ಬೆಂಗಳೂರು: ಜಗತ್ತಿನಾದ್ಯಂತ ಈಗ ‘ಗರ್ಭಕಂಠ ಕ್ಯಾನ್ಸರ್’ ಗುಮ್ಮಾ ಎಲ್ಲರನ್ನೂ ಕಾಡುತ್ತಿದೆ. ಈ ‘ಕ್ಯಾನ್ಸರ್ ಬಗ್ಗೆ ಆತಂಕ ಬೇಡ ಜಾಗೃತಿ ಮುಖ್ಯ’ ಎಂಬ ಕಾರ್ಯಕ್ರಮವನ್ನು ಖ್ಯಾತ ವೈದ್ಯೆ ಡಾ.ಪದ್ಮಿನಿ ಪ್ರಸಾದ್ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಸಲಾಗುತ್ತಿದೆ.
ಖ್ಯಾತ ಸ್ತ್ರೀರೋಗ ತಜ್ಞರೂ ಆಗಿರುವ ಡಾ.ಪದ್ಮಿನಿ ಪ್ರಸಾದ್, ಕಳೆದ ಹಲವು ದಶಕಗಳಿಂದ ಮಹಿಳೆಯರ ಅರೋಗ್ಯ ಕುರಿತಂತೆ ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಅದರ ಜೊತೆಯಲ್ಲೇ ಇದೀಗ ‘ಗರ್ಭಕಂಠ ಕ್ಯಾನ್ಸರ್’ ವಿಚಾರದಲ್ಲಿ ಕೈಗೊಂಡಿರುವ ಅಭಿಯಾನ ಗಮನಸೆಳೆದಿದೆ.
ತಮ್ಮ ನೇತೃತ್ವದ ‘ಭರವಾಸೆ ಚಾರಿಟೇಬಲ್ ಫೌಂಡೇಶನ್’ ವತಿಯಿಂದ ಈ ಅಭಿಯಾನವನ್ನು ಡಾ.ಪದ್ಮಿನಿ ಪ್ರಸಾದ್ ನಡೆಸುತ್ತಿದ್ದಾರೆ. ಪ್ರತಿಷ್ಠಿತ ಜೀವಿಕಾ ಹೆಲ್ತ್ಕೇರ್ ಸಹಯೋಗದೊಂದಿಗೆ ಈ ಅಭಿಯಾನ ನಡೆಸಲಾಗುತ್ತಿದ್ದು, ರಾಜ್ಯಾದ್ಯಂತ ಸಾವಿರಾರು ಮಹಿಳೆಯರ ಪಾಲಿಗೆ ಈ ಕಾರ್ಯಕ್ರಮವು ಸಂಜೀವಿನಿಯಂತಾಗಿದೆ. ೧೨ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಮಹಿಳೆಯರ ಅರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಕ್ಯಾನ್ಸರ್ ಶೋಧ ಸಂಬಂಧಿಸಿದಂತೆ ರಕ್ತ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಬೆಂಗಳೂರಿನ ಶಾಲಾ-ಕಾಲೇಜುಗಳಲ್ಲಿ ಯಶಸ್ವೀ ಕಾರ್ಯಕ್ರಮ:
ರಾಜಧಾನಿ ಬೆಂಗಳೂರಿನ ಶಾಲಾ-ಕಾಲೇಜುಗಳಲ್ಲಿ ಈ ಬೆಂಬಲ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಹೆಬ್ಬಾಳದ ರಾಧಾಕೃಷ್ಣ ಶಾಲೆಯಲ್ಲಿ ಶನಿವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಭಾರವಾಸೆ ಚಾರಿಟೇಬಲ್ ಫೌಂಡೇಶನ್ ಜೀವಿಕಾ ಹೆಲ್ತ್ಕೇರ್ ಸಹಯೋಗದೊಂದಿಗೆ 12 ರಿಂದ 14 ವರ್ಷ ವಯಸ್ಸಿನ ಬಾಲಕಿಯರಿಗೆ ಉಚಿತ HPV ಲಸಿಕೆ ನೀಡಲಾಯಿತು.
ಭಾನುವಾರ ಬೆಂಗಳೂರಿನ ಜೈನ್ ಸ್ಕೂಲ್ ಆಫ್ ಸೈನ್ಸ್ನಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲೂ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು-ಯುವಜನರು ಪ್ರಯೋಜನ ಪಡೆದರು.
ವಿದ್ಯಾರ್ಥಿನಿಯರ ಜೊತೆ ನಡೆದ ಸಂವಾದ ಕೂಡಾ ‘ಗರ್ಭಕಂಠದ ಕ್ಯಾನ್ಸರ್’ ಬಗೆಗಿನ ಜಾಗೃತಿ ಅಭಿಯಾನಕ್ಕೆ ವೇದಿಕೆಯಾಯಿತು. ‘ಗರ್ಭಕಂಠ ಕ್ಯಾನ್ಸರ್’ ಹೇಗೆ ಬರುತ್ತದೆ? ಅದು ಬಾರದಂತೆ ಹೇಗೆ ತಡೆಯಬಹುದು? ‘ಗರ್ಭಕಂಠದ ಕ್ಯಾನ್ಸರ್’ ಪತ್ತೆಯಾದ ಆರಂಭದಲ್ಲೇ ಚಿಕಿತ್ಸೆ ಹೇಗೆ? ಆರಂಭದಲ್ಲೇ ಹೇಗೆ ಶಮನ ಮಾಡಬಹುದು? ಎಂಬ ಬಗ್ಗೆ ಡಾ.ಪದ್ಮಿನಿ ಪ್ರಸಾದ್ ಅವರು ತಿಳಿಹೇಳಿದರು. ಮಹಿಳೆಯರ ಲೈಂಗಿಕ ಅರೋಗ್ಯ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳ ಕುರಿತು ಮಹತ್ವದ ವಿಚಾರಗಳ ಬಗ್ಗೆ ಚಿಂತನ ಮಂಥನವೂ ನಡೆಯಿತು.
ಇದೇ ಸಂದರ್ಭದಲ್ಲಿ, ಡಾ.ಪದ್ಮಿನಿ ಪ್ರಸಾದ್ ಅವರನ್ನು ‘ ಜೈನ್ ಸ್ಕೂಲ್ ಆಫ್ ಸೈನ್ಸ್’ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11 ರಿಂದ `OPD’ ಸೇವೆ ಬಂದ್: ರೋಗಿಗಳಿಗೆ ಸಂಕಷ್ಟದ ಭೀತಿ








