ಚಂಬಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರವಾಸಿಗರು ಪ್ರಯಾಣಿಸುತ್ತಿದ್ದ ಬೊಲೆರೊ ಕಾರೊಂದು ಸುಮಾರು 500 ಮೀಟರ್ ಆಳದ ಕಂದಕಕ್ಕೆ ಬಿದ್ದು ಎಂಟು ಜನರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ವೈರಾಗಢ್-ಸಚ್ ಪಾಸ್-ಕಿಲ್ಲರ್ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಆದರೆ, ಶನಿವಾರ ಸಂಜೆ ವೇಳೆಗೆ ಸ್ಥಳೀಯರಿಗೆ ವಿಷಯ ತಿಳಿದುಬಂದ ಹಿನ್ನೆಲೆಯಲ್ಲಿ ಈ ದುರಂತ ತಡವಾಗಿ ಬೆಳಕಿಗೆ ಬಂದಿದೆ.
ಚಂಬಾದ ಚುರಾಹ್ ವಿಧಾನಸಭಾ ಕ್ಷೇತ್ರದ ಭಾಜಪಾ ಶಾಸಕ ಹಂಸರಾಜ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, “ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಕಂದಕವು ಅತ್ಯಂತ ಆಳವಾಗಿರುವುದು ಮತ್ತು ಹವಾಮಾನ ವೈಪರೀತ್ಯದಿಂದಾಗಿ ಅಪಘಾತ ನಡೆದು ೪೦ ಗಂಟೆಗಳಾಗುತ್ತ ಬಂದರೂ ಶವಗಳನ್ನು ಹೊರತೆಗೆಯಲು ಸಾಧ್ಯವಾಗಿಲ್ಲ,” ಎಂದು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.
ಕೊಲ್ಕತ್ತಾ ಮತ್ತು ಬೆಂಗಳೂರಿನಿಂದ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಬಂದಿದ್ದ ಇಬ್ಬರು ಮಕ್ಕಳು ಸೇರಿದಂತೆ ಎಂಟು ಪ್ರವಾಸಿಗರು ಮತ್ತು ಒಬ್ಬ ಟ್ಯಾಕ್ಸಿ ಚಾಲಕ ನಾಪತ್ತೆಯಾಗಿದ್ದರು. ಶುಕ್ರವಾರ ಇವರೆಲ್ಲರೂ ಡಾಲ್ಹೌಸಿಯಿಂದ ಹಿಮ ವೀಕ್ಷಿಸಲು ತೆರಳಿದ್ದರು. ಆದರೆ ತಡರಾತ್ರಿಯ ನಂತರ ಇವರ ಮೊಬೈಲ್ಗಳು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದರು.
ಟ್ಯಾಕ್ಸಿ ನಿಗದಿತ ಸಮಯಕ್ಕೆ ಡಾಲ್ಹೌಸಿಗೆ ಹಿಂತಿರುಗದಿದ್ದಾಗ, ಕಾರಿನ ಮಾಲೀಕರು ವಾಹನದಲ್ಲಿದ್ದ ಜಿಪಿಎಸ್ (GPS) ಮೂಲಕ ಟ್ರ್ಯಾಕ್ ಮಾಡಿದ್ದಾರೆ. ಆಗ ಬೊಲೆರೊ ಕಾರು ಕಾಲಾಬನ್ ಬಳಿ ಒಂದೇ ಸ್ಥಳದಲ್ಲಿ ನಿಂತಿರುವುದು ಮತ್ತು ಯಾವುದೇ ಮೂವ್ಮೆಂಟ್ ಇಲ್ಲದಿರುವುದು ಪತ್ತೆಯಾಗಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತದನಂತರ ನಡೆಸಿದ ಹುಡುಕಾಟದಲ್ಲಿ ಕಾರು ಕಂದಕಕ್ಕೆ ಬಿದ್ದಿರುವುದು ಖಚಿತವಾಗಿದೆ. ಚಂಬಾ ಎಸ್ಪಿ ವಿಜಯ್ ಸಕ್ಲಾನಿ ಅವರು ಅಪಘಾತವನ್ನು ದೃಢಪಡಿಸಿದ್ದು, ಘಟನೆಗೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಪಘಾತ ನಡೆದಿರುವ ಸ್ಥಳವು ಹಿಮಾಚಲ ಪ್ರದೇಶದ ಅತ್ಯಂತ ಕಠಿಣ ಮತ್ತು ದುರ್ಗಮ ಪ್ರದೇಶವಾಗಿದೆ. ಇಲ್ಲಿನ ‘ಸಚ್ ಪಾಸ್’ ವರ್ಷದ 12 ತಿಂಗಳುಗಳಲ್ಲಿ 8 ತಿಂಗಳು ಹಿಮಪಾತದಿಂದಾಗಿ ಮುಚ್ಚಿರುತ್ತದೆ. ಕೇವಲ ಬೇಸಿಗೆಯಲ್ಲಿ ಮಾತ್ರ ಇದನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗುತ್ತದೆ. ಇತ್ತೀಚೆಗಷ್ಟೇ ಈ ಮಾರ್ಗವನ್ನು ಮುಕ್ತಗೊಳಿಸಲಾಗಿತ್ತು. ಕಡಿದಾದ ರಸ್ತೆ, ದಟ್ಟ ಮುಸುಕಿನ ವಾತಾವರಣ ಮತ್ತು ಮೊಬೈಲ್ ನೆಟ್ವರ್ಕ್ ಇಲ್ಲದಿರುವುದು ಸದ್ಯ ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.








