ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೈಲಿಗಲ್ಲಾಗಬಲ್ಲ ಅತ್ಯಂತ ಮಹತ್ವದ ಆದೇಶವೊಂದನ್ನು ಸುಪ್ರೀಂಕೋರ್ಟ್ ಹೊರಡಿಸಿದೆ. ಯಾವುದೇ ಪ್ರಕರಣದ ವಿಚಾರಣೆ ಮುಗಿದು ತೀರ್ಪನ್ನು ಕಾಯ್ದಿರಿಸಿದರೆ, ಕೇವಲ 3 ತಿಂಗಳ ಒಳಗಾಗಿ ಹೈಕೋರ್ಟ್ಗಳು ಅಂತಿಮ ತೀರ್ಪನ್ನು ಪ್ರಕಟಿಸುವುದು ಇನ್ಮುಂದೆ ಕಡ್ಡಾಯವಾಗಲಿದೆ.
ವಿಚಾರಣೆ ಮುಗಿದರೂ ವರ್ಷಗಟ್ಟಲೆ ತೀರ್ಪು ಬಾರದೆ ಕೋರ್ಟ್ ಮೆಟ್ಟಿಲು ಹತ್ತಿ ಸುಸ್ತಾಗುತ್ತಿದ್ದ ಜನಸಾಮಾನ್ಯರಿಗೆ ಈ ಆದೇಶ ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಜಸ್ಟಿಸ್ ಸೂರ್ಯಕಾಂತ್, ಜಸ್ಟಿಸ್ ದೀಪಂಕರ್ ದತ್ತಾ ಹಾಗೂ ಜಸ್ಟಿಸ್ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ಈ ಐತಿಹಾಸಿಕ ಆದೇಶ ನೀಡಿದೆ.
ತೀರ್ಪು ನೀಡುವಲ್ಲಿ ವಿಳಂಬ ಮಾಡುವುದು ಕಕ್ಷಿದಾರರಿಗೆ ತುಂಬಲಾರದ ನಷ್ಟ ಉಂಟುಮಾಡುತ್ತದೆ. ಅದರಲ್ಲೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತಡ ಮಾಡದೆ ತಕ್ಷಣವೇ ತೀರ್ಮಾನ ಕೈಗೊಳ್ಳುವುದು ಅತ್ಯಗತ್ಯ” ಎಂದು ಸುಪ್ರೀಂಕೋರ್ಟ್ ಗಂಭೀರವಾಗಿ ಹೇಳಿದೆ.
4 ತಿಂಗಳಾದರೂ ತೀರ್ಪು ಬರದಿದ್ದರೆ ಕೇಸ್ ಬೇರೆ ಜಡ್ಜ್ಗೆ ವರ್ಗಾವಣೆ!
ಒಂದು ವೇಳೆ ವಿಚಾರಣೆ ಮುಗಿದು 3 ತಿಂಗಳಾದರೂ ತೀರ್ಪು ಹೊರಬೀಳದಿದ್ದರೆ, ಆಯಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು. 4 ತಿಂಗಳಾದರೂ ಆದೇಶ ಬಾರದಿದ್ದಲ್ಲಿ ಕಕ್ಷಿದಾರರು ಹೈಕೋರ್ಟ್ ಸಿಜೆ ಅವರಿಗೆ ಅರ್ಜಿ ಸಲ್ಲಿಸಬಹುದು. ಆಗ ಆ ಪ್ರಕರಣವನ್ನು ಹಾಲಿ ಇರುವ ನ್ಯಾಯಾಧೀಶರಿಂದ ಹಿಂಪಡೆದು, ವಿಚಾರಣೆಗಾಗಿ ಮತ್ತೊಂದು ಪೀಠಕ್ಕೆ ವರ್ಗಾಯಿಸಲಾಗುತ್ತದೆ.
ಜಾಮಿನು ಅರ್ಜಿಗೆ ಒಂದೇ ದಿನದಲ್ಲಿ ನಿರ್ಧಾರ!
