ಚೆನ್ನೈ:ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದೆ. 50 ವರ್ಷಗಳ ದ್ರಾವಿಡ ಪಕ್ಷಗಳ ಏಕಸ್ವಾಮ್ಯವನ್ನು ಮುರಿಯಲು ವಿಜಯ್ ಸನ್ನದ್ಧರಾಗಿದ್ದು, ಇದನ್ನು ತಡೆಯಲು ಬದ್ಧ ವೈರಿಗಳಾದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಒಂದಾಗುತ್ತವೆಯೇ ಎಂಬ ಚರ್ಚೆ ಈಗ ತೀವ್ರಗೊಂಡಿದೆ.
ವರದಿಗಳ ಪ್ರಕಾರ, ವಿಜಯ್ ಅವರ ಟಿವಿಕೆ ಪಕ್ಷವು ಸರ್ಕಾರ ರಚಿಸುವುದನ್ನು ತಡೆಯಲು ಎಐಎಡಿಎಂಕೆಯು ತನ್ನ ದಶಕಗಳ ವೈರಿಯಾದ ಡಿಎಂಕೆಗೆ ಮೈತ್ರಿಯ ಅಥವಾ ಬೆಂಬಲದ ಪ್ರಸ್ತಾವನೆಯನ್ನು ಕಳುಹಿಸಿದೆ ಎನ್ನಲಾಗಿದೆ. ವಿಜಯ್ ಅವರು ಅಧಿಕಾರಕ್ಕೆ ಬಂದರೆ ಉಭಯ ದ್ರಾವಿಡ ಪಕ್ಷಗಳ ಅಸ್ತಿತ್ವಕ್ಕೆ ಧಕ್ಕೆಯಾಗಬಹುದು ಎಂಬ ಆತಂಕ ಈ ಪ್ರಸ್ತಾವನೆಯ ಹಿಂದಿದೆ.
ಎಐಎಡಿಎಂಕೆಯ ಈ ‘ಅಚ್ಚರಿಯ’ ಪ್ರಸ್ತಾವನೆಯನ್ನು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸಾರಾಸಗಟಾಗಿ ತಿರಸ್ಕರಿಸಿದೆ. “ಜನಾದೇಶಕ್ಕೆ ವಿರುದ್ಧವಾಗಿ ಹೋಗಲು ನಾವು ಇಷ್ಟಪಡುವುದಿಲ್ಲ, ನಾವು ಪರಿಣಾಮಕಾರಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ” ಎಂದು ಡಿಎಂಕೆ ನಾಯಕರು ಸ್ಪಷ್ಟಪಡಿಸಿದ್ದಾರೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಬಹುಮತಕ್ಕೆ (118) ಕೇವಲ 10 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಇತ್ತ ಕಾಂಗ್ರೆಸ್ (5 ಸ್ಥಾನ) ಟಿವಿಕೆಗೆ ಬೆಂಬಲ ನೀಡಲು ಮುಂದಾಗಿದ್ದರೂ, ಮ್ಯಾಜಿಕ್ ನಂಬರ್ ತಲುಪಲು ಇನ್ನೂ 5 ಸ್ಥಾನಗಳ ಅಗತ್ಯವಿದೆ.
ಎಐಎಡಿಎಂಕೆಯ ಒಟ್ಟು 47 ಶಾಸಕರಲ್ಲಿ ಸುಮಾರು 30 ಶಾಸಕರು ವಿಜಯ್ ಅವರಿಗೆ ಬೆಂಬಲ ನೀಡಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಮಾತ್ರ ಟಿವಿಕೆಗೆ ಬೆಂಬಲ ನೀಡಲು ನಿರಾಕರಿಸಿದ್ದಾರೆ.







