ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಲಿಂಡರ್ಗಾಗಿ ಸಾರ್ವಜನಿಕರು ಹಾಗೂ ಮಹಿಳೆಯರು ಕಳೆದ ಎರಡು ಹಗಲು ಮತ್ತು ಎರಡು ರಾತ್ರಿಗಳಿಂದ ಗ್ಯಾಸ್ ಏಜೆನ್ಸಿ ಮುಂದೆ ಸಾಲುಗಟ್ಟಿ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಗ್ಯಾಸ್ ಸರಬರಾಜು ಸಂಪೂರ್ಣ ವ್ಯತ್ಯಯಗೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಪೆ, ದಿಂಬು ಹಿಡಿದು ಫುಟ್ಪಾತ್ನಲ್ಲೇ ವಾಸ್ತವ್ಯ!
ಗ್ಯಾಸ್ ಸಿಲಿಂಡರ್ ಪಡೆಯಲು ಗ್ರಾಮಸ್ಥರು ಪಡುತ್ತಿರುವ ಪಾಡು ನಿಜಕ್ಕೂ ಮರುಕ ಹುಟ್ಟಿಸುವಂತಿದೆ. ಸಿಲಿಂಡರ್ ಖಾಲಿಯಾಗಿ ಮನೆಯಲ್ಲಿ ಒಲೆ ಉರಿಯದ ಕಾರಣ, ಗ್ರಾಮಸ್ಥರು ಅನಿವಾರ್ಯವಾಗಿ ತಮ್ಮ ಮನೆಗಳಿಂದ ಚಾಪೆ, ದಿಂಬು, ಚಾದರ್ ಹಾಗೂ ಖಾಲಿ ಸಿಲಿಂಡರ್ಗಳನ್ನು ಹಿಡಿದುಕೊಂಡು ಗ್ಯಾಸ್ ಏಜೆನ್ಸಿ ಎದುರು ಜಮಾಯಿಸುತ್ತಿದ್ದಾರೆ. ಹಗಲಿಡೀ ಬಿಸಿಲಿನಲ್ಲಿ ಕಾಯುವ ಸಾರ್ವಜನಿಕರು, ರಾತ್ರಿಯಾಗುತ್ತಿದ್ದಂತೆ ಏಜೆನ್ಸಿ ಅಂಗಡಿಯ ಮುಂಭಾಗದ ಫುಟ್ಪಾತ್ ಹಾಗೂ ರಸ್ತೆ ಬದಿಯಲ್ಲೇ ಮಲಗಿ ರಾತ್ರಿ ಕಳೆಯುತ್ತಿದ್ದಾರೆ.
“ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಗ್ಯಾಸ್ ಸಿಗುತ್ತಿಲ್ಲ. ತಡವಾಗಿ ಬಂದರೆ ಸಿಲಿಂಡರ್ ಸಿಗುವುದಿಲ್ಲ ಎಂಬ ಭೀತಿಯಿಂದಾಗಿ ನಾವು ರಾತ್ರಿಯಿಡೀ ಅಂಗಡಿ ಮುಂದೆಯೇ ಮಲಗುತ್ತಿದ್ದೇವೆ. ಆದರೂ ನಮಗೆ ಗ್ಯಾಸ್ ಸಿಗುತ್ತಿಲ್ಲ” ಎಂದು ಸ್ಥಳೀಯ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ಗ್ರಾಮದಲ್ಲಿ ಎದುರಾಗಿರುವ ಈ ಗಂಭೀರ ಸಮಸ್ಯೆಯ ಕುರಿತು ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಹಲವು ಬಾರಿ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಧಿಕಾರಿಗಳ ಈ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದ ವಿರುದ್ಧ ಸಾಲಗುಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣವೇ ಗ್ಯಾಸ್ ಏಜೆನ್ಸಿಗೆ ಅಗತ್ಯವಿರುವಷ್ಟು ಸಿಲಿಂಡರ್ ಪೂರೈಕೆ ಮಾಡಿ ಸಾರ್ವಜನಿಕರ ಸಂಕಷ್ಟವನ್ನು ದೂರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮೇ.27ರಂದು ಬೆಂಗಳೂರಿನಲ್ಲಿ ದೇಶದ ಪ್ರಥಮ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜನೆ








