ಬೆಂಗಳೂರು: ನಗರದಲ್ಲಿ ನಡೆಯುವಂತ ಐಪಿಎಲ್ ಪಂದ್ಯಾವಳಿ ವೀಕ್ಷಣೆಗೆ ತೆರಳುವಂತ ಅಭಿಮಾನಿಗಳಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದೆ. ಅದೇ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಐಪಿಎಲ್ ಪಂದ್ಯಾವಳಿಗಳಂದು ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದ್ದು, ದಿನಾಂಕ 28ನೇ ಮಾರ್ಚ್ 2026ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದ ಪ್ರಯುಕ್ತ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್ಸಿಎಲ್) ಪ್ರಯಾಣಿಕರಿಗೆ ಸುಲಭ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಮೆಟ್ರೋ ರೈಲು ಸೇವಾಅವದಿಯನ್ನು ವಿಸ್ತರಿಸಿದೆ ಎಂದಿದೆ.
ಪಂದ್ಯದ ದಿನದಂದು, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11:00 ಗಂಟೆಯಿಂದ ಮುಂದಿನ ದಿನದ ಮುಂಜಾನೆ 2:00 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಕೆಳಗಿನ ವೇಳಾಪಟ್ಟಿಯಂತೆ ಹೊರಡಲಿವೆ:
ವೈಟ್ಫೀಲ್ಡ್ (ಕಾಡುಗೋಡಿ) ಯಿಂದ ರಾತ್ರಿ 12.30ಕ್ಕೆ ಮತ್ತು ಚೆಲ್ಲಘಟ್ಟ ದಿಂದ ರಾತ್ರಿ 12.45ಕ್ಕೆ.
ರೇಷ್ಮೆ ಸಂಸ್ಥೆ ಹಾಗೂ ಮಾದಾವರ ದಿಂದ ರಾತ್ರಿ 12.45ಕ್ಕೆ.
ಬೊಮ್ಮಸಂದ್ರ ದಿಂದ ರಾತ್ರಿ 01.00ಕ್ಕೆ ಹಾಗೂ ಆರ್.ವಿ. ರಸ್ತೆ ಯಿಂದ ರಾತ್ರಿ 02.00ಕ್ಕೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ.
ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸಲು ಐಪಿಎಲ್ ಪಂದ್ಯದ ಟಿಕೆಟ್ಗಳಲ್ಲಿ ನಮ್ಮ ಮೆಟ್ರೋ ಕ್ಯೂಆರ್ ಕೋಡ್ ಎರಡು ಪ್ರಯಾಣಕ್ಕೆ (ಟು-ವೇ ಟ್ರಾವೆಲ್), ಐಪಿಎಲ್ ಟಿಕೆಟ್ ಮೇಲೆಯೇ ಮುದ್ರಿತವಾಗಿರುತ್ತದೆ ಅಥವ ಡಿಜಿಟಲ್ ಐಪಿಎಲ್ ಟಿಕೆಟ್ಗಳೊಂದಿಗೆ ಲಭ್ಯವಿರುತ್ತದೆ.
ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ /ನಿರ್ಗಮನ ಗೇಟ್ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಹಾಗೂ ಲಿಂಕ್ ರಸ್ತೆ ಭಾಗದಿಂದ ಪ್ರವೇಶ / ನಿರ್ಗಮನ ಗೇಟ್ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.
ಪಂದ್ಯದ ದಿನದಂದು ಪ್ರೇಕ್ಷಕರಿಗೆ ಅನುಕೂಲವಾಗಲು ಮತ್ತು ನಮ್ಮ ಮೆಟ್ರೋದಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಲು, ಬಿಎಂಆರ್ಸಿಎಲ್ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿದೆ. ಪಂದ್ಯದ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸೌಲಭ್ಯವನ್ನು ಎರಡು ಚಕ್ರ ವಾಹನಗಳಿಗೆ ರೂ. 30/- ಮತ್ತು ಕಾರುಗಳಿಗೆ ರೂ. 60/- ನಿಗದಿತ ದರದಲ್ಲಿ ಒದಗಿಸಲಾಗುತ್ತದೆ. ಈ ದರವು ಆ ದಿನದ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾನ್ಯವಾಗಿರುತ್ತದೆ. (ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ನಿಲ್ದಾಣದ ವಿವರಗಳು ಅನುಬಂಧದಲ್ಲಿ ಲಭ್ಯವಿವೆ).
ಪ್ರೇಕ್ಷಕರು ತಮ್ಮ ವಾಹನಗಳನ್ನು ನಿಗದಿತ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ, ಮೆಟ್ರೋ ಮೂಲಕ ಸ್ಟೇಡಿಯಂಗೆ ನಡೆದು ಹೋಗಬಹುದಾದ ಅಂತರದಲ್ಲಿರುವ ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸುವಂತೆ ಸಲಹೆ ನೀಡಲಾಗಿದೆ. ಇದರಿಂದ ಕೇಂದ್ರ ವ್ಯವಹಾರ ಪ್ರದೇಶ (ಸಿಬಿಡಿ) ಹಾಗೂ ಸ್ಟೇಡಿಯಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲು ಸಹಾಯವಾಗುತ್ತದೆ.
ಪ್ರಯಾಣಿಕರು ಸುಗಮ ಸಂಚಾರ, ಸುರಕ್ಷತೆ ಮತ್ತು ಜನಸಂದಣಿಯನ್ನು ತಪ್ಪಿಸಲು ಪೊಲೀಸ್, ಸ್ಟೇಡಿಯಂ ನಿರ್ವಹಣೆ ಮತ್ತು ಬಿಎಂಆರ್ಸಿಎಲ್ ಸಿಬ್ಬಂದಿಯ ನಿರ್ದೇಶನಗಳನ್ನು ಅನುಸರಿಸಲು ವಿನಂತಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಯಾವುದೇ ಅನಾಹುತಗಳು ಅಥವಾ ಅಹಿತಕರ ಘಟನೆಗಳನ್ನು ತಡೆಗಟ್ಟುವ ಹಿತದೃಷ್ಟಿಯಿಂದ, ಅಗತ್ಯವಿದ್ದಲ್ಲಿ ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು ಬಿಎಂಆರ್ಸಿಎಲ್ ಹೊಂದಿರುತ್ತದೆ.
ಸಾರ್ವಜನಿಕರ ಮತ್ತು ಮೆಟ್ರೋ ಪ್ರಯಾಣಿಕರ ಅನೂಕೂಲಕ್ಕಾಗಿ ಈ ಮಾಹಿತಿಯನ್ನು ವ್ಯಾಪಕ ಪ್ರಚಾರವನ್ನು ನೀಡಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ವಿನಂತಿಸಿದೆ.








