ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಬಡ್ತಿ (Promotion) ನೀಡುವ ಪ್ರಕ್ರಿಯೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ಇನ್ಮುಂದೆ ಗ್ರೂಪ್-ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ವೃಂದದ ನೌಕರರು ಮುಂದಿನ ಹಂತಕ್ಕೆ ಬಡ್ತಿ ಪಡೆಯಬೇಕಾದರೆ ನಿಗದಿತ ತರಬೇತಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಈ ಕುರಿತು ‘ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2026’ ಅನ್ನು ಜಾರಿಗೊಳಿಸಿ ಸರ್ಕಾರ ಅಧಿಕೃತ ರಾಜ್ಯಪತ್ರ ಹೊರಡಿಸಿದೆ.
ಸುದ್ದಿಯ ಪ್ರಮುಖ ಅಂಶಗಳು:
ಯಾರಿಗೆ ಅನ್ವಯ?: ಈ ನಿಯಮವು ರಾಜ್ಯ ನಾಗರಿಕ ಸೇವೆಯಲ್ಲಿರುವ ಗ್ರೂಪ್-ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ನೌಕರರಿಗೆ ಅನ್ವಯಿಸುತ್ತದೆ.
ಯಾರಿಗೆ ವಿನಾಯಿತಿ?: ಗ್ರೂಪ್-ಸಿ ವೃಂದದ ವಾಹನ ಚಾಲಕರು, ಗ್ರೂಪ್-ಡಿ ನೌಕರರು ಹಾಗೂ ನಿವೃತ್ತಿಗೆ ಕೇವಲ 2 ವರ್ಷಗಳಿಗಿಂತ ಕಡಿಮೆ ಅವಧಿ ಬಾಕಿ ಇರುವ ನೌಕರರಿಗೆ ಈ ತರಬೇತಿಯಿಂದ ವಿನಾಯಿತಿ ನೀಡಲಾಗಿದೆ.
ತರಬೇತಿಯ ಸ್ವರೂಪ: ಇಲಾಖಾ ಮುಖ್ಯಸ್ಥರು ನಿಗದಿಪಡಿಸುವ ಆಫ್ಲೈನ್, ಆನ್ಲೈನ್ ಅಥವಾ ಹೈಬ್ರಿಡ್ ಮಾದರಿಯ ತರಬೇತಿಗಳನ್ನು ನೌಕರರು ಪಡೆಯಬೇಕಾಗುತ್ತದೆ.
ಬಡ್ತಿಗೆ ನಿರ್ಬಂಧ: ತರಬೇತಿಯ ಅಧಿಸೂಚನೆ ಹೊರಬಂದ ಆರು ತಿಂಗಳೊಳಗೆ ಅದನ್ನು ಪೂರ್ಣಗೊಳಿಸದಿದ್ದರೆ, ಅಂತಹ ನೌಕರರು ಬಡ್ತಿ ಪಡೆಯಲು ಅರ್ಹರಾಗುವುದಿಲ್ಲ.
ಆನ್ಲೈನ್ ತರಬೇತಿ (iGOT): ಪ್ರತಿಯೊಬ್ಬ ನೌಕರನು ಆಫ್ಲೈನ್ ತರಬೇತಿಯ ಜೊತೆಗೆ ‘ಇಂಟಿಗ್ರೇಟೆಡ್ ಗೌರ್ನಮೆಂಟ್ ಆನ್ಲೈನ್ ಟ್ರೈನಿಂಗ್’ (iGOT) ವೇದಿಕೆಯ ಮೂಲಕ ನಿಗದಿತ ಆನ್ಲೈನ್ ಕೋರ್ಸ್ಗಳನ್ನು ಪೂರ್ಣಗೊಳಿಸಬೇಕು ಮತ್ತು ಪ್ರತಿ ವರ್ಷ ಕನಿಷ್ಠ ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಜಾರಿಗೆ ಬಂದ ದಿನಾಂಕ: ಈ ನಿಯಮಗಳು ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದಲೇ (ಮಾರ್ಚ್ 23, 2026) ಜಾರಿಗೆ ಬಂದಿವೆ.
