ಬೆಂಗಳೂರು: ರಾಜ್ಯದ ಅನ್ನದಾತರಿಗೆ ಇಂಧನ ಇಲಾಖೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಮುಂದಿನ ಮೂರು ತಿಂಗಳ ಒಳಗಾಗಿ ತಮ್ಮ ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮ ಮಾಡಿಕೊಳ್ಳದಿದ್ದಲ್ಲಿ, ಅಂತಹ ಸಂಪರ್ಕಗಳನ್ನು ಕಾಯಂ ಆಗಿ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ಕ್ಷೇತ್ರದಲ್ಲಿನ ವಿದ್ಯುತ್ ಅವ್ಯವಸ್ಥೆಯನ್ನು ಸರಿಪಡಿಸಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಸಚಿವರು ಸದನಕ್ಕೆ ನೀಡಿದ ಮಾಹಿತಿಯ ಪ್ರಕಾರ, ಸಾಮಾನ್ಯವಾಗಿ ಒಂದು ವಿದ್ಯುತ್ ಪರಿವರ್ತಕಕ್ಕೆ (Transformer) ಎರಡರಿಂದ ಮೂರು ಪಂಪ್ಸೆಟ್ಗಳ ಭಾರ ಹೊರುವ ಸಾಮರ್ಥ್ಯವಿರುತ್ತದೆ. ಆದರೆ ಸದ್ಯ ಹತ್ತಾರು ಅಕ್ರಮ ಪಂಪ್ಸೆಟ್ಗಳನ್ನು ಒಂದೇ ಟಿಸಿಗೆ ಅಳವಡಿಸುತ್ತಿರುವುದರಿಂದ ಓವರ್ ಲೋಡ್ ಆಗಿ ಪರಿವರ್ತಕಗಳು ಪದೇ ಪದೇ ಸುಟ್ಟು ಹೋಗುತ್ತಿವೆ.ಈ ರೀತಿ ಟಿಸಿಗಳು ಸುಡುವುದರಿಂದ ಅವುಗಳ ದುರಸ್ತಿ ಮತ್ತು ಬದಲಾವಣೆ ಸರ್ಕಾರಕ್ಕೆ ಹಾಗೂ ಇಲಾಖೆಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
ಸಕ್ರಮಕ್ಕೆ ಇದುವೇ ಕೊನೆಯ ಅವಕಾಶ!
ರಾಜ್ಯದಲ್ಲಿ ಸದ್ಯ 4.50 ಲಕ್ಷ ಕೃಷಿ ಪಂಪ್ಸೆಟ್ಗಳಿದ್ದು, ಈ ಪೈಕಿ ಈವರೆಗೆ 2.75 ಲಕ್ಷ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಲಾಗಿದೆ. ಇನ್ನುಳಿದ ರೈತರು ಮುಂದಿನ 90 ದಿನಗಳೊಳಗೆ (3 ತಿಂಗಳು) ನಿಗದಿತ ಶುಲ್ಕವನ್ನು ಪಾವತಿಸಿ ತಮ್ಮ ಪಂಪ್ಸೆಟ್ಗಳನ್ನು ಅಧಿಕೃತಗೊಳಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.
ಗಮನಿಸಿ: ಈ ಗಡುವಿನ ನಂತರವೂ ಸಕ್ರಮಗೊಳ್ಳದ ಪಂಪ್ಸೆಟ್ಗಳ ವಿದ್ಯುತ್ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೆ ಕಡಿತಗೊಳಿಸಲು ಇಲಾಖೆ ಸಿದ್ಧತೆ ನಡೆಸಿದೆ.








