ಬೆಂಗಳೂರು: ರಾಜ್ಯದ ಪ್ರಸಿದ್ಧ ಗಿರಿಶಿಖರಗಳಲ್ಲಿ ಇತ್ತೀಚೆಗೆ ಚಾರಣಿಗರು ದಾರಿತಪ್ಪಿ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಚಾರಣಿಗರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ (SOP) ಜಾರಿಗೆ ತರಲು ನಿರ್ಧರಿಸಿದೆ.
ಘಟನೆಯ ಹಿನ್ನೆಲೆ:
ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಬೆಟ್ಟಕ್ಕೆ ಚಾರಣಕ್ಕೆ ಬಂದಿದ್ದ ಕೇರಳದ ಶರಣ್ಯ ಎಂಬುವವರು ದಾರಿತಪ್ಪಿ ಮೂರು ದಿನಗಳ ಕಾಲ ಕಾಡಿನಲ್ಲೇ ಸಿಲುಕಿದ್ದರು. ಇದರ ಬೆನ್ನಲ್ಲೇ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅಪ್ರಾಪ್ತ ಬಾಲಕಿ ಶ್ರೀನಂದಾ ನಾಪತ್ತೆಯಾದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಪ್ರಮುಖ ನಿರ್ದೇಶನಗಳು:
ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಚಾರಣಿಗರ ಹಿತದೃಷ್ಟಿಯಿಂದ ಈ ಕೆಳಗಿನ ಕ್ರಮಗಳನ್ನು ಜಾರಿಗೆ ತರಲು ಸೂಚಿಸಿದ್ದಾರೆ:
ಇ-ಟ್ರ್ಯಾಕಿಂಗ್ ಆ್ಯಪ್: ಅರಣ್ಯ ಇಲಾಖೆಯ ‘ಇ-ಗಸ್ತು’ ಮಾದರಿಯಲ್ಲೇ ಚಾರಣಿಗರಿಗಾಗಿ ಪ್ರತ್ಯೇಕ ಇ-ಟ್ರ್ಯಾಕಿಂಗ್ ಆ್ಯಪ್ ಅಭಿವೃದ್ಧಿಪಡಿಸುವುದು. ಚಾರಣದ ಅವಧಿಯಲ್ಲಿ ಈ ಆ್ಯಪ್ ಅನ್ನು ಚಾರಣಿಗರ ಮೊಬೈಲ್ನಲ್ಲಿ ಅಳವಡಿಸುವುದರಿಂದ ಅವರು ದಾರಿತಪ್ಪಿದಾಗ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ವೈರ್ಲೆಸ್ ಸಿಸ್ಟಮ್: ಚಾರಣಿಗರ ಜೊತೆಗಿರುವ ನೇಚರ್ ಗೈಡ್ಗಳಿಗೆ ಕಡ್ಡಾಯವಾಗಿ ವೈರ್ಲೆಸ್ ಸಿಸ್ಟಮ್ ಒದಗಿಸಬೇಕು.
ಜವಾಬ್ದಾರಿ ನಿಗದಿ: ಚಾರಣಿಗರ ತಂಡವನ್ನು ಮುನ್ನಡೆಸುವವರಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನಿಗದಿಪಡಿಸುವುದು.
ಗುಂಪು ವಿಮೆ: ಚಾರಣಕ್ಕೆ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಗುಂಪು ವಿಮೆಯ ಸೌಲಭ್ಯ ಒದಗಿಸುವುದು.
ದೇಶಕ್ಕೇ ಮಾದರಿಯಾಗುವಂತಹ ಸುರಕ್ಷತಾ ಮಾನದಂಡಗಳನ್ನು ಆದಷ್ಟು ಶೀಘ್ರವಾಗಿ ರೂಪಿಸಿ, ಜಾರಿಗೆ ತರುವಂತೆ ಸಚಿವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.









