ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ 31ನೇ ವಾರ್ಡ್ನ ವರದಾ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ, ಇಂದು ಸ್ಥಳೀಯ ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿದರು. ರಸ್ತೆ, ನೀರು ಮತ್ತು ವಿದ್ಯುತ್ನಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಾಜಿ ಅಧ್ಯಕ್ಷರ ಕಿಡಿ
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, “ನಗರಸಭೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಗರದ ಮಧ್ಯಭಾಗಕ್ಕೆ ಮಾತ್ರ ಆದ್ಯತೆ ನೀಡಿ, ಹೊರವಲಯದ ವಾರ್ಡ್ಗಳನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ. ಜನಸಂಘಟನೆಯ ಮೂಲಕ ಹೋರಾಟ ನಡೆಸದ ಹೊರತು ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ ಎಂದು ಟೀಕಿಸಿದರು. ವರದಾ ಕಾಲೋನಿಯಲ್ಲಿ ಚರಂಡಿ ಹಾಗೂ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಜನರು ಹೈರಾಣಾಗಿದ್ದಾರೆ ಎಂದು ಅವರು ದೂರಿದರು.

ಐದಾರು ವರ್ಷಗಳ ಬೇಡಿಕೆ ಅತಂತ್ರ
ಸ್ಥಳೀಯ ನಿವಾಸಿ ಗೋಪಾಲಣ್ಣ ಮಾತನಾಡಿ, “ಕಳೆದ ಐದಾರು ವರ್ಷಗಳಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಪ್ರತಿ ಬಾರಿಯೂ ನಮಗೆ ಬರಿ ಭರವಸೆಗಳೇ ಸಿಗುತ್ತಿವೆ. ಈಗ ಹೋರಾಟದ ಮೂಲಕವೇ ನಮ್ಮ ಹಕ್ಕನ್ನು ಪಡೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ” ಎಂದು ನೋವು ತೋಡಿಕೊಂಡರು.

ನಿವೃತ್ತ ಸೈನಿಕ ಭಾಸ್ಕರ್ ಕಿಡಿಕಿಡಿ
ಕಳೆದ ಹಲವು ವರ್ಷಗಳಿಂದ ವರದ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದೇನೆ. ರಸ್ತೆ, ಚರಂಡಿಯಂತ ಮೂಲ ಸೌಕರ್ಯಕ್ಕಾಗಿ ನಗರಸಭೆಗೆ ಹಲವಾರು ಬಾರಿ ಮನವಿ ಮಾಡಿ ಪತ್ರವನ್ನು ಸಲ್ಲಿಸಿದ್ದೇನೆ. ಹೀಗಿದ್ದರೂ ಸಮಸ್ಯೆ ಪರಿಹರಿಸಿಲ್ಲ. ನಾವೇ ಚರಂಡಿಯಂತಾಗಿದ್ದಂತ ರಸ್ತೆಗಳನ್ನು ಸರಿ ಪಡಿಸಿಕೊಂಡಿದ್ದೇವೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡೋದಕ್ಕೂ ಸಾಧ್ಯವಿಲ್ಲ. ಕೂಡಲೇ ನಗರಸಭೆಯ ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಚರಂಡಿ, ರಸ್ತೆ ನಿರ್ಮಾಣ ಮಾಡಬೇಕು ಎಂಬುದಾಗಿ ಒತ್ತಾಯಿಸಿದರು.

ನಗರಸಭೆಗೆ ಜಮೀಲ್ ಸಾಗರ್ ಎಚ್ಚರಿಕೆ
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಜಮೀಲ್ ಸಾಗರ್ ಮಾತನಾಡಿ ನಾವು ನಗರಸಭೆ ವ್ಯಾಪ್ತಿಯಲ್ಲಿದ್ದೇವೋ ಅಥವಾ ಹಳ್ಳಿಯಲ್ಲಿದ್ದೇವೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಬೀದಿದೀಪ, ಕುಡಿಯುವ ನೀರು ಒದಗಿಸುವುದು ನಗರಸಭೆಯ ಕರ್ತವ್ಯ. ಅಧಿಕಾರಿಗಳ ಹಾರಿಕೆ ಉತ್ತರದಿಂದ ಬೇಸತ್ತ ಜನರು ಇಂದು ಬೀದಿಗೆ ಇಳಿದಿದ್ದಾರೆ. ಕೂಡಲೇ ಸೌಲಭ್ಯ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖ ಬೇಡಿಕೆಗಳು:
-
ಹದಗೆಟ್ಟಿರುವ ರಸ್ತೆಗಳ ದುರಸ್ತಿ.
-
ಸುಸಜ್ಜಿತ ಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ಪೂರೈಕೆ.
-
ವಾರ್ಡ್ನಾದ್ಯಂತ ಬೀದಿದೀಪಗಳ ಅಳವಡಿಕೆ.
-
ನಗರದ ಹೊರವಲಯದ ಬಡಾವಣೆಗಳಿಗೆ ಸಮಾನ ಆದ್ಯತೆ.
ಈ ಪ್ರತಿಭಟನೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಕುಂಟುಗೋಡು ಸೀತಾರಾಮ್, ಸುಧಾಕರ, ಡ್ಯಾನಿಯಲ್, ಸವಿತಾ ಸೇರಿದಂತೆ ವರದಾ ಕಾಲೋನಿಯ ನೂರಾರು ನಿವಾಸಿಗಳು ಪಾಲ್ಗೊಂಡಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..
ಸಿನಿಮಾ ಪೈರಸಿಗೆ ಬ್ರೇಕ್: ‘ಜನ ನಾಯಕನ್’ ಚಿತ್ರದ ಅಕ್ರಮ ಪ್ರಸಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ!








