ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸಿದ್ದು, ಈ ಐತಿಹಾಸಿಕ ವಿಜಯವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಫಲಿತಾಂಶದ ನಂತರ ‘ಎಕ್ಸ್’ (ಟ್ವಿಟ್ಟರ್) ಮೂಲಕ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಕೇರಳದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ:
”ಕೇರಳದಲ್ಲಿ ಅದ್ಭುತ ಮತ್ತು ನಿರ್ಣಾಯಕ ಜನಾದೇಶ ನೀಡಿದ ನನ್ನ ಸಹೋದರ ಸಹೋದರಿಯರಿಗೆ ಧನ್ಯವಾದಗಳು. ನಾನು ಮೊದಲೇ ಹೇಳಿದಂತೆ, ಕೇರಳವು ಅದ್ಭುತ ಪ್ರತಿಭೆ ಮತ್ತು ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಈಗ ಆ ಸಾಮರ್ಥ್ಯವನ್ನು ಬಳಸಿಕೊಳ್ಳುವ ದೃಷ್ಟಿಕೋನ ಹೊಂದಿರುವ ಯುಡಿಎಫ್ ಸರ್ಕಾರ ಬಂದಿದೆ.”
ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಎಲ್ಡಿಎಫ್ (LDF) ಮತ್ತು ಪಿಣರಾಯಿ ವಿಜಯನ್ ಅವರ ಆಡಳಿತಕ್ಕೆ ಕೇರಳದ ಜನತೆ ವಿದಾಯ ಹೇಳಿದ್ದಾರೆ.ವಿ.ಡಿ. ಸತೀಶನ್ ಮತ್ತು ಕೆ. ಸುಧಾಕರನ್ ಅವರ ನೇತೃತ್ವದಲ್ಲಿ ಯುಡಿಎಫ್ ನಡೆಸಿದ ಸಂಘಟಿತ ಹೋರಾಟವು ಮೈತ್ರಿಕೂಟಕ್ಕೆ 100ಕ್ಕೂ ಹೆಚ್ಚು ಸ್ಥಾನಗಳನ್ನು ತಂದುಕೊಟ್ಟಿದೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ಮತ್ತು ಎಲ್ಡಿಎಫ್ ನಡುವೆ “ರಹಸ್ಯ ಮೈತ್ರಿ” ಇದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ, ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.







