ಶಿವಮೊಗ್ಗ: “ಆರೋಗ್ಯವೇ ಭಾಗ್ಯ. ವಯಸ್ಸಾದ ಮೇಲೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಬಗ್ಗೆ ಆತಂಕ ಪಡದೆ, ಕಾಲಕಾಲಕ್ಕೆ ತಪಾಸಣೆಗೆ ಒಳಪಡುವ ಮೂಲಕ ಆರೋಗ್ಯವಂತರಾಗಿರಲು ಸಾಧ್ಯವಿದೆ,” ಎಂದು ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉರ್ದು ಪ್ರೌಢಶಾಲೆಯಲ್ಲಿ ನಡೆದ ಶ್ರವಣ ದೋಷ ತಪಾಸಣೆ ಹಾಗೂ ಸಾಧನಾ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ, ಸರ್ಕಾರಿ ನೌಕರರ ಸಂಘ, ನಿವೃತ್ತ ನೌಕರರ ಸಂಘ ಹಾಗೂ ಟೀಂ ಈಶ್ವರ ಮಲ್ಪೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಚೈತನ್ಯಶೀಲ ಬದುಕಿಗೆ ಆರೋಗ್ಯವೇ ಅಡಿಪಾಯ
ವಯೋಸಹಜವಾಗಿ ಕಣ್ಣಿನ ದೋಷ ಅಥವಾ ಶ್ರವಣದೋಷ ಕಾಣಿಸಿಕೊಳ್ಳುವುದು ಸಹಜ. ಇಂತಹ ಸಮಸ್ಯೆಗಳನ್ನು ಆರಂಭದಲ್ಲೇ ವೈದ್ಯರ ಸಲಹೆ ಮತ್ತು ಆಧುನಿಕ ಸಾಧನಗಳ ಮೂಲಕ ಸರಿಪಡಿಸಿಕೊಳ್ಳಬಹುದು. ಮನುಷ್ಯ ಚೈತನ್ಯಶೀಲನಾಗಿದ್ದರೆ ಮಾತ್ರ ಎಲ್ಲ ಕೆಲಸಗಳನ್ನು ಉತ್ಸಾಹದಿಂದ ಮಾಡಲು ಸಾಧ್ಯ. ಇಂತಹ ಉಚಿತ ಹಾಗೂ ರಿಯಾಯಿತಿ ದರದ ಶಿಬಿರಗಳು ಸಾಮಾನ್ಯ ಜನರಿಗೆ ವರದಾನವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಮಕ್ಕಳ ಆರೋಗ್ಯದ ಮೇಲೆ ಪೋಷಕರ ನಿಗಾ ಇರಲಿ
ಇತ್ತೀಚಿನ ಬದಲಾದ ಜೀವನಶೈಲಿಯಿಂದ ಮಕ್ಕಳಲ್ಲಿಯೂ ದೃಷ್ಟಿದೋಷ ಮತ್ತು ಶ್ರವಣದೋಷ ಹೆಚ್ಚುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಿಕ್ಷಣಾಧಿಕಾರಿಗಳು, “ಮಕ್ಕಳ ಆರೋಗ್ಯ ಕ್ಷೀಣಿಸಿದರೆ ಮನೆಯ ನೆಮ್ಮದಿ ಹಾಳಾಗುತ್ತದೆ. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಸಣ್ಣಪುಟ್ಟ ಸಮಸ್ಯೆಗಳಿದ್ದಾಗಲೇ ತಕ್ಷಣ ಚಿಕಿತ್ಸೆ ಕೊಡಿಸಬೇಕು,” ಎಂದು ಕರೆ ನೀಡಿದರು.
ಲಯನ್ಸ್ ಶ್ರೀಗಂಧ ಸಂಸ್ಥೆಯ ಸಮಾಜಮುಖಿ ಸೇವೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶ್ರೀಗಂಧ ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್ ಮಾತನಾಡಿ, “ಆರೋಗ್ಯಪೂರ್ಣ ಸಮಾಜ ನಿರ್ಮಾಣವೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಕಳೆದ ಒಂಬತ್ತು ತಿಂಗಳಲ್ಲಿ ರಕ್ತದಾನ, ಉಚಿತ ಕಣ್ಣಿನ ತಪಾಸಣೆ, ಪರಿಸರ ದಿನಾಚರಣೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ ಸೇರಿದಂತೆ ಸುಮಾರು 78ಕ್ಕೂ ಹೆಚ್ಚು ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ,” ಎಂದು ಸಂಸ್ಥೆಯ ಸಾಧನೆಗಳನ್ನು ಮೆಲುಕು ಹಾಕಿದರು.
ನೂರಕ್ಕೂ ಹೆಚ್ಚು ಫಲಾನುಭವಿಗಳು
ಕಾರ್ಯಕ್ರಮದಲ್ಲಿ ಡಾ. ಪವನ್ ಮತ್ತು ಲವಕುಮಾರ್ ಬಂಗೇರ ಅವರು ಶಿಬಿರದ ಮಹತ್ವದ ಬಗ್ಗೆ ಮಾತನಾಡಿದರು. ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರು ಶ್ರವಣದೋಷ ತಪಾಸಣೆ ಮಾಡಿಸಿಕೊಂಡು, ಅಗತ್ಯವಿದ್ದವರು ಸಾಧನಾ ಸಲಕರಣೆಗಳನ್ನು ಪಡೆದುಕೊಂಡರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು: ದತ್ತಾತ್ರೇಯ ಭಟ್, ಲಕ್ಷ್ಮೀಶ ಭಟ್, ರೋಹಿಣಿ ಬಾಲಕೃಷ್ಣ, ಉಮೇಶ್ ಹಿರೇನೆಲ್ಲೂರ ಹಾಗೂ ಮೇಜರ್ ನಾಗರಾಜ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಾನುಭವಿಗಳಿಗೆ ಹಾರೈಸಿದರು.
ಸಾಗರ ಮಾರ್ಕೆಟ್ ರಸ್ತೆ ಅಗಲೀಕರಣ ಅನಿವಾರ್ಯ: ಜಾಗ ಬಿಟ್ಟುಕೊಡಲು ನಿವಾಸಿಗಳಿಗೆ ‘AC ವಿರೇಶ ಕುಮಾರ್’ ಮನವಿ
BIG NEWS: ಪತ್ನಿ ಜೊತೆಗಿಲ್ಲ ಎಂಬ ಕಾರಣಕ್ಕೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ








