಪಡೆಯಲು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (RKK) ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೃಷಿ ನಿರ್ದೇಶಕರು (ಬೆಳೆ ಅಭಿವೃದ್ಧಿ ಮತ್ತು ಯೋಜನೆ) ಕೋರಿದ್ದಾರೆ.









