ಬೆಂಗಳೂರು: ದ್ವಿತೀಯ ಪಿಯುಸಿ ಮುಗಿಸಿ ಮುಂದಿನ ಉನ್ನತ ಶಿಕ್ಷಣಕ್ಕೆ ದಾಖಲಾಗಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಕಾಲೇಜುಗಳಿಗೆ ಅಲೆದು ವರ್ಗಾವಣೆ ಪ್ರಮಾಣ ಪತ್ರ (Transfer Certificate – TC) ಪಡೆಯುವ ಕಿರಿಕಿರಿ ಇರುವುದಿಲ್ಲ. ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಕೇವಲ ಫಲಿತಾಂಶದ ದತ್ತಾಂಶದ (Result Data) ಆಧಾರದ ಮೇಲೆ ನೇರವಾಗಿ ಡಿಜಿಲಾಕರ್ (DigiLocker) ಮೂಲಕ ಕ್ಯೂಆರ್ ಕೋಡ್ (QR Code) ಹೊಂದಿರುವ “ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ” ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಈ ಹೊಸ ವ್ಯವಸ್ಥೆಯು ಪ್ರಸಕ್ತ ಸಾಲಿನಿಂದಲೇ ಪ್ರಾಯೋಗಿಕವಾಗಿ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಜಾರಿಗೆ ಬರಲಿದೆ.
ಈ ನೂತನ ವ್ಯವಸ್ಥೆಯ ಪ್ರಮುಖ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳು:
ಸ್ವಯಂಚಾಲಿತ ಟಿಸಿ (Automation): ಇನ್ಮುಂದೆ ಹಸ್ತಚಾಲಿತ (Manual) ಟಿಸಿಗಳ ಬದಲಾಗಿ, ಮಂಡಳಿಯ ಫಲಿತಾಂಶದ ದತ್ತಾಂಶವನ್ನು ಬಳಸಿಕೊಂಡು ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ಡಿಜಿಟಲ್ ಟಿಸಿ ಸೃಜನೆಯಾಗಲಿದೆ.
ಶೈಕ್ಷಣಿಕ ದಾಖಲೆಗಳ ಜೋಡಣೆ: ಡಿಜಿಟಲ್ ಟಿಸಿಯಲ್ಲಿ ವಿದ್ಯಾರ್ಥಿಯ SATS ಸಂಖ್ಯೆಯ ಜೊತೆಗೆ “ಪರೀಕ್ಷಾ ನೋಂದಣಿ ಸಂಖ್ಯೆ” ಮತ್ತು “ಅಪಾರ್ ಐಡಿ” (APAAR ID) ಯನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.
ನಡತೆ ಪ್ರಮಾಣ ಪತ್ರದ ಆಟೋಮೇಷನ್: ಪ್ರಾಂಶುಪಾಲರು ನಿಗದಿತ ದಿನಾಂಕದೊಳಗೆ SATS ನಲ್ಲಿ ವಿದ್ಯಾರ್ಥಿಯ ನಡತೆಯ ಬಗ್ಗೆ ಯಾವುದೇ ನಮೂದು ಮಾಡದಿದ್ದರೆ, ತಂತ್ರಾಂಶವೇ ಸ್ವಯಂಚಾಲಿತವಾಗಿ ನಡತೆಯನ್ನು “ಉತ್ತಮ” (Good) ಎಂದು ಮುದ್ರಿಸುತ್ತದೆ.
ಕ್ಷೇತ್ರ ಪರಿಷ್ಕರಣೆ (Field Rationalization): ಹಳೆಯ ಮಾದರಿಯಲ್ಲಿದ್ದ ಅನಗತ್ಯ ಕಾಲಂಗಳನ್ನು (ಉದಾಹರಣೆಗೆ: ಶುಲ್ಕ ಬಾಕಿ, ವಿದ್ಯಾರ್ಥಿ ವೇತನ, ಹಾಜರಾತಿ ಲೆಕ್ಕಾಚಾರ ಇತ್ಯಾದಿ) ಹೊಸ ಡಿಜಿಟಲ್ ಟಿformat ನಿಂದ ಕೈಬಿಡಲಾಗಿದೆ.