ಏನಿದೆ ಸರ್ಕಾರದ ಆದೇಶದಲ್ಲಿ?
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯ್ದೆ, 1978 (1990 ರ ಕರ್ನಾಟಕ ಕಾಯ್ದೆ 14) ರ 8ನೇ ಪ್ರಕರಣದ ಜೊತೆ ಓದಲಾದ 3ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ (ಆಸು) 23 ಇಆತ 2024, ದಿನಾಂಕ: 14-10-2025 ರಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2025 ರ ಕರಡನ್ನು ಕರ್ನಾಟಕ ರಾಜ್ಯ ಪತ್ರ ಭಾಗ IV-A (ಸಂಖ್ಯೆ: 652) ರಲ್ಲಿ ಪ್ರಕಟಿಸಿ, ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು.
ಸದರಿ ರಾಜ್ಯ ಪತ್ರವನ್ನು ದಿನಾಂಕ: 14-10-2025 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಈ ಕರಡು ನಿಯಮಗಳಿಗೆ ಸ್ವೀಕರಿಸಲಾದ ಆಕ್ಷೇಪಣೆಗಳು / ಸಲಹೆ / ಸೂಚನೆಗಳನ್ನು ಪರಿಗಣಿಸಲಾಗಿದ್ದು, ಅವುಗಳನ್ನು ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಸೂಕ್ತವಾಗಿಲ್ಲ ದಿರುವುದರಿಂದ, ಈಗ, ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990ರ ಅಧಿನಿಯಮ ಸಂಖ್ಯೆ:14)ರ 3ನೇ ಪ್ರಕರಣದ 1ನೇ ಉಪಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
ಶೀರ್ಷಿಕೆ, ಪ್ರಾರಂಭ ಮತ್ತು ಅನ್ವಯ:- (1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು, 2026 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು, ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
(3) ಅನ್ವಯ: ಈ ನಿಯಮಗಳು ರಾಜ್ಯದ ನಾಗರಿಕ ಸೇವೆಗಳಲ್ಲಿ ಗ್ರೂಪ್-ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳನ್ನು ಒಳಗೊಂಡಿರುವ ವೃಂದಗಳಲ್ಲಿ ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರರಿಗೆ ಅನ್ವಯಿಸುತ್ತವೆ ಮತ್ತು ಗ್ರೂಪ್-ಸಿ ಯಲ್ಲಿ ಚಾಲಕರ ಹುದ್ದೆಗಳನ್ನು ಹೊಂದಿರುವವರಿಗೆ ಮತ್ತು ಗ್ರೂಪ್-ಡಿ ಹುದ್ದೆಗಳನ್ನು ಹೊಂದಿರುವವರಿಗೆ ಮತ್ತು ಸರ್ಕಾರವು ಕಾಲಕಾಲಕ್ಕೆ ಅಧಿಸೂಚನೆ ಮಾಡಬಹುದಾದ ಇತರ ಹುದ್ದೆಗಳನ್ನು ಹೊಂದಿರುವವರಿಗೆ ಈ ನಿಯಮಗಳು ಅನ್ವಯಿಸತಕ್ಕದ್ದಲ್ಲ.
ಪರಂತು, ನಿಯಮ 4 ರಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ತರಬೇತಿಯ ಅಧಿಸೂಚನೆಯ ದಿನಾಂಕದಿಂದ ಎರಡು ವರ್ಷಗಳೊಳಗೆ ವಯೋ ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರಿಗೆ ಈ ನಿಯಮಗಳಲ್ಲಿರುವ ಯಾವುದೂ ಅನ್ವಯಿಸತಕ್ಕದ್ದಲ್ಲ.
