ಬೆಂಗಳೂರು: ನೀವು ಬಾಡಿಗೆ ಮನೆಯಲ್ಲಿದ್ದೀರಾ ಅಥವಾ ಆಫೀಸ್ಗೆಂದು ಬಿಲ್ಡಿಂಗ್ ಬಾಡಿಗೆಗೆ ಪಡೆದಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಅತ್ಯಂತ ನಿರಾಳ ತರುವಂತಹ ಸುದ್ದಿ ಇಲ್ಲಿದೆ. ಬಿಲ್ಡಿಂಗ್ ಅಥವಾ ಆಸ್ತಿಯ ಒಡೆಯ ಬ್ಯಾಂಕ್ನಲ್ಲಿ ಲೋನ್ ಮಾಡಿ ಸುಸ್ತಿದಾರನಾದರೆ, ಅದಕ್ಕೆ ಅಲ್ಲಿರುವ ಬಾಡಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲು ಬರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಷ್ಟೇ ಅಲ್ಲ, ಬ್ಯಾಂಕ್ ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಾಡಿಗೆದಾರರು ಸಾಲದ ಮೊತ್ತದ ಶೇ. 50 ರಷ್ಟು ಹಣವನ್ನು ಮುಂಗಡವಾಗಿ ಠೇವಣಿ ಇಡಬೇಕು ಎನ್ನುವ ನಿಯಮ ಕಡ್ಡಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಆಸ್ತಿ ಮಾಲೀಕರು ಬ್ಯಾಂಕ್ ಲೋನ್ ಕಟ್ದೇ ಹೋದಾಗ, ಬ್ಯಾಂಕುಗಳು ಸಾಲ ವಸೂಲಾತಿ ನ್ಯಾಯಾಧಿಕರಣದ (DRT) ಮೂಲಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗುತ್ತವೆ. ಇಂತಹ ಸಂದರ್ಭದಲ್ಲಿ ಅಲ್ಲಿರುವ ಬಾಡಿಗೆದಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಡಿಆರ್ಟಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕಾದರೆ, ಒಟ್ಟು ಸಾಲದ ಅರ್ಧದಷ್ಟು (50%) ಹಣವನ್ನು ಠೇವಣಿ ಇಡಬೇಕು ಎಂಬ ನಿಯಮ ಬಾಡಿಗೆದಾರರಿಗೆ ದೊಡ್ಡ ತಲೆನೋವಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ವಿಭಾಗೀಯ ಪೀಠ, ಬಾಡಿಗೆದಾರರನ್ನು ಯಾವುದೇ ಕಾರಣಕ್ಕೂ ‘ಸಾಲಗಾರರು’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಮಾಲೀಕನ ಸಾಲದ ಹೊರೆಯನ್ನು ಬಾಡಿಗೆದಾರರ ಮೇಲೆ ಹೊರಿಸುವುದು ತಾರತಮ್ಯ ಮತ್ತು ಅನ್ಯಾಯ ಎಂದು ಗುಡುಗಿದೆ.
ಬ್ಯಾಂಕಿಂಗ್ ವಲಯದ ‘ಸರ್ಫೇಸಿ’ (SARFAESI) ಕಾಯ್ದೆಯ ಸೆಕ್ಷನ್ 18 ರ ಅಡಿಯಲ್ಲಿ ‘ಸಾಲಗಾರ’ ಮತ್ತು ‘ಸಾಲಗಾರನಲ್ಲದ ಮೂರನೇ ವ್ಯಕ್ತಿ’ ಇಬ್ಬರನ್ನೂ ಪ್ರತ್ಯೇಕವಾಗಿ ನೋಡಲಾಗಿದೆ. ಮುಂಗಡವಾಗಿ ಶೇ. 50 ರಷ್ಟು ಹಣವನ್ನು ಡಿಪಾಸಿಟ್ ಮಾಡಬೇಕಿರುವುದು ಕೇವಲ ಅಸಲಿ ‘ಸಾಲಗಾರನಿಗೆ’ ಮಾತ್ರ ಅನ್ವಯಿಸುತ್ತದೆ. ಆಸ್ತಿಯಲ್ಲಿ ಬಾಡಿಗೆಗೆ ಇರುವ ಮೂರನೇ ವ್ಯಕ್ತಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಕಾನೂನಿನ ಸೂಕ್ಷ್ಮತೆಯನ್ನು ಬಿಚ್ಚಿಟ್ಟಿದೆ.
ಪ್ರಕರಣದ ಹಿನ್ನೆಲೆ ಏನು?
ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ‘ಕಾನುಲೆಟ್-1’ ಕಟ್ಟಡದ ಮಾಲೀಕರಾದ ಉತ್ತಮ ಚಂದಾನಿ ಎಂಬುವವರು ಮುಂಬೈನ ‘ಭಾರತ್ ಕೋ-ಆಪರೇಟಿವ್ ಬ್ಯಾಂಕ್’ನಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದರು. ಆದರೆ ಅವರು ಸಾಲ ಮರುಪಾವತಿ ಮಾಡಲು ವಿಫಲರಾಗಿದ್ದರು. ಇದರಿಂದಾಗಿ ಬ್ಯಾಂಕ್ ಇಡೀ ಬಿಲ್ಡಿಂಗ್ ಅನ್ನು ತನ್ನ ಸ್ವಾಧೀನಕ್ಕೆ ಪಡೆದು, ಅಲ್ಲಿ ಆಫೀಸ್ ಹೊಂದಿದ್ದ ಕಂಪನಿಯನ್ನು ಖಾಲಿ ಮಾಡಿಸಲು ಮುಂದಾಗಿತ್ತು.
ಇದೇ ಬಿಲ್ಡಿಂಗ್ನ 4ನೇ ಮಹಡಿಯಲ್ಲಿ 2001 ರಿಂದ ‘ಇಕ್ವಿಟಿಯಂ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿ ಬಾಡಿಗೆಗಿತ್ತು. ಬ್ಯಾಂಕ್ ನ ಈ ಕ್ರಮವನ್ನು ಪ್ರಶ್ನಿಸಿ ಕಂಪನಿಯು ಸಾಲ ವಸೂಲಾತಿ ನ್ಯಾಯಾಧಿಕರಣದ (DRT) ಮೊರೆ ಹೋಗಿತ್ತು. ಆದರೆ ಅಲ್ಲಿ ಅರ್ಜಿ ವಜಾಗೊಂಡಾಗ, ಚೆನ್ನೈನ ಮೇಲ್ಮನವಿ ನ್ಯಾಯಾಧಿಕರಣಕ್ಕೆ (DRAT) ಅಪೀಲು ಹೋಗಿತ್ತು. ಅಲ್ಲಿ ನಿಯಮಗಳ ಪ್ರಕಾರ ಶೇ. 50 ರಷ್ಟು ಹಣವನ್ನು ಮುಂಗಡವಾಗಿ ಜಮಾ ಮಾಡುವಂತೆ ಸೂಚಿಸಿ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಸ್ತುತ ಹೈಕೋರ್ಟ್ ಕಂಪನಿಯ ಪರವಾಗಿ ಮಹತ್ವದ ತೀರ್ಪು ನೀಡಿದೆ.








