ಬಾಗಲಕೋಟೆ : ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಾಗಲಕೋಟೆ ಉಪಚುನಾವಣಾ ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆತಿದೆ. ಎಲ್ಲೆಡೆ ಅಭೂತಪೂರ್ವ ಸ್ಪಂದನೆ ಸಿಗುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಬಡವರಿಗಾಗಿ ರೂಪಿಸಿಸಲ್ಪಟ್ಟಿವೆ. ಎಲ್ಲಾ ಜಾತಿ, ಧರ್ಮ, ಭಾಷೆಗಳಿಗೆ ಸೇರಿದ ಜನರಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದು, ಗ್ಯಾರಂಟಿ ಯೋಜನೆಗಳು ಸಾಮಾಜಿಕ ಬದ್ಧತೆಯನ್ನು ಒದಗಿಸುವ ಹೂಡಿಕೆಯಾಗಿದೆ. ಇದೂ ಕೂಡ ಅಭಿವೃದ್ದಿಯೇ ಎಂದರು.
ಅಭಿವೃದ್ಧಿಯೆಂದರೆ ಕೇವಲ ರಸ್ತೆ, ಸೇತುವೆ, ಕಟ್ಟಡಗಳು ಮಾತ್ರವಲ್ಲ. ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವುದು ಕೂಡ ಆಗಿದೆ ಎಂದರು.
ಸಾಮಾಜಿಕ ಯೋಜನೆಗಳನ್ನು ಘೋಷಿಸಿದ ಮೇಲೆ ಬಿಜೆಪಿ ಅಂದಿನಿಂದ ಇಂದಿನವರೆಗೆ ವಿರೋಧಿಸುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಎಲ್ಲರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳಿಕೊಂಡು ಬಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಯೋಚನೆಗಳು ಜಾರಿಯಲ್ಲಿದ್ದು 24/3/2026 ವರೆಗೆ 1.31 ಲಕ್ಷ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದೇವೆ.
ಇದರ ಜೊತೆಗೆ, ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ಪೊಲೀಸ್ ವ್ಯವಸ್ಥೆಗೆ ವೆಚ್ಚ, ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಯೋಜನೆಗಳಿಗೆ ವೆಚ್ಚ ಮಾಡುವುದನ್ನು ಕಡಿಮೆ ಮಾಡಿಲ್ಲ. ಕಳೆದ ವರ್ಷದಲ್ಲಿ 42,000 ಕೋಟಿ ವೆಚ್ಚ ಮಾಡಿದ್ದರೆ, ಈ ವರ್ಷ 44,000 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಅಭಿವೃದ್ಧಿ ಕೆಲಸಗಳ್ಯಾವುವೂ ಕುಂಠಿತವಾಗಿಲ್ಲ ಎಂದರು.
ಬಿಜೆಪಿ ಅಪಪ್ರಚಾರ
ಸಿದ್ದರಾಮಯ್ಯ ಸಾಲ ಮಾಡಿದ್ದಾರೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯನ್ನು ಬಿಜೆಪಿ ಸರಿಯಾಗಿ ಓದಿಕೊಳ್ಳಬೇಕು. ರಾಜ್ಯಗಳು ಆರ್ಥಿಕ ಸಂಕಷ್ಟದಲ್ಲಿದ್ದಾಗ 2002 ರಲ್ಲಿ ಜಾರಿಯಾದ ಈ ಕಾಯ್ದೆಯ ಪ್ರಕಾರ ಮೂರು ಮಾನದಂಡಗಳನ್ನು ಈಡೇರಿಸಬೇಕು. ಆರ್ಥಿಕ ಕೊರತೆ ಜಿಡಿಪಿಯ ಶೇ 3% ಒಳಗಿರಬೇಕು.33 ಲಕ್ಷದ 5500 ಲಕ್ಷ ಕೋಟಿ ಪೈಕಿ 25% ಸಾಲವಿರಬೇಕು. ಬಿಜೆಪಿ ಮತ್ತೊಮ್ಮೆ ಬಜೆಟ್ ಪುಸ್ಕತ ಓದಿಕೊಳ್ಳಲಿ. ಜಿ ಡಿ ಪಿ ಐ ಶೇಕಡ 25ಕ್ಕಿಂತ ಸಾಲ ಹೆಚ್ಚಾಗಬಾರದು. ನಮ್ಮ ಸಾಲ 24.94 ರಲ್ಲಿದೆ. ಹೀಗಾಗಿ ಸಾಲ ಮಿತಿಮೀರಿಲ್ಲ.
ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದೇವೆ
ಯಾವುದೇ ರಾಜ್ಯ ಸಿಕ್ಕಾಪಟ್ಟೆ ಸಾಲ ಮಾಡಲು ಸಾಧ್ಯವಿಲ್ಲ. ಇಷ್ಟೇ ಸಾಲ ಕೂಡಬೇಕೆಂದು ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ನಿಗದಿ ಮಾಡುತ್ತದೆ. ಈ ವಿಷಯ ಬಿಜೆಪಿಗೆ ತಿಳಿದಿದೆಯೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಸಾಲ ಮಾಡಿದ್ದೇನೆ ಎನ್ನುವುದು ಹಸಿ ಸುಳ್ಳು. ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳನ್ನು ಮೀರಿಲ್ಲ. ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದೇವೆ ಎಂದರು.
