ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಹೊನ್ನೇಬೈಲು ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗವನ್ನು ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣದ ಮುಖ್ಯ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತನನ್ನು ನಿಟ್ಟೂರು ನಿವಾಸಿ ಸುರೇಶ ಎನ್.ಜಿ. ಬಿನ್ ಗಿಡ್ಡನಾಯ್ಕ (50) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಅರಣ್ಯ ಮೊಕದ್ದಮೆ ಸಂಖ್ಯೆ: 08/2026-27 ರಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಹೊನ್ನೇಬೈಲು ಗ್ರಾಮದ ಸರ್ವೇ ನಂಬರ್ 99ಕ್ಕೆ ಸೇರಿದ ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೆ, ಈ ಪ್ರದೇಶದಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬೀಟೆ ಹಾಗೂ ಇತರೆ ಜಾತಿಯ ಬೆಲೆಬಾಳುವ ಮರಗಳನ್ನು ಬುಡಸಮೇತ ಕಿತ್ತು ಹಾಕಲಾಗಿತ್ತು. ಆರೋಪಿಗಳು ಈ ಮರಗಳನ್ನು ನಾಟ (ಮರಮುಟ್ಟು) ಮತ್ತು ಸೌದೆಯನ್ನಾಗಿ ಪರಿವರ್ತಿಸಿ, ರಹಸ್ಯವಾಗಿ ದಾಸ್ತಾನು ಮಾಡಿ ಅಕ್ರಮ ಸಾಗಾಟಕ್ಕೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ:
ಮೇ 12 ರಂದು ಈ ಅಕ್ರಮದ ದೂರು ದಾಖಲಾದಾಗಿನಿಂದಲೂ ಮುಖ್ಯ ಆರೋಪಿ ಸುರೇಶ ತಲೆಮರೆಸಿಕೊಂಡಿದ್ದನು. ಈ ನಡುವೆ ಮೇ 14 ರಂದು ಆರೋಪಿಯ ಚಲನವಲನದ ಕುರಿತು ಅರಣ್ಯ ಇಲಾಖೆಗೆ ನಿಖರ ಮಾಹಿತಿ ಲಭ್ಯವಾಗಿತ್ತು.
ಸಾಗರ ಡಿಸಿಎಫ್ ಫಯಾಜುದ್ದೀನ್ ಖಡಕ್ ನಿರ್ದೇಶನ
ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಫಯಾಜುದ್ದೀನ್ ಅವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅಂದಹಾಗೇ ಸಾಗರ ತಾಲ್ಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಫಯಾಜುದ್ದೀನ್ ಅಧಿಕಾರ ವಹಿಸಿಕೊಂಡ ನಂತ್ರ, ತಾಲ್ಲೂಕಿನಲ್ಲಿ ಅಕ್ರಮ ಮರ ಕಡಿತಲೆ ವಿರುದ್ಧ ಸಮರವನ್ನೇ ಸಾರಿದ್ದಾರೆ. ಅಲ್ಲದೇ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೂ ಅಕ್ರಮ ತಡೆಗಟ್ಟುವಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ಕಾರ್ಯಾಚರಣೆಯನ್ನು ಹೊಸನಗರ ಆರ್ ಎಫ್ ಓ ಅನಿಲ್ ಕುಮಾರ್, ಡಿ ಆರ್ ಎಫ್ ಓ ಆಂಜನೇಯ, ಚಾಲಕ ಮಹೇಶ್, ವಾಚರ್ ಜಗನ್ನಾಥ್ ಜೊತೆಗೂಡಿ ನಡೆಸಿದ್ದಾರೆ.
ಒಟ್ಟಾರೆಯಾಗಿ ಸರ್ಕಾರಿ ಜಮೀನು ಒತ್ತುವರಿ ಹಾಗೂ ಅರಣ್ಯ ಸಂಪತ್ತಿನ ಲೂಟಿಯಂತಹ ಕೃತ್ಯಗಳ ವಿರುದ್ಧ ಇಲಾಖೆಯು ಕಠಿಣ ಕ್ರಮ ಮುಂದುವರಿಸಲಿದ್ದು, ಇಂತಹ ಅಕ್ರಮಗಳಲ್ಲಿ ಭಾಗಿಯಾಗುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.