ಮೊದಲ ಹಂತದಲ್ಲಿ ಯಾರಿಗೆ ಅನ್ವಯ?: ಈ ಸೌಲಭ್ಯವು ಸದ್ಯಕ್ಕೆ ಪ್ರಥಮ ಹಂತದಲ್ಲಿ ಕೇವಲ ದ್ವಿತೀಯ ಪಿಯುಸಿ “ಉತ್ತೀರ್ಣರಾದ ಫ್ರೆಶರ್ಸ್” (Passed Freshers) ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರಲಿದೆ. ಮಧ್ಯಂತರವಾಗಿ ಟಿಸಿ ಬೇಕಾದಲ್ಲಿ ಹಳೆಯ ಪದ್ಧತಿಯನ್ನೇ ಅನುಸರಿಸಬೇಕಾಗುತ್ತದೆ.
ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆಗುವ ಲಾಭಗಳೇನು?
1. ನಕಲಿ ದಾಖಲೆಗಳಿಗೆ ಬ್ರೇಕ್: ಡಿಜಿಟಲ್ ಟಿಸಿಗಳು ಕ್ಯೂಆರ್ ಕೋಡ್ (QR Code) ಹೊಂದಿರುವುದರಿಂದ, ವಿಶ್ವವಿದ್ಯಾಲಯಗಳು ಮತ್ತು ಆಧಾರ್ ಕೇಂದ್ರಗಳು ದಾಖಲೆಯ ನೈಜತೆಯನ್ನು ತಕ್ಷಣವೇ ಪರಿಶೀಲಿಸಬಹುದು. ಇದರಿಂದ ನಕಲಿ ಟಿಸಿ ಹಾವಳಿ ತಪ್ಪುತ್ತದೆ.
2. ಸುಲಭ ಆಡಳಿತ ಪ್ರಕ್ರಿಯೆ: ಉನ್ನತ ಶಿಕ್ಷಣದ ಪ್ರವೇಶಾತಿಗೆ ವಿದ್ಯಾರ್ಥಿಯ ‘ತೇರ್ಗಡೆ ಸ್ಥಿತಿ’ ಮತ್ತು ‘ಗುರುತು’ ಮುಖ್ಯವೇ ಹೊರತು ಕಾಲೇಜಿನ ಆಂತರಿಕ ಲೆಕ್ಕಪತ್ರಗಳಲ್ಲ. ಅನಗತ್ಯ ಕಾಲಂಗಳನ್ನು ತೆಗೆದುಹಾಕಿರುವುದರಿಂದ ಪ್ರವೇಶಾತಿ ಪ್ರಕ್ರಿಯೆ ಸರಳವಾಗುತ್ತದೆ.
3. ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆ: ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳು ಡಿಜಿಲಾಕರ್ನಲ್ಲಿ ಟಿಸಿ ಪಡೆಯಬಹುದು. ಭೌತಿಕ ಸಹಿಗಾಗಿ ಕಾಲೇಜುಗಳಿಗೆ ಅಲೆಯುವುದು ಮತ್ತು ಕಾಯುವುದು ಸಂಪೂರ್ಣವಾಗಿ ತಪ್ಪುತ್ತದೆ. ಈ ಡಿಜಿಟಲ್ ಟಿಸಿಗೆ ಪ್ರಾಂಶುಪಾಲರ ಭೌತಿಕ ಸಹಿಯ ಅಗತ್ಯವಿರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ UIDIC ಸಭೆಯ ನಿರ್ಧಾರದಂತೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಪದವಿ ಪೂರ್ವ ಶಿಕ್ಷಣ) ಈ ಮಹತ್ವದ ಸುಧಾರಣಾ ಆದೇಶವನ್ನು (ಆದೇಶ ಸಂಖ್ಯೆ: ಇಪಿ 36 ಎಸ್ ಹೆಚ್ ಹೆಚ್ 2026) ಪ್ರಕಟಿಸಿದೆ. ಉನ್ನತ ಶಿಕ್ಷಣ ಪ್ರವೇಶಾತಿಯನ್ನು ಇನ್ನಷ್ಟು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ಇದು ಸರ್ಕಾರದ ಅತ್ಯಂತ ಪ್ರಗತಿಪರ ಹೆಜ್ಜೆಯಾಗಿದೆ.










