ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾದ ಧರ್ಮರಾಯಸ್ವಾಮಿ ದೇವಸ್ಥಾನದ ಕರಗ ಮಹೋತ್ಸವ ಬುಧವಾರ ಮಧ್ಯರಾತ್ರಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ಕರಗವನ್ನು ಹೊತ್ತ ಜ್ಞಾನೇಂದ್ರ ಅವರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದಂತೆ ಭಕ್ತಸಾಗರವೇ ಹರಿದುಬಂದಿತ್ತು.
ಸಂಪ್ರದಾಯದ ನಡಿಗೆ: ಅರ್ಚಕ ಎ. ಜ್ಞಾನೇಂದ್ರ ಅವರು ಶಾಸ್ತ್ರೋಕ್ತವಾಗಿ ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. “ಗೋವಿಂದಾ… ಗೋವಿಂದಾ…” ಎಂಬ ನಾಮಸ್ಮರಣೆ ನಗರದಾದ್ಯಂತ ಮೊಳಗಿತು.
ದೀಪಾಲಂಕಾರದ ವೈಭವ: ಕರಗ ಉತ್ಸವದ ಹಿನ್ನೆಲೆಯಲ್ಲಿ ಇಡೀ ನಗರವನ್ನು ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಕೆ.ಆರ್. ಮಾರ್ಕೆಟ್, ಅವೆನ್ಯೂ ರಸ್ತೆ ಮತ್ತು ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳು ಕಂಗೊಳಿಸುತ್ತಿದ್ದವು.
ಮುಸ್ತಾನ್ ಸಾಬ್ ದರ್ಗಾದಲ್ಲಿ ಧೂಪಾರತಿ: ಭಾವೈಕ್ಯತೆಯ ಸಂಕೇತವಾಗಿ ಕರಗವು ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಹಜರತ್ ತವಕಲ್ ಮಸ್ತಾನ್ ಷಾ ದರ್ಗಾಕ್ಕೆ ಭೇಟಿ ನೀಡಿತು. ಅಲ್ಲಿ ವಿಶೇಷ ಧೂಪಾರತಿ ಸ್ವೀಕರಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆಯಲಾಯಿತು.
ಬೃಹತ್ ಜನಸ್ತೋಮ: ಕರಗ ವೀಕ್ಷಿಸಲು ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ವಿಶೇಷ ಆಕರ್ಷಣೆಗಳು:
ಉತ್ಸವದ ವೇಳೆ ಭಕ್ತರು ರಸ್ತೆಯುದ್ದಕ್ಕೂ ಕರ್ಪೂರ ಹಚ್ಚಿ ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಆವರಣದಲ್ಲಿ ಭಕ್ತರು “ಆರ್ಸಿಬಿ ಗೆಲ್ಲಲಿ” ಎಂದು ಹಾಗೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ಮೊರೆ ಇಟ್ಟ ದೃಶ್ಯಗಳು ಕಂಡುಬಂದವು.








