ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರುವ ಸಮಯ ಕೂಡಿಬಂದಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಸ್ಲಿಂ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಪೀಠವು ಈ ಕುರಿತು ಕೇಂದ್ರ ಸರ್ಕಾರವು ನೀತಿಯನ್ನು ರೂಪಿಸಬೇಕು ಎಂದು ಸೂಚಿಸಿದೆ.
ಪ್ರಕರಣದ ಹಿನ್ನೆಲೆ ಮತ್ತು ನ್ಯಾಯಾಲಯದ ವಾದಗಳು:
ಮುಸ್ಲಿಂ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಅವಕಾಶ ಮಾಡಿಕೊಡುವ 1937ರ ಶರಿಯತ್ ಕಾಯ್ದೆಯ ನಿಬಂಧನೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ಒಂದು ವೇಳೆ ನ್ಯಾಯಾಲಯವು ಶರಿಯತ್ ಕಾಯ್ದೆಯ ಉತ್ತರಾಧಿಕಾರ ವಿಧಿಯನ್ನು ರದ್ದುಗೊಳಿಸಿದರೆ, ಆ ಜಾಗದಲ್ಲಿ ಪರ್ಯಾಯ ಕಾನೂನು ಇಲ್ಲದೆ ಕಾನೂನು ಶೂನ್ಯತೆ (Vacuum) ನಿರ್ಮಾಣವಾಗಬಹುದು. ಆದ್ದರಿಂದ ಈ ವಿಚಾರದಲ್ಲಿ ಶಾಸಕಾಂಗವೇ ಸೂಕ್ತ ತೀರ್ಮಾನ ಕೈಗೊಳ್ಳುವುದು ಒಳಿತು ಎಂದು ಪೀಠವು ಕಳವಳ ವ್ಯಕ್ತಪಡಿಸಿತು.
ತಾರತಮ್ಯಕ್ಕೆ ಯುಸಿಸಿ ಪರಿಹಾರ: ಅರ್ಜಿ ವಿಚಾರಣೆ ವೇಳೆ ಮಾತನಾಡಿದ ಸಿಜೆಐ ಸೂರ್ಯಕಾಂತ್, “ಮಹಿಳೆಯರ ವಿರುದ್ಧದ ತಾರತಮ್ಯದ ಸಮಸ್ಯೆಗಳಿಗೆ ಏಕರೂಪ ನಾಗರಿಕ ಸಂಹಿತೆಯೇ ಅಂತಿಮ ಉತ್ತರವಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಸರ್ಕಾರಕ್ಕೆ ಅಧಿಕಾರವಿದೆ: ಸಂವಿಧಾನದ ಅಡಿಯಲ್ಲಿ ಸರ್ಕಾರಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಪೂರ್ಣ ಅಧಿಕಾರವಿದೆ. ಸುಧಾರಣೆಗಳ ಕುರಿತು ಅತಿಯಾದ ಆತುರ ತೋರುವುದು ಮುಸ್ಲಿಂ ಮಹಿಳೆಯರಿಗೆ ಅನುಕೂಲವಾಗುವ ಬದಲು ಅನನುಕೂಲವನ್ನೂ ಉಂಟುಮಾಡಬಹುದು. ಆದ್ದರಿಂದ ಕೇಂದ್ರವು ಈ ಬಗ್ಗೆ ಗಂಭೀರವಾಗಿ ಯೋಚಿಸಿ ನೀತಿ ರೂಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಮುಸ್ಲಿಂ ಮಹಿಳೆಯರ ಉತ್ತರಾಧಿಕಾರ ಹಕ್ಕಿನಲ್ಲಿರುವ ತಾರತಮ್ಯದ ಬಗ್ಗೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದ್ದರು.’ಒಬ್ಬನಿಗೆ ಒಬ್ಬಳೇ ಹೆಂಡತಿ’ ಎಂಬ ಕಾನೂನು ಎಲ್ಲಾ ಸಮುದಾಯಗಳಲ್ಲಿ ಏಕರೂಪವಾಗಿ ಜಾರಿಯಾಗಿಲ್ಲ ಎಂಬ ಅಂಶವೂ ಚರ್ಚೆಗೆ ಬಂದಿತು. ಎಲ್ಲಾ ಬಹುಪತ್ನಿತ್ವ ಪ್ರಕರಣಗಳನ್ನು ಅಸಂವಿಧಾನಿಕ ಎಂದು ಘೋಷಿಸುವ ಬದಲು, ಸಮಗ್ರವಾಗಿ ಯುಸಿಸಿ ಮೂಲಕ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂಬುದು ನ್ಯಾಯಾಲಯದ ನಿಲುವಾಗಿದೆ.
ಈ ವಿಚಾರವನ್ನು ಕೇಂದ್ರ ಸರ್ಕಾರದ ವಿವೇಚನೆಗೆ ಬಿಡುವುದು ಮತ್ತು ಕಾನೂನು ರೂಪಿಸಲು ಪ್ರೇರೇಪಿಸುವುದು ಸದ್ಯದ ಹಾದಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.








