ನವದೆಹಲಿ:ಭಾರತದಲ್ಲಿ ವ್ಯಾಪಾರ ಮತ್ತು ವಹಿವಾಟುಗಳನ್ನು ನಡೆಸುವ ಪ್ರಕ್ರಿಯೆಯನ್ನು ಸರಳಗೊಳಿಸಲು (Ease of Doing Business) ಕೇಂದ್ರ ಸರ್ಕಾರವು ಬೃಹತ್ ಕಾನೂನು ಸುಧಾರಣೆಗೆ ಮುಂದಾಗಿದೆ. ಸುಮಾರು 79 ಕೇಂದ್ರ ಕಾಯ್ದೆಗಳಲ್ಲಿನ 700ಕ್ಕೂ ಹೆಚ್ಚು ನಿಬಂಧನೆಗಳನ್ನು ತಿದ್ದುಪಡಿ ಮಾಡುವ ‘ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ವಿಧೇಯಕ 2026’ ಅನ್ನು ಸಂಸತ್ತು ಅಂಗೀಕರಿಸಿದೆ. ಇದರೊಂದಿಗೆ ಹಳೆಯ ಮತ್ತು ಅನಗತ್ಯ ಎನಿಸುವ ನೂರಾರು ಕಾನೂನುಗಳಿಗೆ ಬ್ರೇಕ್ ಬಿದ್ದಂತಾಗಿದೆ.
ಈ ಹಿಂದೆ ಸಣ್ಣಪುಟ್ಟ ತಾಂತ್ರಿಕ ಅಥವಾ ಕಾರ್ಯವಿಧಾನದ ತಪ್ಪುಗಳಿಗೆ ಉದ್ಯಮಿಗಳಿಗೆ ಮತ್ತು ನಾಗರಿಕರಿಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಈಗ ಅಂತಹ 717 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗಿದ್ದು, ಶಿಕ್ಷೆಯ ಬದಲಿಗೆ ಕೇವಲ ದಂಡ (Penalty) ವಿಧಿಸಲಾಗುತ್ತದೆ.
ಮೋಟಾರ್ ವಾಹನ ಕಾಯ್ದೆ, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ, ಪರಿಸರ ಸಂರಕ್ಷಣಾ ಕಾಯ್ದೆ ಸೇರಿದಂತೆ ಸುಮಾರು 79 ಪ್ರಮುಖ ಕಾಯ್ದೆಗಳಲ್ಲಿ ಬದಲಾವಣೆ ತರಲಾಗಿದೆ.ಹೊಸ ಕಾನೂನಿನ ಅನ್ವಯ, ವಿಧಿಸಲಾಗುವ ದಂಡದ ಮೊತ್ತವು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ. 10ರಷ್ಟು ಸ್ವಯಂಚಾಲಿತವಾಗಿ ಏರಿಕೆಯಾಗಲಿದೆ. ಇದರಿಂದ ಪದೇ ಪದೇ ಕಾನೂನು ತಿದ್ದುಪಡಿ ಮಾಡುವ ಅವಶ್ಯಕತೆ ಇರುವುದಿಲ್ಲ.








