ನವದೆಹಲಿ: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು ಮತದಾನೋತ್ತರ ಸಮೀಕ್ಷೆಗಳ (Exit Polls) ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಏಪ್ರಿಲ್ 9 ರಂದು ಮೊದಲ ಹಂತದ ಮತದಾನ ಆರಂಭವಾಗುವ ಸಮಯದಿಂದ ಹಿಡಿದು, ಏಪ್ರಿಲ್ 29 ರಂದು ಅಂತಿಮ ಹಂತದ ಮತದಾನ ಮುಕ್ತಾಯವಾಗುವವರೆಗೆ ಯಾವುದೇ ರೀತಿಯ ಎಕ್ಸಿಟ್ ಪೋಲ್ಗಳನ್ನು ಪ್ರಕಟಿಸುವಂತಿಲ್ಲ ಎಂದು ಆಯೋಗ ಆದೇಶಿಸಿದೆ.
ಏಪ್ರಿಲ್ 9 ರ ಬೆಳಿಗ್ಗೆ 7:00 ಗಂಟೆಯಿಂದ ಏಪ್ರಿಲ್ 29 ರ ಸಂಜೆ 6:30 ರವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಯಾವುದೇ ಮಾಧ್ಯಮಗಳು (ಮುದ್ರಣ, ದೃಶ್ಯ ಅಥವಾ ಡಿಜಿಟಲ್) ಮತದಾನದ ಒಲವು ಅಥವಾ ಫಲಿತಾಂಶದ ಮುನ್ಸೂಚನೆಯನ್ನು ಬಿತ್ತರಿಸುವಂತಿಲ್ಲ.
ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 126A ಅಡಿಯಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಕೇರಳ, ಅಸ್ಸಾಂ, ಪುದುಚೇರಿ (ಏಪ್ರಿಲ್ 9), ತಮಿಳುನಾಡು (ಏಪ್ರಿಲ್ 23) ಮತ್ತು ಪಶ್ಚಿಮ ಬಂಗಾಳದ (ಏಪ್ರಿಲ್ 23 ಮತ್ತು 29) ಚುನಾವಣೆಗಳಿಗೆ ಈ ಆದೇಶ ಅನ್ವಯಿಸುತ್ತದೆ. ಇದರ ಜೊತೆಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಎಂಟು ಉಪಚುನಾವಣೆಗಳಿಗೂ ಈ ನಿಯಮ ಅನ್ವಯವಾಗಲಿದೆ.








