ಬೀದರ್ : ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಅಡುಗೆ ಅನಿಲ ದರ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ ಎನ್.ಡಿ.ಎ. ಸರ್ಕಾರ, ಈಗ ಪ್ರತಿ ಲೀಟರ್ ಪೆಟ್ರೋಲ್ ಡೀಸೆಲ್ ದರವನ್ನು 3 ರೂ. ಹೆಚ್ಚಿಸಿದ್ದು ಬಡ, ಮಧ್ಯಮವರ್ಗದ ಮೇಲೆ ಗದಾ ಪ್ರಹಾರ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದರ್ ನಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 12 ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರದ ಕೆಟ್ಟ ವಿದೇಶಾಂಗ ನೀತಿಯ ಫಲವಾಗಿ ಇಂದು ಡಾಲರ್ ಎದುರು ರೂಪಾಯಿ ಅಪಮೌಲ್ಯ ಆಗುತ್ತಿದೆ. ಪರ್ಯಾಯ ಇಂಧನ ವ್ಯವಸ್ಥೆಯಿಲ್ಲದೆ ದೇಶದ ಅಭಿವೃದ್ಧಿಯ ಗಾಲಿಯೇ ನಿಂತು ಹೋಗುವ ಸ್ಥಿತಿ ತಲುಪುತ್ತಿದೆ. ಇದು ವಿಪರ್ಯಾಸ ಎಂದು ಹೇಳಿದ್ದಾರೆ.
ದೇಶದ ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದರ ಹೊರತಾಗಿ ಬಿಜೆಪಿ ಏನೂ ಮಾಡುತ್ತಿಲ್ಲ. ಎನ್.ಡಿ.ಎ. ಸರ್ಕಾರ ಬಿಜೆಪಿ ಮತ್ತು ಪ್ರಧಾನಿ ಪ್ರಚಾರಕ್ಕೆ ಎಷ್ಟು ಖರ್ಚು ಮಾಡಿದೆ ಎಂದು ಜನರಿಗೆ ಲೆಕ್ಕ ನೀಡಲಿ ಎಂದ ಅವರು, ಬರೀ ಸುಳ್ಳುಗಳನ್ನೇ ಹೇಳುತ್ತಾ ಮುಗ್ದ ಜನರನ್ನು ಪ್ರಧಾನಿ ವಂಚಿಸುತ್ತಿದ್ದಾರೆ ಎಂದರು.
75ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಅಂದರೆ 2022ರ ಹೊತ್ತಿಗೆ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು, ಆದಾಯ ದುಪ್ಪಟ್ಟು ಆಗಲಿಲ್ಲ. ಪ್ರತಿ ವರ್ಷ ಯುವಜನರಿಗೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು, ನಿರುದ್ಯೋಗ ದರ ಹಿಂದೆಂದಿಗಿಂತ ಅಧಿಕವಾಗಿದೆ. ವಿದೇಶದಲ್ಲಿರುವ ಕಪ್ಪು ಹಣವೂ ಬರಲಿಲ್ಲ, ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಇಳಿಸುವುದಾಗಿ ಹೇಳಿದ್ದರು, ಇಳಿಯುವ ಬದಲು ವಿಪರೀತ ಏರಿಕೆ ಆಗುತ್ತಿದೆ. ಒಟ್ಟಾರೆ ಬಡ ಮತ್ತು ಮಧ್ಯಮ ವರ್ಗದ ಜನರು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಅದಾನಿ ಆದಾಯ ಹೆಚ್ಚಿದ್ದು ಹೇಗೆ ಖಂಡ್ರೆ ಪ್ರಶ್ನೆ:
