ನ್ಯಾಯಮೂರ್ತಿಗಳಾದ ಸಿ.ವಿ. ಕಾರ್ತಿಕೇಯನ್ ಮತ್ತು ಕೆ. ರಾಜಶೇಖರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪನ್ನು ನೀಡಿದೆ.
ಪ್ರಕರಣದ ಹಿನ್ನೆಲೆ: ಈ ದಂಪತಿಗೆ 1997 ರಲ್ಲಿ ವಿವಾಹವಾಗಿತ್ತು ಹಾಗೂ ಇವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಇತ್ತೀಚೆಗೆ ಪತ್ನಿಯು ತನ್ನ 18 ವರ್ಷದ ಮಗಳನ್ನು ತಂದೆಗೆ (ಪತಿಗೆ) ಮತ್ತು ಮಗನಿಗೆ ತಿಳಿಸದೆಯೇ ಬೆಂಗಳೂರಿಗೆ ಕರೆದುಕೊಂಡು ಹೋಗಿ, ತನ್ನದೇ ಸಹೋದರನಿಗೆ (ಮಗಳ ಸೋದರಮಾವ) ಮದುವೆ ಮಾಡಿಸಿಕೊಟ್ಟಿದ್ದಾಳೆ. ವಿಶೇಷವೆಂದರೆ, ಆ ಸೋದರಮಾವ 32 ವರ್ಷದ ವಿಚ್ಛೇದಿತನಾಗಿದ್ದು, ಆತನ ಮೊದಲ ಪತ್ನಿ (ಪತಿಯ ಸೋದರಸಂಬಂಧಿ) ಆತನ ವಿರುದ್ಧ ಈ ಹಿಂದೆ ಪೊಲೀಸ್ ದೂರನ್ನೂ ದಾಖಲಿಸಿದ್ದರು.
ಮಗಳ ಮದುವೆಯ ನಂತರ ಮನೆಗೆ ಮರಳಿದ ಪತ್ನಿ, ತಾನು ಮದುವೆ ಮಾಡಿ ಬಂದಿರುವುದಾಗಿ ಪತಿಗೆ ತಿಳಿಸಿದ್ದಾಳೆ. ಇದರಿಂದ ಆಘಾತಕ್ಕೊಳಗಾದ ಪತಿ, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯವು ಪತಿಯ ಅರ್ಜಿಯನ್ನು ವಜಾಗೊಳಿಸಿ, ಪತ್ನಿಯ ಜೊತೆ ಸೇರಿ ಬಾಳುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಾಲಯದ ಪ್ರಮುಖ ಅವಲೋಕನಗಳು:
-
ತಂದೆಯ ಮಾನಸಿಕ ವೇದನೆ: “ಮಗಳ ಮದುವೆಯಾಗುವಾಗ ಒಬ್ಬ ತಂದೆಯಾಗಿ ಆತ ಅನುಭವಿಸಿದ ತೀವ್ರ ಮಾನಸಿಕ ಯಾತನೆ, ನೋವು ಮತ್ತು ಸಂಕಟವನ್ನು ಎಂದಿಗೂ ಸರಿದೂಗಿಸಲು ಸಾಧ್ಯವಿಲ್ಲ. ಮಗಳು ಮತ್ತು ಪತ್ನಿ ಎಲ್ಲಿಗೆ ಹೋಗಿದ್ದಾರೆ ಎಂಬುದೇ ತಂದೆಗೆ ತಿಳಿದಿರಲಿಲ್ಲ. ಮದುವೆಯಾದ ನಂತರ ತಂದೆಯಾದವನು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾನೆ,” ಎಂದು ನ್ಯಾಯಾಲಯ ಹೇಳಿದೆ.
-
ಮಗಳ ಹಿತಾಸಕ್ತಿಗಿಂತ ತಂದೆಯ ನೋವು ಮುಖ್ಯ: ಮಗಳು ಮತ್ತು ಆಕೆಯ ಸೋದರಮಾವ ಈಗಾಗಲೇ ಪ್ರೀತಿಸುತ್ತಿದ್ದರಿಂದ ಮಗಳ ಒಳಿತಿಗಾಗಿಯೇ ಈ ಮದುವೆ ಮಾಡಿಸಲಾಗಿದೆ ಎಂಬ ಪತ್ನಿಯ ವಾದವನ್ನು ಕೋರ್ಟ್ ತಳ್ಳಿಹಾಕಿದೆ. “ಇಲ್ಲಿ ಮಗಳ ಕಲ್ಯಾಣ ಮುಖ್ಯವಲ್ಲ, ಬದಲಿಗೆ 18 ವರ್ಷದ ಮಗಳನ್ನು ಈಗಾಗಲೇ ವಿಚ್ಛೇದನ ಪಡೆದ, ಪೊಲೀಸ್ ಕೇಸ್ ಎದುರಿಸುತ್ತಿರುವ 32 ವರ್ಷದ ವ್ಯಕ್ತಿಗೆ ತಂದೆಯ ಒಪ್ಪಿಗೆಯಿಲ್ಲದೆ ಮದುವೆ ಮಾಡಿಕೊಟ್ಟಾಗ ಆ ತಂದೆ ಅನುಭವಿಸಿದ ಆಘಾತವನ್ನು ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
-
ಸಾರ್ವಜನಿಕವಾಗಿ ನಿಂದನೆ ಮತ್ತು ಸುಳ್ಳು ದೂರು: ಪತ್ನಿಯು ಪತಿಯ ಕಚೇರಿಯ ಉನ್ನತ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ದೂರು ನೀಡಿ ಸಾರ್ವಜನಿಕವಾಗಿ ಆತನ ಘನತೆಗೆ ಧಕ್ಕೆ ತಂದಿರುವುದನ್ನು ಕೋರ್ಟ್ ಗಮನಿಸಿದೆ. ಈ ಎಲ್ಲಾ ನಿರಂತರ ನಡವಳಿಕೆಗಳು ಪತಿಗೆ ಮಾನಸಿಕ ಕ್ರೌರ್ಯ ಎಸಗಿರುವುದನ್ನು ಸಾಬೀತುಪಡಿಸುತ್ತವೆ ಎಂದು ಕೋರ್ಟ್ ಹೇಳಿದೆ.
ಈ ಎಲ್ಲಾ ಕಾರಣಗಳಿಂದಾಗಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್, ಪತಿಗೆ ವಿಚ್ಛೇದನ ಮಂಜೂರು ಮಾಡಿ ತೀರ್ಪು ನೀಡಿದೆ.








