ಬೀದರ್: ಜಿಲ್ಲೆಯ ಪ್ರತಿಷ್ಠಿತ ಬ್ರಿಮ್ಸ್ (BRIMS) ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ತಲ್ಲಣ ಉಂಟುಮಾಡುವ ಘಟನೆಯೊಂದು ನಡೆದಿದೆ. ಸಾರ್ವಜನಿಕರಿಗೆ ಜೀವ ನೀಡುವ ವೈದ್ಯರ ಮೇಲೆಯೇ ಕಿಡಿಗೇಡಿಗಳ ಗುಂಪೊಂದು ಧಾಂದಲೆ ನಡೆಸಿ, ಮನಸೋಇಚ್ಛೆ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ತಡರಾತ್ರಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಡಾ. ತುಕಾರಾಂ ಅವರು ಗಾಯಾಳಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಚಿಕಿತ್ಸೆ ನೀಡುವ ವಿಚಾರದಲ್ಲಿ ರೋಗಿ ಜೊತೆ ಬಂದಿದ್ದ ಯುವಕರ ಗುಂಪು ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದಿದೆ.
ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ನಾಲ್ಕೈದು ಜನರಿದ್ದ ಯುವಕರ ದಂಡು ಡಾ. ತುಕಾರಾಂ ಅವರ ಮೇಲೆ ಮುಗಿಬಿದ್ದಿದೆ. ತೀರ ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರನ್ನು ಹಿಗ್ಗಾಮುಗ್ಗಾ ಥಳಿಸಿ ಆಸ್ಪತ್ರೆಯ ಆವರಣದಲ್ಲೇ ರಂಪಾಟ ಸೃಷ್ಟಿಸಿದ್ದಾರೆ.
ಕಿಡಿಗೇಡಿಗಳ ವರ್ತನೆಯಿಂದ ತೀವ್ರವಾಗಿ ಗಾಯಗೊಂಡಿರುವ ಡಾ. ತುಕಾರಾಂ ಅವರು ಸದ್ಯ ಅದೇ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣೆ ನೀಡಬೇಕಾದ ಆಸ್ಪತ್ರೆಯಲ್ಲೇ ವೈದ್ಯರ ಮೇಲೆ ನಡೆದಿರುವ ಈ ಹಲ್ಲೆ ಸಹೋದ್ಯೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪುಂಡಾಟಿಕೆಗೆ ಸಂಬಂಧಿಸಿದಂತೆ ಬೀದರ್ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.








