ಬಸ್ ಅಥವಾ ರೈಲುಗಳಲ್ಲಿ ಪ್ರಯಾಣಿಸುವಾಗ ಆತುರದಲ್ಲಿ ನಮ್ಮ ಬೆಲೆಬಾಳುವ ವಸ್ತುಗಳನ್ನು ಮರೆಯುವುದು ಸಹಜ. ಕೆಎಸ್ಆರ್ಟಿಸಿ ಬಸ್ಗಳಲ್ಲಿ ವಸ್ತುಗಳನ್ನು ಮರೆತರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಆದರೆ, ರೈಲಿನಲ್ಲಿ ಲಗೇಜ್ ಅಥವಾ ಮೊಬೈಲ್ ಮರೆತುಹೋದರೆ ಏನು ಮಾಡಬೇಕು ಎಂಬ ಗೊಂದಲ ಅನೇಕರಿಗಿಂತ ಇರುತ್ತದೆ. ಇದೀಗ ರೈಲ್ವೆ ಇಲಾಖೆಯು ಪ್ರಯಾಣಿಕರ ನೆರವಿಗಾಗಿ ಡಿಜಿಟಲ್ ಸೇವೆಯನ್ನು ಪರಿಚಯಿಸಿದ್ದು, ಇದರ ಮೂಲಕ ಕಳೆದುಹೋದ ವಸ್ತುಗಳನ್ನು ಸುಲಭವಾಗಿ ಮರಳಿ ಪಡೆಯಬಹುದು.
ರೈಲ್ ಮದದ್ (Rail Madad) ಆಪ್
ರೈಲಿನಲ್ಲಿ ವಸ್ತುಗಳನ್ನು ಮರೆತ ತಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ತಕ್ಷಣವೇ ನಿಮ್ಮ ಮೊಬೈಲ್ನಲ್ಲಿ ‘ರೈಲ್ ಮದದ್’ ಎಂಬ ಅಧಿಕೃತ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಈ ಆಪ್ ಮೂಲಕ ನೀವು ರೈಲ್ವೆ ಇಲಾಖೆಗೆ ದೂರು ನೀಡಬಹುದು. ನಿಮ್ಮ ದೂರು ದಾಖಲಾದ ತಕ್ಷಣ ಅಧಿಕಾರಿಗಳು ಕಾರ್ಯಪ್ರವೃತ್ತರಾಗುತ್ತಾರೆ ಮತ್ತು ನಿಮ್ಮ ವಸ್ತು ಸಿಗುವವರೆಗೂ ಅದರ ಸ್ಟೇಟಸ್ ಅನ್ನು ನೀವು ಆಪ್ನಲ್ಲಿ ಪರಿಶೀಲಿಸಬಹುದು. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಆವೃತ್ತಿಗಳಲ್ಲಿ ಲಭ್ಯವಿದೆ.
ದೂರು ನೀಡುವುದು ಹೇಗೆ?
ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ನಿಂದ Rail Madad ಆಪ್ ಡೌನ್ಲೋಡ್ ಮಾಡಿ.
ಆಪ್ ಓಪನ್ ಮಾಡಿ ನಿಮ್ಮ PNR ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ.
ನೀವು ಕಳೆದುಕೊಂಡ ವಸ್ತುವಿನ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ.
ಉದಾಹರಣೆಗೆ: ಬ್ಯಾಗ್ನ ಬಣ್ಣ, ಗಾತ್ರ, ಕೋಚ್ ಸಂಖ್ಯೆ, ಸೀಟು ಸಂಖ್ಯೆ ಮತ್ತು ಬ್ಯಾಗ್ನಲ್ಲಿದ್ದ ವಸ್ತುಗಳ ವಿವರಗಳನ್ನು ನಮೂದಿಸಿ.
ಮಾಹಿತಿಯನ್ನು ಭರ್ತಿ ಮಾಡಿದ ನಂತರ ‘ಸಬ್ಮಿಟ್’ ಬಟನ್ ಒತ್ತಿರಿ.
ದೂರು ದಾಖಲಾದ ನಂತರ ನಿಮಗೆ ‘ಗ್ರೀವೆನ್ಸ್ ಐಡಿ’ (Grievance ID) ದೊರೆಯುತ್ತದೆ. ಇದರ ಸಹಾಯದಿಂದ ನಿಮ್ಮ ದೂರನ್ನು ಟ್ರ್ಯಾಕ್ ಮಾಡಬಹುದು.
ವೆಬ್ಸೈಟ್ ಮೂಲಕವೂ ದೂರು ನೀಡಬಹುದು
ಒಂದು ವೇಳೆ ಆಪ್ ಬಳಸಲು ಸಾಧ್ಯವಾಗದಿದ್ದರೆ, ನೀವು ನೇರವಾಗಿ ರೈಲ್ವೆಯ ಅಧಿಕೃತ ಪೋರ್ಟಲ್ railmadad.indianrailways.gov.in ಗೆ ಭೇಟಿ ನೀಡುವ ಮೂಲಕವೂ ದೂರು ದಾಖಲಿಸಬಹುದು.
ಗಮನಿಸಿ: ನೀವು ಎಷ್ಟು ಬೇಗನೆ ದೂರು ನೀಡುತ್ತೀರೋ, ನಿಮ್ಮ ವಸ್ತುಗಳು ಸಿಗುವ ಸಾಧ್ಯತೆ ಅಷ್ಟೇ ಹೆಚ್ಚಿರುತ್ತದೆ. ದೂರು ಬಂದ ತಕ್ಷಣ ರೈಲ್ವೆ ಸಿಬ್ಬಂದಿ ಮತ್ತು ಭದ್ರತಾ ಪಡೆ (RPF) ಅಲರ್ಟ್ ಆಗುತ್ತಾರೆ.
ಇತರ ಸೌಲಭ್ಯಗಳು:
ರೈಲ್ ಮದದ್ ಆಪ್ ಕೇವಲ ಕಳೆದುಹೋದ ವಸ್ತುಗಳಿಗಾಗಿ ಮಾತ್ರವಲ್ಲದೆ, ರೈಲಿನಲ್ಲಿನ ಸ್ವಚ್ಛತೆ, ಶೌಚಾಲಯದ ಸಮಸ್ಯೆ, ರೈಲು ವಿಳಂಬ ಅಥವಾ ಟಿಕೆಟ್ ಸಂಬಂಧಿತ ಯಾವುದೇ ದೂರುಗಳಿದ್ದರೂ ನೀವು ಈ ಆಪ್ ಮೂಲಕ ಅಧಿಕಾರಿಗಳ ಗಮನಕ್ಕೆ ತರಬಹುದು. ಈ ಸೇವೆ 24 ಗಂಟೆಯೂ ಲಭ್ಯವಿರುತ್ತದೆ.








