ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದೆ. ಈ ಸವಾಲುಗಳನ್ನು ಎದುರಿಸಲು ಭಾರತೀಯರು ಸಿದ್ಧರಾಗಬೇಕು. ಹಾಗಾಗಿ ದೇಶದ ಆರ್ಥಿಕ ಹಿತದೃಷ್ಟಿಯಿಂದ “ಭಾರತೀಯರು ಒಂದು ವರ್ಷದವರೆಗೆ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಬೇಡಿ” ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆ ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರಿದೆ. ಪ್ರಧಾನಿಯವರ ಈ ಮಹತ್ವದ ಮನವಿಯ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ (MCX) ಚಿನ್ನದ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.
ಹೌದು ಬೆಳಗ್ಗೆ 9:40ರ ವೇಳೆಗೆ ಜೂನ್ ತಿಂಗಳ ಚಿನ್ನದ ಫ್ಯೂಚರ್ ಕಾಂಟ್ರಾಕ್ಟ್ 574 ರೂ. (38%) ರೂ. ಇಳಿಕೆಯಾಗಿದೆ 1,53,669 ರೂ.ನಲ್ಲಿ ವ್ಯವಹಾರ ನಡೆಸುತ್ತಿದೆ. ಆದರೆ ಬೆಳ್ಳಿಯ ದರ ಏರಿಕೆಯಾಗಿದೆ. ಜೂನ್ ಫ್ಯೂಚರ್ 698 ರೂ. (26%) ಏರಿಕೆಯಾಗಿದ್ದು 2,65,957 ರೂ.ನಲ್ಲಿ ವ್ಯವಹಾರ ನಡೆಸುತ್ತಿದೆ. ಈ ದರ ಇಂದು ಸಂಜೆ ಮಾರುಕಟ್ಟೆ ಕೊನೆಯಾಗುವ 3:30ರ ವೇಳೆಗೆ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ.
ಮದುವೆ ಸೀಸನ್ ಸಮೀಪಿಸುತ್ತಿರುವ ಹೊತ್ತಿನಲ್ಲೇ ಪ್ರಧಾನಿಯವರ ಈ ಕರೆ ಬಂದಿರುವುದು ಆಭರಣ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಸಾಂಪ್ರದಾಯಿಕವಾಗಿ ಭಾರತೀಯ ಕುಟುಂಬಗಳು ಮದುವೆಗಳಿಗೆ ಚಿನ್ನವನ್ನು ಅನಿವಾರ್ಯವೆಂದು ಭಾವಿಸುತ್ತಾರಾದರೂ, ದೇಶದ ಆರ್ಥಿಕ ಸ್ಥಿರತೆಯ ದೃಷ್ಟಿಯಿಂದ ಪ್ರಧಾನಿಯವರ ಮಾತಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಚಿನ್ನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಆ ಹಣವನ್ನು ದೇಶದ ಅಭಿವೃದ್ಧಿಗೆ ಪೂರಕವಾದ ಹೂಡಿಕೆಗಳಲ್ಲಿ ತೊಡಗಿಸಬೇಕೆಂಬುದು ಸರ್ಕಾರದ ಆಶಯವಾಗಿದೆ.







