ಬೆಂಗಳೂರು : ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್ ಆಶ್ರಮದ ಬಳಿ ಪ್ರಧಾನಿ ಮೋದಿ ಭೇಟಿ ನೀಡಿದ್ದ ಸಂದರ್ಭ ಜಿಲೆಟಿನ್ ಪತ್ತೆಯಾದ ಪ್ರಕರಣಕ್ಕೆ ದ್ವೇಷವೇ ಕಾರಣ ಎಂಬುದು ತಿಳಿದುಬಂದಿದೆ. ಆಶ್ರಮದ ಮೇಲಿನ ದ್ವೇಷದಿಂದ ಕೃತ್ಯ ಎಸಗಲಾಗಿದೆ. ಪ್ರಧಾನಿ ಮೋದಿ ಭೇಟಿ ತಡೆಯಲು ಆಶ್ರಮದ ವಿರೋಧಿಗಳು ಹೂಡಿದ್ದ ತಂತ್ರ ಅದಾಗಿತ್ತು ಎಂಬುದನ್ನು ದಕ್ಷಿಣ ವಲಯ ಪೊಲೀಸರು ಕೊನೆಗೂ ಅಸಲಿ ಕಾರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದ್ದ ಸಂದರ್ಭದಲ್ಲೇ ಈ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿತ್ತು. ದೇಶದ ಅತ್ಯುನ್ನತ ನಾಯಕರ ಭೇಟಿಯ ವೇಳೆಯಲ್ಲೇ ಇಂತಹ ಘಟನೆ ನಡೆದಿದ್ದರಿಂದ, ಇದು ಪ್ರಧಾನಿ ಭದ್ರತೆಗೆ ಎದುರಾದ ದೊಡ್ಡ ಸವಾಲು ಎಂದೇ ಭಾವಿಸಲಾಗಿತ್ತು. ಕೇಂದ್ರ ಮತ್ತು ರಾಜ್ಯದ ಗುಪ್ತಚರ ಸಂಸ್ಥೆಗಳು ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.
ದಕ್ಷಿಣ ವಲಯ ಪೊಲೀಸರು ತೀವ್ರ ನಿಗಾ ವಹಿಸಿ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಮೊಬೈಲ್ ನೆಟ್ವರ್ಕ್ ಟವರ್ಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದರು. ಈ ವೇಳೆ ಆಶ್ರಮದ ದ್ವೇಷಿಗಳು ಹಾಗೂ ವಿರೋಧಿಗಳೇ ಈ ಸಂಚಿನ ರೂವಾರಿಗಳು ಎಂಬುದು ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ ಅವರ ಭೇಟಿಯನ್ನು ಹೇಗಾದರೂ ಮಾಡಿ ತಡೆಯಬೇಕು ಮತ್ತು ಆಶ್ರಮದ ಕೀರ್ತಿಗೆ ಮಸಿ ಬಳಿಯಬೇಕು ಎಂಬ ದುರುದ್ದೇಶದಿಂದ ಆಶ್ರಮದ ವಿರೋಧಿಗಳು ಈ ಕುತಂತ್ರ ರೂಪಿಸಿದ್ದರು ಎಂಬುದು ಪೊಲೀಸ್ ವಿಚಾರಣೆಯಿಂದ ದೃಢಪಟ್ಟಿದೆ.
ಆಶ್ರಮದ ಸುತ್ತಮುತ್ತಲ ಪ್ರದೇಶದಲ್ಲಿ ಜಿಲೆಟಿನ್ ಇರಿಸುವ ಮೂಲಕ ಭದ್ರತಾ ಲೋಪದ ಭೀತಿ ಸೃಷ್ಟಿಸುವುದು ಹಾಗೂ ಆ ಮೂಲಕ ಪ್ರಧಾನಿಯವರ ಕಾರ್ಯಕ್ರಮ ರದ್ದಾಗುವಂತೆ ಮಾಡುವುದು ಆರೋಪಿಗಳ ಮುಖ್ಯ ತಂತ್ರವಾಗಿತ್ತು. ಈ ಮೂಲಕ ಆಶ್ರಮದ ಆಡಳಿತ ಮಂಡಳಿಗೆ ಮುಜುಗರ ಉಂಟುಮಾಡಲು ಅವರು ಯತ್ನಿಸಿದ್ದರು. ಆದರೆ, ಪೊಲೀಸರ ಸಕಾಲಿಕ ತಪಾಸಣೆಯಿಂದಾಗಿ ಜಿಲೆಟಿನ್ ಕಡ್ಡಿಗಳು ಸಮಯಕ್ಕೆ ಸರಿಯಾಗಿ ಪತ್ತೆಯಾಗಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ವಿಪ್ಲವವೊಂದು ತಪ್ಪಿದಂತಾಗಿದೆ.
ಸದ್ಯ ದಕ್ಷಿಣ ವಲಯ ಪೊಲೀಸರು ಪ್ರಕರಣದ ಅಸಲಿ ಕಾರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಮತ್ತು ಇವರಿಗೆ ಕುಮ್ಮಕ್ಕು ನೀಡಿದ ಆಶ್ರಮದ ವಿರೋಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯು ಸಾರ್ವಜನಿಕರಲ್ಲಿ ಮತ್ತು ಆಶ್ರಮದ ಭಕ್ತರಲ್ಲಿ ಮೂಡಿದ್ದ ಭೀತಿಯನ್ನು ದೂರ ಮಾಡಿದೆ.