ಹತ್ತು ವರ್ಷಗಳ ಹಿಂದೆ ಅದಾನಿ ಆದಾಯ ಏನಿತ್ತು. ಇಂದು ಎಷ್ಟಾಗಿದೆ. ಅದಾನಿಯನ್ನು ಏಕಾ ಏಕಿ ಇಷ್ಟೊಂದು ಶ್ರೀಮಂತ ನನ್ನಾಗಿ ಮಾಡಲು, ದೇಶವನ್ನೇ ಮಾರಾಟ ಮಾಡುತ್ತಿದ್ದಾರೆ. ಕರ್ನಾಟಕದ ಬಗ್ಗೆ ಮಾತನಾಡುವ ಬಿಜೆಪಿಗರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಇಂದಿರಾಗಾಂಧೀ, ರಾಜೀವ್ ಗಾಂಧೀ ಮತ್ತು ಅವರ ಇಡೀ ಕುಟುಂಬ ಈ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಆದರೆ ಬಿಜೆಪಿಗಳು ಸುಖಾಸುಮ್ಮಲೆ ಅಪಪ್ರಚಾರ ಮಾಡುತ್ತಾ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಉಚಿತ ಸಲಹೆಗಷ್ಟೇ ಸೀಮಿತ:
ಬೆಲೆ ಏರಿಕೆ ತಡೆಯಲು, ರೂಪಾಯಿ ಅಪಮೌಲ್ಯ ಆಗದಂತೆ ಮಾಡಲು ಅಶಕ್ತವಾದ ಪ್ರದಾನಿ ಈಗ ಉಚಿತ ಸಲಹೆ ನೀಡಲು ಸೀಮಿತರಾಗಿದ್ದಾರೆ. ಪೆಟ್ರೋಲ್ ಡೀಸೆಲ್ ಕಡಿಮೆ ಬಳಸಿ, ಖಾದ್ಯ ತೈಲ ಬಳಕೆ ತಗ್ಗಿಸಿ, ಸಮೂಹ ಸಾರಿಗೆ ಬಳಸಿ, ಚಿನ್ನ ಖರೀದಿಸಬೇಡಿ ಎಂದು ಹೇಳುತ್ತಿದ್ದಾರೆ. ಬಡವರಿಗೆ ನೀಡುತ್ತಿದ್ದ ಅಡುಗೆ ಅನಿಲ ಸಬ್ಸಿಡಿಯನ್ನು ನಿಲ್ಲಿಸಿದರು. ಇದು ಜನರಿಗೆ ಮಾಡಿದ ದ್ರೋಹವಲ್ಲವೆ ಎಂದು ಪ್ರಶ್ನಿಸಿದರು.
ಪ್ರಧಾನಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅಜಿತ್ ಪವಾರ್ 75 ಕೋಟಿ ರೂ. ಲೂಟಿ ಹೊಡೆದಿದ್ದಾರೆ ಎಂದು ಅವರೇ ಆರೋಪಿಸಿದ್ದರು. ನಂತರ ಅವರನ್ನೇ ಉಪ ಮುಖ್ಯಮಂತ್ರಿ ಮಾಡಿದರು. ಸುವೇಂದು ಅಧಿಕಾರಿ ಲಂಚ ಪಡೆದು ಜೋಬಿಗೆ ಇಟ್ಟುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಈಗ ಅವರನ್ನೇ ಮುಖ್ಯಮಂತ್ರಿ ಮಾಡಿದ್ದಾರೆ. ಬಿಸ್ವಾಸ್ ಶರ್ಮಾ ಅತಿ ಭ್ರಷ್ಟ ಎಂದು ಆರೋಪಿಸಿದರು. ಈಗ ಅವರನ್ನೂ 2 ಬಾರಿ ಅಸ್ಸಾಂ ಮುಖ್ಯಮಂತ್ರಿ ಮಾಡಿದ್ದಾರೆ. ಪ್ರತಿಪಕ್ಷದಲ್ಲಿದ್ದರೆ ಅವರು ಭ್ರಷ್ಟರಾಗಿರುತ್ತಾರೆ. ಬಿಜೆಪಿ ಬಂದ ಕೂಡಲೇ ಪರಿಶುದ್ಧರಾಗುತ್ತಾರಾ ಎಂದು ಪ್ರಶ್ನಿಸಿದರು.








