ಮೂಡುಬಿದಿರೆ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮ ಮನೆಮಾಡಿದೆ. ಅದರಲ್ಲೂ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೇರಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾಳ ಸಾಧನೆಗೆ ಇಡೀ ನಾಡೇ ಬೆರಗಾಗಿದೆ. ಆದರೆ, ಈ ಐತಿಹಾಸಿಕ ಸಾಧನೆಯ ಹಿಂದೆ ಅಡಗಿರುವ ನೋವಿನ ಕಥೆ ಮಾತ್ರ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ತಲೆ ಸವರಿ ಹರಸಿದ ತಾಯಿ ಮರಳುವಷ್ಟರಲ್ಲಿ ಹೆಣವಾಗಿದ್ದರು!
ದಿಶಾ ಪಾಲಿಗೆ ವಿಧಿ ಅತ್ಯಂತ ಕ್ರೂರವಾಗಿ ನಡೆದುಕೊಂಡಿತ್ತು. “ಪರೀಕ್ಷೆ ಚೆನ್ನಾಗಿ ಬರಿ ಮಗಳೇ” ಎಂದು ಹರಸಿ, ಬೆನ್ನು ತಟ್ಟಿ ಕಳಿಸಿದ ಅಮ್ಮ, ಮಗಳು ಮೂರನೇ ಪರೀಕ್ಷೆ ಮುಗಿಸಿ ಬರುವಷ್ಟರಲ್ಲಿ ಶಾಶ್ವತವಾಗಿ ಕಣ್ಮುಚ್ಚಿದ್ದರು. ಪರೀಕ್ಷೆ ಬರೆದ ಖುಷಿಯೊಂದಿಗೆ ಅಮ್ಮನ ಅಪ್ಪುಗೆಯನ್ನು ಬಯಸಿ ಮನೆಗೆ ಓಡಿಬಂದ ದಿಶಾಗೆ ಎದುರಾಗಿದ್ದು ಅಮ್ಮನ ಮೃತದೇಹ! ತಾನು ಕಂಡ ಕನಸುಗಳಿಗೆ ನೀರೆರೆದ ತಾಯಿ ಅರ್ಧ ದಾರಿಯಲ್ಲೇ ಕೈಬಿಟ್ಟು ಹೋದಾಗ ಆ 17 ವರ್ಷದ ಬಾಲಕಿಯ ಸಂಕಟ ಯಾರಿಗೂ ಬೇಡ.
ವಿಧಿಯಾಟದ ನಡುವೆಯೂ ಕುಗ್ಗದ ಛಲ
ಫೆಬ್ರವರಿ 28 ರಿಂದ ಪರೀಕ್ಷೆಗಳು ಆರಂಭವಾಗಿದ್ದವು. ಮೊದಲ ಮೂರು ಪರೀಕ್ಷೆಗಳನ್ನು ಬಹಳ ಉತ್ಸಾಹದಿಂದ ಬರೆದಿದ್ದ ದಿಶಾಗೆ, ತಾಯಿಯ ಸಾವು ಸಿಡಿಲು ಬಡಿದಂತಾಗಿತ್ತು. ಮುಕ್ಕೋಟಿ ದೇವರುಗಳಿಗಿಂತ ಮಿಗಿಲಾದ ತಾಯಿಯನ್ನು ಕಳೆದುಕೊಂಡ ಮೇಲೆ ಲೋಕವೇ ಶೂನ್ಯವೆನಿಸುವುದು ಸಹಜ. ಆದರೆ, ದಿಶಾ ಪಾಲಿಗೆ ಆ ದುಃಖದ ನಡುವೆಯೂ ಅಮ್ಮನಿಗೆ ಕೊಟ್ಟ ಮಾತು ಮತ್ತು ಅವರ ಕನಸು ಕಣ್ಣಮುಂದೆ ನಿಂತಿತ್ತು.