ವ್ಯಾಖ್ಯಾನಗಳು: (1) ಈ ನಿಯಮಗಳಲ್ಲಿ, ಸಂದರ್ಭವು ಬೇರೆ ರೀತಿಯಲ್ಲಿ ಅಗತ್ಯಪಡಿಸದ ಹೊರತು,-
i. “ಸರ್ಕಾರ” ಎಂದರೆ ಕರ್ನಾಟಕ ಸರ್ಕಾರ;
ii. “ತರಬೇತಿ” ಎಂದರೆ, ತರಬೇತಿಯ ಕೋರ್ಸ್, ನಿಯಮ 4 ಮತ್ತು 5 ರ ಅಡಿಯಲ್ಲಿ ಅಧಿಸೂಚಿಸಿದಂತೆ ಆಫ್ಲೈನ್, ಆನ್ಲೈನ್ ಅಥವಾ ಹೈಬ್ರಿಡ್ ತರಬೇತಿ.
(2) ಪ್ರಸ್ತಾಪಿತ ಕರಡು ನಿಯಮಗಳಲ್ಲಿ ಬಳಸಲಾದ ಮತ್ತು ಪರಿಭಾಷಿಸದೇ ಇರುವ ಪದಗಳಿಗೆ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957 ರಲ್ಲಿ ಪರಿಭಾಷಿಸಿರುವಂತೆ ಅನ್ವಯಿಸತಕ್ಕದ್ದು.
3. ಹೆಚ್ಚುವರಿ ಅರ್ಹತೆಯಾಗಿ ನಿರ್ದಿಷ್ಟ ತರಬೇತಿ.- ಯಾವುದೇ ಸೇವೆ ಅಥವಾ ಹುದ್ದೆಗೆ
ಸಂಬಂಧಿಸಿದಂತೆ ನಿರ್ದಿಷ್ಟ ತರಬೇತಿಯನ್ನು ಪೂರ್ಣಗೊಳಿಸುವುದನ್ನು ಬಡ್ತಿಗೆ ಅಗತ್ಯವಾದ ಅರ್ಹತೆಯಾಗಿ ನಿಗದಿಪಡಿಸಿ ವಿಶೇಷವಾಗಿ ರಚಿಸಲಾದ ನೇಮಕಾತಿ ನಿಯಮಗಳಿಗೆ ಹೆಚ್ಚುವರಿಯಾಗಿ ಈ ನಿಯಮಗಳು ಇರತಕ್ಕದ್ದು. ನಿಯಮ 4 ರಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ತರಬೇತಿಯನ್ನು ಅಧಿಸೂಚನೆಯ ದಿನಾಂಕದಿಂದ ಆರು ತಿಂಗಳ ಅವಧಿಯೊಳಗೆ ಪೂರ್ಣಗೊಳಿಸದಿದ್ದಲ್ಲಿ ಯಾವುದೇ ಸರ್ಕಾರಿ ನೌಕರನು ಬಡ್ತಿಗೆ ಅರ್ಹನಾಗತಕ್ಕದ್ದಲ್ಲ.
ವಿವರಣೆ: ಈ ನಿಯಮಗಳು ಪ್ರಾರಂಭವಾದ ದಿನಾಂಕ ಮತ್ತು ನಿಯಮ 4 ರ ಅಡಿಯಲ್ಲಿ ತರಬೇತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸುವ ದಿನಾಂಕದ ನಡುವೆ ಬಡ್ತಿಯ ಸಂದರ್ಭ ಉಂಟಾದಲ್ಲಿ, ಈ ನಿಯಮಗಳ ಅಡಿಯಲ್ಲಿ ತರಬೇತಿಯನ್ನು ಉಲ್ಲೇಖಿಸದೆ ಬಡ್ತಿಗಳನ್ನು ಜಾರಿಗೆ ತರಬಹುದು.
ಮುಖ್ಯ ಉದ್ದೇಶ:
ಸರ್ಕಾರಿ ನೌಕರರ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು ಮತ್ತು ಅವರು ನಿರ್ವಹಿಸುವ ಹುದ್ದೆಗೆ ಅಗತ್ಯವಿರುವ ಕ್ಷೇತ್ರ ಜ್ಞಾನ ಹಾಗೂ ಕೌಶಲ್ಯಗಳನ್ನು ವೃದ್ಧಿಸುವುದು ಈ ಹೊಸ ನಿಯಮದ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.









