ಬೆಂಗಳೂರು : ಸರ್ಕಾರದ ಒಳಮಿಸಲಾತಿ ನೀತಿ, ಆಯೋಗಗಳ ವರದಿ ಹಾಗೂ ರೋಸ್ಟರ್ ವ್ಯವಸ್ಥೆಗಳ ವಿರೋಧವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಮಾ. 24ರಂದು ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ವಸಂತನಗರದ ಜಸ್ಮಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ, ಬಂಜಾರ,ಕೊರಮ,ಕೊರಚ,ಸೂಕ್ಷ್ಮ,ಅತಿಸೂಕ್ಷ್ಮ ಹಾಗೂ ಅಲೆಮಾರಿಗಳ 59 ಜಾತಿಗಳಿಗೆ ಅನ್ಯಾಯವಾಗುತ್ತಿದ್ದು, ಪರಿಶಿಷ್ಟ ಜಾತಿಗಳ ಒಳಮಿಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವೈಜ್ಞಾನಿಕವಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ವರದಿ ಅಪೂರ್ಣವಾಗಿದ್ದು, ಸಮೀಕ್ಷೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂಬ ಆಕ್ಷೇಪವನ್ನು ಹಲವಾರು ಸಂಘಟನೆಗಳು ವ್ಯಕ್ತಪಡಿಸಿದ್ದರೂ, ಅದನ್ನು ಪರಿಗಣಿಸದೆ ವರದಿ ಸಲ್ಲಿಸಲಾಗಿದೆ ಎಂದರು.
ಆಯೋಗದ ವರದಿಯಲ್ಲಿ ಭೋವಿ, ಬಂಜಾರ, ಕೊರಮ, ಕೊರಚ ಹಾಗೂ ಇತರ ಸೂಕ್ಷ್ಮ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ಲೆಕ್ಕಿಸಿಲ್ಲ. ಉದಾಹರಣೆಗೆ, 2011ರ ಜನಗಣತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಇದ್ದ ಭೋವಿ ಸಮುದಾಯವನ್ನು ವರದಿಯಲ್ಲಿ ಅತಿ ಕಡಿಮೆ ಏರಿಕೆ ತೋರಿಸಲಾಗಿದೆ. ಇದರಿಂದ ಸಮುದಾಯಗಳ ನಿಜವಾದ ಸ್ಥಿತಿ ಪ್ರತಿಬಿಂಬಿಸಲ್ಪಟ್ಟಿಲ್ಲ.ಇನ್ನೂ ಆಯೋಗವೇ ಸಲ್ಲಿಸಿರುವ ವರದಿಯಲ್ಲಿಯೇ ಈ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀವ್ರ ಹಿಂದುಳಿದಿವೆ ಎಂದು 26 ಕೋಷ್ಟಕಗಳಲ್ಲಿ 19ರಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೂ, ಸರ್ಕಾರವು ಒಳಮಿಸಲಾತಿಯನ್ನು ರೂಪಿಸುವಾಗ ಈ ಅಂಶಗಳನ್ನು ಸೂಕ್ತವಾಗಿ ಪರಿಗಣಿಸಿಲ್ಲ ಎಂದರು.
ಸರ್ಕಾರ ರೂಪಿಸಿರುವ ಪ್ರವರ್ಗ A, B, C ವಿಭಾಗೀಕರಣವೂ ಜನಸಂಖ್ಯಾ ಅನುಪಾತಕ್ಕೆ ಅನುಗುಣವಾಗಿಲ್ಲ. ವಿಶೇಷವಾಗಿ ರೋಸ್ಟರ್ ವ್ಯವಸ್ಥೆ ಅವೈಜ್ಞಾನಿಕವಾಗಿದೆ. ಹಿಂದಿನ ಸರ್ಕಾರದಲ್ಲಿ 560 ಹುದ್ದೆಗಳ ನೇಮಕಾತಿಯಲ್ಲಿ ಒಂದು ಪ್ರವರ್ಗಕ್ಕೆ ಬಹುಪಾಲು ಹುದ್ದೆಗಳು ನೀಡಲಾಗಿದ್ದು, ಪ್ರವರ್ಗ Cಗೆ ಶೂನ್ಯ ಅವಕಾಶ ದೊರೆತಿದೆ. ಹೊಸ ರೋಸ್ಟರ್ನಲ್ಲಿ ಪ್ರವರ್ಗ Cಗೆ ಶೂನ್ಯ ಸ್ಥಾನ ನೀಡಿರುವುದರಿಂದ, ಈ ಸಮುದಾಯಗಳಿಗೆ ಅವಕಾಶ ಸಿಗುವಷ್ಟರಲ್ಲಿ ತಲೆಮಾರುಗಳು ಕಳೆದು ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಇದು ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ಹಿಂದುಳಿಸುವ ಪ್ರಯತ್ನ ಎಂದರು.
ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ 7% ಹೆಚ್ಚಿಸಿರುವುದನ್ನು ಶೆಡ್ಯೂಲ್ 9ರಲ್ಲಿ ಸೇರಿಸುವ ಮೂಲಕ ಸಂರಕ್ಷಿಸಬೇಕು. ಜೊತೆಗೆ SCP-TSP ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸದೇ ನೇರವಾಗಿ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು. ರಾಜ್ಯದಲ್ಲಿರುವ ವಿವಿಧ ಪರಿಶಿಷ್ಟ ಜಾತಿ ನಿಗಮಗಳಿಗೆ ಜನಸಂಖ್ಯಾ ಆಧಾರಿತವಾಗಿ ಮೀಸಲಾದ ಅನುದಾನವನ್ನು ನೇರವಾಗಿ ಬಿಡುಗಡೆ ಮಾಡುವ ಮೂಲಕ ಸಮುದಾಯಗಳ ಅಭಿವೃದ್ಧಿಗೆ ವೇಗ ನೀಡಬೇಕು. ಇದಲ್ಲದೆ, ಪರಿಶಿಷ್ಟ ಜಾತಿಯಲ್ಲಿ ಒಳಪಡುವ 101 ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ, ಎಲ್ಲರ ಅಭಿಪ್ರಾಯಗಳನ್ನು ಪಡೆದು ಸಮಗ್ರ ಹಾಗೂ ನ್ಯಾಯಯುತ ಒಳಮಿಸಲಾತಿ ನೀತಿಯನ್ನು ರೂಪಿಸಬೇಕು ಎಂದರು.
