ಮಂಡ್ಯ: ದಿನಬಳಕೆ ವಸ್ತುಗಳ ಅತಿಯಾದ ಬೆಲೆ ಏರಿಕೆ ಹಾಗೂ ಪೆಟ್ರೋಲ್-ಡೀಸೆಲ್ ದರ ಹೆಚ್ಚಳವನ್ನು ಖಂಡಿಸಿ ಕನ್ನಡ ಚಳುವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಮಂಡ್ಯದಲ್ಲಿ ಎತ್ತಿನಗಾಡಿ ಓಡಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ ಪ್ರಮುಖ ರಸ್ತೆಗಳ ಮೂಲಕ ಸಂಜಯ್ ವೃತ್ತದವರೆಗೂ ಕಾರ್ಯಕರ್ತರೊಂದಿಗೆ ಎತ್ತಿನಗಾಡಿ ಮೆರವಣಿಗೆ ನಡೆಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಜನರಿಗೆ ನರಕದ ಪರಿಸ್ಥಿತಿ ಬಂದಿದೆ: ವಾಟಾಳ್ ಆಕ್ರೋಶ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, “ದೇಶದಲ್ಲಿ ಮತ್ತು ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಬೆಲೆಗಳಿಂದಾಗಿ ಸಾಮಾನ್ಯ ಜನರಿಗೆ ಬದುಕು ನರಕಸದೃಶವಾಗಿದೆ. ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ಅಡುಗೆ ಗ್ಯಾಸ್ ಬೆಲೆಯೂ ಗಗನಕ್ಕೇರಿದೆ. ಗ್ಯಾಸ್ ಸಿಗದೆ, ಕೊಳ್ಳಲಾಗದೆ ಬಡ ಜನರು ಊಟ ಮಾಡುವುದಕ್ಕೂ ಪರದಾಡುವಂತಹ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ” ಎಂದು ಧಿಕ್ಕಾರ ಕೂಗಿದರು.
ಸಚಿವರಿಗೆ ಮುತ್ತಿಗೆ ಹಾಗೂ ‘ಕರ್ನಾಟಕ ಬಂದ್’ ಎಚ್ಚರಿಕೆ
ಬೆಲೆ ಏರಿಕೆಯಿಂದ ಜನರು ತತ್ತರಿಸಿಹೋಗಿದ್ದರೂ ರಾಜ್ಯದ ಸಚಿವರು ಮೌನ ವಹಿಸಿರುವುದನ್ನು ವಾಟಾಳ್ ಕಟುವಾಗಿ ಟೀಕಿಸಿದರು. “ಕರ್ನಾಟಕದ ಮಂತ್ರಿಗಳು ತಕ್ಷಣವೇ ಜನರ ಪರವಾಗಿ ನಿಂತು ಬೆಲೆ ಏರಿಕೆ ವಿರುದ್ಧ ಮಾತನಾಡಬೇಕು. ಇಲ್ಲದಿದ್ದರೆ ಅವರಿಗೆ ಮುತ್ತಿಗೆ ಹಾಕಲಾಗುವುದು. ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಇಡೀ ರಾಜ್ಯದ ಜನರ ಹಿತದೃಷ್ಟಿಯಿಂದ ‘ಕರ್ನಾಟಕ ಬಂದ್’ಗೆ ಕರೆ ನೀಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ವಿಷಯ ಮತ್ತು ಪುರಸಭೆ ಮುತ್ತಿಗೆಗೆ ಪ್ಲಾನ್
ಇದೇ ಸಂದರ್ಭದಲ್ಲಿ ಗಡಿ ವಿಷಯದ ಕುರಿತು ಮಾತನಾಡಿದ ಅವರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸರ್ಕಾರ ನಿರ್ಣಯ ಮಾಡುವುದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಈ ದ್ರೋಹವನ್ನು ಸಹಿಸುವುದಿಲ್ಲ ಎಂದ ಅವರು, ಸ್ಥಳೀಯ ಆಡಳಿತದ ವಿಫಲತೆ ಹಾಗೂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಬೃಹತ್ ಹೋರಾಟ ಮಾಡುವುದಾಗಿ ಪ್ರಕಟಿಸಿದರು.
ಹಲವು ನಾಯಕರ ಭಾಗಿ: ಈ ವಿನೂತನ ಎತ್ತಿನಗಾಡಿ ಪ್ರತಿಭಟನಾ ಮೆರವಣಿಗೆಯಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷ ಮಂಜುನಾಥ್, ಪ್ರಮುಖರಾದ ಪಾರ್ಥಸಾರಥಿ ಸೇರಿದಂತೆ ನೂರಾರು ಕನ್ನಡಪರ ಹೋರಾಟಗಾರರು ಮತ್ತು ಕಾರ್ಯಕರ್ತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಂಡ್ಯದ ಗೆಜ್ಜಲಗೆರೆ ಹೋರಾಟ: ರೈತ ಮುಖಂಡರ ಜೊತೆಗೆ ಶಾಸಕ ಕೆ.ಎಂ. ಉದಯ್ ಚರ್ಚೆ
BIG NEWS: 3ನೇ ಮಗುವಿಗೆ ₹30 ಸಾವಿರ, 4ನೇ ಮಗುವಿಗೆ ₹40 ಸಾವಿರ! ಜನಸಂಖ್ಯೆ ಹೆಚ್ಚಿಸಲು ಆಂಧ್ರ ಸಿಎಂ ಬಂಪರ್ ಆಫರ್!