ನಾವು ಕೇಂದ್ರ ಸರ್ಕಾರಕ್ಕಿಂತ ಉತ್ತಮ ಸ್ಥಿತಿಯಲ್ಲಿದ್ದೇವೆ. ಕೇಂದ್ರ ಸರ್ಕಾರದ ಜಿಡಿಪಿ 7.14% ಬೆಳವಣಿಗೆ ಇದೆ. ಕರ್ನಾಟದ ಜಿಡಿಪಿ 8.1% ಇದೆ. ಇವೆರಡರಲ್ಲಿ ಯಾವುದು ಹೆಚ್ಚು ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಕರ್ನಾಟಕದ ಜಿಡಿಪಿ ಬೆಳವಣಿಗೆ ಕೇಂದ್ರ ಸರ್ಕಾರಕ್ಕಿಂತ ಉತ್ತಮವಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಹಾಗೂ ಸ್ವಾತಂತ್ರ್ಯ ಬಂದಾಗಿನಿಂದ ಸೇರಿಸಲ್ಪಟ್ಟ ಒಟ್ಟು ಸಾಲ 53 ಲಕ್ಷದ 11000 ಕೋಟಿ ಸಾಲ ಇತ್ತು. 2026 ಮಾರ್ಚ್ ವರೆಗೆ 218 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 12 ವರ್ಷಗಳಲ್ಲಿ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದರು.
ಬಿಜೆಪಿಯವರು ರಾಜ್ಯದಲ್ಲಿ ಒಂಭತ್ತು ವರ್ಷಗಳು ಅಧಿಕಾರದಲ್ಲಿದ್ದರೂ, ರಾಜ್ಯದ ಅಭಿವೃದ್ಧಿ ಕೈಗೊಂಡಿಲ್ಲ. 2013ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಬಿಜೆಪಿಯವರು ನೀಡಿದ ಭರವಸೆಗಳಲ್ಲಿ ಶೇ.10 ರಷ್ಟು ಪ್ರಮಾಣವನ್ನು ಈಡೇರಿಸಲಿಲ್ಲ. ಆದ್ದರಿಂದ ಬಿಜೆಪಿಯವರು ಚುನಾವಣೆಯ ಸಂದರ್ಭದಲ್ಲಿ ಜನತೆಯ ಮುಂದೆ ಸತ್ಯ ನುಡಿಯಬೇಕೇ ಹೊರತು ಸುಳ್ಳು ಹೇಳಬಾರದು ಎಂದರು.
ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ. ನಮ್ಮ ಗ್ಯಾರಂಟಿಗಳು ರಾಜ್ಯದ ಜನರಿಗೆ ಅನುಕೂಲ ಕಲ್ಪಸಿದೆ. ಶಕ್ತಿ ಯೋಜನೆಯು ಮಹಿಳೆಯರಿಗೆ ಸ್ವಾವಲಂಬನೆ ನೀಡಿದೆ.
ಕಾಂಗ್ರೆಸ್ ನ್ನು ಟೀಕೆ ಮಾಡುವ ಬದಲು, ಬಿಜೆಪಿಯವರು ತಮ್ಮ ಸಾಧನೆಗಳನ್ನು ಜನರ ಮುಂದೆ ಹೇಳಲಿ. ನನ್ನ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಿದ್ದನ್ನು, ಬಿಜೆಪಿ ಸರ್ಕಾರ ಕಡಿತ ಮಾಡಿತು. ಆಹಾರ ಭದ್ರತಾ ಕಾಯ್ದೆ, ಉದ್ಯೋಗದ ಹಕ್ಕು, ಶಿಕ್ಷಣದ ಹಕ್ಕುಗಳನ್ನು ಜಾರಿಗೆ ತಂದಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಂದರು.
ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಯತ್ನಾಳ್ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ. ಬಿಜೆಪಿಯವರು ಸೋಲಿನ ಭಯದಿಂದ ಇಂತಹ ಕೃತ್ಯಕ್ಕೆ ಕೈಹಾಕಿದ್ದಾರೆ. ಪ್ರತಿಪಕ್ಷಗಳ ಹೇಳಿಕೆಗಳಿಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಸರ್ಕಾರದ ಕೆಲಸವನ್ನು ಜನರ ಮುಂದಿಡುತ್ತೇವೆ ಎಂದರು.
SSLC ಹಿಂದಿ ಗ್ರೇಡ್ ವಿವಾದ: ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಕರವೇ; ಸೋಮವಾರ ರಾಜಭವನಕ್ಕೆ ಮುತ್ತಿಗೆಗೆ ಕರೆ
BIG Alert: ‘ಆನ್ಲೈನ್’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!