ಮಾ. 27ರಂದು ಒಳಮಿಸಲಾತಿ ಕುರಿತ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಸರ್ಕಾರವು ಈ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು. ಸದ್ಯ ಸರ್ಕಾರ ಭರ್ತಿ ಮಾಡಲು ಉದ್ದೇಶಿಸಿರುವ 56 ಸಾವಿರ ಹುದ್ದೆಗಳನ್ನು ಯಾವುದೇ ಒಳಮಿಸಲಾತಿ ಜಾರಿಗೊಳಿಸದೆ ಭರ್ತಿ ಮಾಡಬಾರದು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಮಾನ ಅವಕಾಶಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಈ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ. ಒಟ್ಟಾರೆ, ಪರಿಶಿಷ್ಟ ಜಾತಿಯ ಎಲ್ಲಾ 101 ಸಮುದಾಯಗಳಿಗೆ ಸಮಾನ ನ್ಯಾಯ ದೊರಕಬೇಕು, ಮಲತಾಯಿ ಧೋರಣೆಗೆ ಅಂತ್ಯ ಬರಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಮಾ. 24ರಂದು ನಡೆಯಲಿರುವ ಈ ಸಮಾವೇಶ ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಗಮನ ಸೆಳೆಯುವ ಸಾಧ್ಯತೆ ಇದ್ದು, ರಾಜ್ಯದ ವಿವಿಧ ಭಾಗಗಳಿಂದ 1 ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದರು.
ಮೀಸಲಾತಿ ಒಕ್ಕೂಟದ ಅಧ್ಯಕ್ಷರಾದ ಡಾ.ಹೆಚ್. ರವಿ ಮಾಕಳಿ ಮಾತನಾಡಿ, ಬೋವಿ, ಕೊರಚ, ಕೊರಮ, ಲಂಬಾಣಿ ಸೇರಿದಂತೆ ವಿವಿಧ ಜನಾಂಗಗಳ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಮಾ.24 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ರಾಜ್ಯದ ವಿವಿಧ ಭಾಗಗಳಿಂದ ಸುಮಾರು 2 ರಿಂದ 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಧ್ಯಕ್ಷ ರಾಘವೇಂದ್ರ ನಾಯಕ್ ಮಾತನಾಡಿ, ಒಳಮೀಸಲಾತಿ ಅನುಷ್ಠಾನಕ್ಕೆ ಮುನ್ನ ಸಮಗ್ರ ಪ್ರಾಯೋಗಿಕ ದತ್ತಾಂಶ ಆಧಾರಿತ ಅಧ್ಯಯನ ಅಗತ್ಯವಿದೆ.ಆದರೆ ರಾಜ್ಯ ಸರ್ಕಾರವು ಈ ಸಂಬಂಧ ಸೂಕ್ತ ಮಾಹಿತಿಯಿಲ್ಲದೆ ತ್ವರಿತ ನಿರ್ಧಾರ ಕೈಗೊಂಡಿದೆ.ಸುಪ್ರೀಂ ಕೋರ್ಟ್ ತೀರ್ಪುಗಳಲ್ಲೂ ಸಮುದಾಯಗಳ ಹಿಂದುಳಿತ್ವವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಆದರೂ ರಾಜ್ಯ ಸರ್ಕಾರ ಈ ಅಂಶಗಳನ್ನು ಪರಿಗಣಿಸದೇ A, B, C ವರ್ಗೀಕರಣ ಘೋಷಿಸಿರುವುದು ಅನ್ಯಾಯ.
ಕಾರ್ಯಾಧ್ಯಕ್ಷ ಅನಂತನಾಯಕ ಮಾತನಾಡಿ ಹಳೆಯ ಮೀಸಲಾತಿ ನಿಯಮದಂತೆ ನೇಮಕಾತಿ ಮಾಡಿಕೊಳ್ಳುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವುದು ಸ್ವಾಗತಾರ್ಹ. ಪ್ರಸ್ತುತ ಅವೈಜ್ಞಾನಿಕ ಮತ್ತು ಅನ್ಯಾಯ ಉದ್ದೇಶದಿಂದ ಕೂಡಿರುವ ರೊಸ್ಟರ್ ಆದೇಶ ಹಿಂಪಡೆಯಬೇಕು ಎಂದರು.
ಒಕ್ಕೂಟದ ಉಪಾಧ್ಯಕ್ಷ ಆದರ್ಶಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಹಾವೇರಿ ರವಿ ಪೂಜಾರ, ಕೊರಚ ಸಮುದಾಯದ ಕೃಷ್ಣಪ್ಪ , ಆನೆಕಲ್ ಚಿನ್ನಸ್ವಾಮಿ, ಶ್ರೀನಿವಾಸ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಾಗರದ ಆನಂದಪುರದಲ್ಲಿ ಹೈಟೆನ್ಷನ್ ವಿದ್ಯುತ್ ಲೈನ್ ಸರ್ವೇ ವೇಳೆ ಹಲ್ಲೆ; ಏಳು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು
ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!