ಬೇಲ್ ಅಥವಾ ಜಾಮಿನು ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ನಿಯಮ ರೂಪಿಸಿದೆ. ಆರೋಪಿಗಳ ಜಾಮಿನು ಅರ್ಜಿಗಳ ವಿಚಾರಣೆ ಮುಗಿದ ತಕ್ಷಣ, ಸಾಧ್ಯವಾದರೆ ಅದೇ ದಿನವೇ ತೀರ್ಪನ್ನು ಪ್ರಕಟಿಸಬೇಕು. ಒಂದು ವೇಳೆ ಆರ್ಡರ್ ಕಾಯ್ದಿರಿಸಿದರೆ, ಮರುದಿನವೇ ಅದನ್ನು ಕಡ್ಡಾಯವಾಗಿ ಪ್ರಕಟಿಸಬೇಕಾಗುತ್ತದೆ.
ಹೊಸ ಮಾರ್ಗಸೂಚಿಗಳು ಏನೇನು ಹೇಳುತ್ತವೆ? (New Guidelines for High Courts)
3 ತಿಂಗಳ ಗಡುವು: ತೀರ್ಪು ಕಾಯ್ದಿರಿಸಿದ ಮೂರು ತಿಂಗಳೊಳಗೆ ಎಲ್ಲಾ ಹೈಕೋರ್ಟ್ಗಳು ಅಂತಿಮ ಆದೇಶ ಪ್ರಕಟಿಸುವುದು ಕಡ್ಡಾಯ.
ಅದೇ ದಿನ ಬೇಲ್ ತೀರ್ಪು: ಜಾಮಿನು ಅರ್ಜಿಗಳ ವಿಚಾರಣೆ ಮುಗಿದ ದಿನವೇ ಆದೇಶ ನೀಡಲು ಆದ್ಯತೆ ನೀಡಬೇಕು. ತೀರಾ ಅನಿವಾರ್ಯವಾದರೆ ಮರುದಿನವೇ ಪ್ರಕಟಿಸಬೇಕು.
ತಕ್ಷಣವೇ ಬಿಡುಗಡೆ: ಜಾಮಿನು ಆದೇಶದ ಪ್ರತಿ ಸಿಕ್ಕ ತಕ್ಷಣ ಅಥವಾ ಗರಿಷ್ಠ 24 ಗಂಟೆಗಳ ಒಳಗೆ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಬೇಕು.
24 ಗಂಟೆಯಲ್ಲಿ ವೆಬ್ಸೈಟ್ಗೆ ಅಪ್ಲೋಡ್: ತೀರ್ಪು ಪ್ರಕಟವಾದ 24 ಗಂಟೆಗಳ ಒಳಗಾಗಿ ಅದರ ಪ್ರತಿಯನ್ನು ಕೋರ್ಟ್ನ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯ.
SMS ಅಲರ್ಟ್: ವೆಬ್ಸೈಟ್ಗೆ ತೀರ್ಪಿನ ಪ್ರತಿ ಅಪ್ಲೋಡ್ ಆದ ಬೆನ್ನಲ್ಲೇ ಸಂಬಂಧಪಟ್ಟವರಿಗೆ SMS ಮೂಲಕ ಮಾಹಿತಿ ರವಾನಿಸಬೇಕು.
ಪೂರ್ಣ ವಿವರಕ್ಕೆ 15 ದಿನ: ಕೇವಲ ಮುಖ್ಯ ಭಾಗವನ್ನು ಮಾತ್ರ ಕೋರ್ಟ್ನಲ್ಲಿ ಪ್ರಕಟಿಸಿದರೆ, ಮುಂದಿನ 15 ದಿನಗಳ ಒಳಗಾಗಿ ಅದರ ಸಂಪೂರ್ಣ ವಿವರವಾದ ತೀರ್ಪನ್ನು ನೀಡಬೇಕು. ಒಟ್ಟಾರೆಯಾಗಿ, “ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಿಸಿದಂತೆ” ಎಂಬ ಮಾತಿಗೆ ಪೂರಕವಾಗಿ ಸುಪ್ರೀಂಕೋರ್ಟ್ ಈ ಅದ್ಭುತ ಕ್ರಮ ಕೈಗೊಂಡಿದ್ದು, ದೇಶದ ಕಾನೂನು ಇತಿಹಾಸದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.