ಕಣ್ಣೀರ ಧಾರೆಗಳ ನಡುವೆಯೇ ಪರೀಕ್ಷಾ ಕೇಂದ್ರಕ್ಕೆ…
ಮನೆಯಲ್ಲಿ ಅಮ್ಮನಿಲ್ಲದ ಆ ಶೂನ್ಯತೆ, ಎದೆಯ ಸೀಳುವ ನೋವು ಒಂದೆಡೆಯಾದರೆ, ಉಳಿದ ಪರೀಕ್ಷೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇನ್ನೊಂದೆಡೆ. ಅಮ್ಮನ ಅಂತ್ಯಕ್ರಿಯೆ ಮುಗಿಸಿದ ಕೆಲವೇ ದಿನಗಳಲ್ಲಿ, ಹಸಿ ಹಸಿಯಾದ ಆ ನೋವನ್ನು ನುಂಗಿಕೊಂಡು, ಕಣ್ಣೀರು ಒರೆಸಿಕೊಳ್ಳುತ್ತಲೇ ದಿಶಾ ಪರೀಕ್ಷಾ ಕೇಂದ್ರಕ್ಕೆ ಹೆಜ್ಜೆ ಹಾಕಿದಳು. ಪ್ರತಿಯೊಂದು ಅಂಕವನ್ನೂ ತನ್ನ ತಾಯಿಯ ಸ್ಮೃತಿಗೆ ಅರ್ಪಿಸಬೇಕೆಂಬ ಛಲ ಆಕೆಯನ್ನು ಪುಸ್ತಕ ಹಿಡಿಯುವಂತೆ ಮಾಡಿತು.
ಅಮ್ಮನ ಕನಸಿಗೆ ಸಿಕ್ಕ ಸಾಕ್ಷಾತ್ಕಾರ
ಇಂದು ಫಲಿತಾಂಶ ಬಂದಿದೆ. ದಿಶಾ 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾಳೆ. ಅಂದು ತಾಯಿ ತಲೆ ಸವರಿ ಹರಸಿದ್ದಕ್ಕೆ ಇಂದು ಈಕೆ ‘ರಾಜ್ಯಕ್ಕೇ ಪ್ರಥಮ’ ಎನ್ನುವ ಅತಿ ದೊಡ್ಡ ಉಡುಗೊರೆ ನೀಡಿದ್ದಾಳೆ. ಆದರೆ, ಈ ಅಪ್ರತಿಮ ಸಾಧನೆಯನ್ನು ನೋಡಿ ಸಂಭ್ರಮಿಸಲು, ಮಗಳ ಯಶಸ್ಸನ್ನು ಕಂಡು ಕಣ್ಣೀರು ಸುರಿಸಲು ಇಂದು ಆಕೆಯ ‘ಅಮ್ಮ’ ಮಾತ್ರ ದೈಹಿಕವಾಗಿ ಜೊತೆಗಿಲ್ಲ.
ದಿಶಾಳ ಈ ಸಾಧನೆಯು ಕೇವಲ ಅಂಕಗಳಿಕೆಯಲ್ಲ; ಇದು ಮಗಳೊಬ್ಬಳು ತನ್ನ ಅಗಲಿದ ತಾಯಿಯ ನೆನಪಿಗೆ ಕಟ್ಟಿದ ಅಪೂರ್ವ ಸ್ಮಾರಕ. ನೋವನ್ನೂ ಮೆಟ್ಟಿ ನಿಲ್ಲುವ ಶಕ್ತಿಯನ್ನು ಈಕೆ ಇಂದಿನ ಪೀಳಿಗೆಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದಾಳೆ.
KSRTC ಅಂತರ್ ನಿಗಮ ವರ್ಗಾವಣೆಗೆ ಸಂಭವನೀಯ ಪಟ್ಟಿ ಪ್ರಕಟ: ಏ.16ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
BREAKING : ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ : 3 ವಿಭಾಗದಲ್ಲೂ ಇವರೇ ನೋಡಿ ಟಾಪರ್!








