ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹಣವಿಲ್ಲದೆ ಪಾಪರ್ ಆಗಿದೆ. ಸಿದ್ದರಾಮಯ್ಯ ಪಾಪರ್ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಶಾಸಕರು ಫಾರಿನ್ ಟೂರ್ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೊರಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಸಮಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳನ್ನು ಸಲಹಲು ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಸಹಯೋಗದಲ್ಲಿ ತಂದ ಯೋಜನೆಯಡಿ 26,334 ಮಕ್ಕಳಿದ್ದಾರೆ. ಪ್ರತಿ ತಿಂಗಳು ರಾಜ್ಯ ಸರ್ಕಾರದಿಂದ ಸಿಗುವ 4,000 ರೂ.ನಿಂದ ಮಕ್ಕಳು ಊಟ ಮಾಡುತ್ತಾರೆ. ಅಂದರೆ ಒಬ್ಬರಿಗೆ 10-15 ರೂ. ಸಿಗುತ್ತದೆ. ಕೊಪ್ಪಳದಲ್ಲಿ 2,220, ಬಳ್ಳಾರಿಯಲ್ಲಿ 1059, ಧಾರವಾಡದಲ್ಲಿ 2650 ಮಕ್ಕಳಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಅನ್ನ ಜಾಸ್ತಿಯಾಗಿ ಫಾರಿನ್ ಟೂರ್ ಮಾಡುತ್ತಿದ್ದಾರೆ. ಆದರೆ ಈ ಬಡ ಮಕ್ಕಳಿಗೆ 7 ತಿಂಗಳಿಂದ ಒಟ್ಟು 75 ಕೋಟಿ ರೂ. ನೀಡಿಲ್ಲ. ಬಡ ಮಕ್ಕಳು ಉಪವಾಸದಿಂದ ಸಾಯುವ ಸ್ಥಿತಿ ಬಂದಿದೆ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ.ಗೆ, ಅನ್ನಭಾಗ್ಯದ 750 ಕೋಟಿ ರೂ. ಗೆ ನಾಮ ಹಾಕಿದ್ದಾರೆ. ಈಗ ಅನಾಥ ಮಕ್ಕಳ ಹಣವನ್ನೂ ನುಂಗಿ ಹಾಕಿದ್ದಾರೆ ಎಂದರು.
ಕಳೆದ ಬಜೆಟ್ನಲ್ಲಿ ಮೀಸಲಾದ ಹಣವನ್ನೇ ಯೋಜನೆಗಳಿಗೆ ನೀಡುತ್ತಿಲ್ಲ. ಈಗ ಹೊಸ ಬಜೆಟ್ ಮಾಡಲು ತಯಾರಿ ನಡೆಸಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ನೌಕರರು 38 ತಿಂಗಳ ಹಿಂಬಾಕಿ ನೀಡಿಲ್ಲವೆಂದು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. ನಾನು ಸಾರಿಗೆ ಸಚಿವನಾಗಿದ್ದಾಗ ನಷ್ಟವಿತ್ತೋ, ಲಾಭವಿತ್ತೋ ಎಂಬ ಮಾಹಿತಿ ಬಿಡುಗಡೆ ಮಾಡಲಿ. ಶಾಲಾ ಮಕ್ಕಳಿಗೆ ಬಸ್ ಸಿಗದೆ ಟಿಪ್ಪರ್ನಲ್ಲಿ ಹೋಗುತ್ತಿದ್ದಾರೆ. ಹಣ ಇಲ್ಲವಾದರೆ ಪಾಪರ್ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿಕೊಳ್ಳಲಿ. ನೌಕರರನ್ನು ಕೆಲಸದಿಂದ ವಜಾ ಮಾಡಲಾಗುವುದೆಂದು ಎಸ್ಮಾ ಜಾರಿ ಮಾಡಲಾಗಿದೆ. ನೌಕರರು ಇದಕ್ಕೆ ಬೆಲೆ ನೀಡಿಲ್ಲ ಎಂದರು.
ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಿಂದ ಕಸ ವಿಲೇವಾರಿಯಾಗುತ್ತಿಲ್ಲ. ಲಾರಿಗಳಲ್ಲಿ ಕಸ ತುಂಬಿಹೋಗಿದೆ. ಬೆಂಗಳೂರನ್ನು ಸರ್ಕಾರ ಗಾರ್ಬೇಜ್ ಸಿಟಿ ಮಾಡಿದೆ. ಗುತ್ತಿಗೆದಾರರ ಸಂಘ ಎಲ್ಲ ಕಾಮಗಾರಿ ಸ್ಥಗಿತಗೊಳಿಸಲು ಸಿದ್ಧತೆ ಮಾಡಿದೆ. ಆದ್ದರಿಂದ ಕೂಡಲೇ ಹಣ ಬಿಡುಗಡೆ ಮಾಡಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಿ. ಇಲ್ಲವಾದರೆ ಜನರ ಶಾಪ ತಟ್ಟುತ್ತದೆ ಎಂದರು.
ನಾಯಿಗಳ ಕಿತ್ತಾಟ
ಸಿಎಂ ಡಿಸಿಎಂ ಕಚ್ಚಾಟವನ್ನು ನಾಯಿಗಳ ಕಿತ್ತಾಟ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಡಿ.ಕೆ.ಸುರೇಶ್ ಅವರು ನಿಯತ್ತಿನ ನಾಯಿಗಳು ಎಂದಿದ್ದಾರೆ. ಅಂದಮೇಲೆ ಬೀದಿ ನಾಯಿಗಳು ಯಾರು ಎಂದು ಉತ್ತರ ಕೊಡಬೇಕಿದೆ. ಕಾಂಗ್ರೆಸ್ನಲ್ಲಿ ಬೀದಿ ನಾಯಿ ಮತ್ತು ನಿಯತ್ತಿನ ನಾಯಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಗೆ ಗೊತ್ತಿಲ್ಲ ಎನ್ನುತ್ತಾರೆ. ವಿದೇಶ ಪ್ರವಾಸ ಹೋಗಿರುವವರು ಸಿದ್ದರಾಮಯ್ಯನವರ ಬೆಂಬಲಿಗರೇ ಆಗಿದ್ದಾರೆ ಎಂದರು.
ರಾಜ್ಯದ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರ ವಿರುದ್ಧ ಹೀಗೆ ನಡೆದುಕೊಳ್ಳುತ್ತಾರೆ. ಒಪ್ಪಂದ ಆಗಿದ್ದರೆ ಎಷ್ಟು ವರ್ಷ ಒಪ್ಪಂದ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಬೇಕು. ಇದು ಬೆದರಿಕೆಯ ರಾಜಕೀಯವೇ ಎಂದು ತಿಳಿಸಬೇಕು. ಪವಿತ್ರವಾದ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಹುದ್ದೆಯ ಘನತೆ ಕಾಂಗ್ರೆಸ್ನ ಒಳ ರಾಜಕಾರಣದಿಂದ ಮಣ್ಣುಪಾಲಾಗಿದೆ ಹಾಗೂ ನಗೆಪಾಟಲಿಗೀಡಾಗಿದೆ. ಕಾಂಗ್ರೆಸ್ನ ಒಳಜಗಳದಿಂದಾಗಿ ಆಡಳಿತ ಕುಸಿದಿರುವಾಗ ಯಾವ ಕಾರಣಕ್ಕಾಗಿ ಬಜೆಟ್ ಮಂಡನೆ ಮಾಡುತ್ತಾರೆ? ಎಂದು ಪ್ರಶ್ನೆ ಮಾಡಿದರು.
ಗುತ್ತಿಗೆಗಳು ಆಂಧ್ರದ ಪಾಲು
ಗುತ್ತಿಗೆದಾರರ ಸಂಘದವರು ಬಿಲ್ ಕೇಳಿದರೆ ನಾಳೆ ಬಾ ಎಂದು ಸಿಎಂ ಹೇಳುತ್ತಾರೆ. ಸಚಿವರು ದೊಡ್ಡ ಪ್ಯಾಕೇಜ್ ಮಾಡಿ ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ನೀಡಿ ಕಮಿಶನ್ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಕಾಮಗಾರಿಗಳನ್ನು ತೆಲಂಗಾಣಕ್ಕೆ ನೀಡಿದ್ದಾರೆ. ಇದರಿಂದಾಗಿ ಸ್ಥಳೀಯ ಗುತ್ತಿಗೆದಾರರು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಾಮಗಾರಿಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ. ಕಸ ವಿಲೇವಾರಿಯ ಟೆಂಡರ್ ಪಡೆಯಲು 7%, ಬಿಲ್ ಪಡೆಯಲು 7%, ಎನ್ಒಸಿಗೆ 7% ಕಮಿಶನ್ ಕೊಡಬೇಕಿದೆ. 21% ಕಮಿಶನ್ ನೀಡಿದರೆ ಮಾತ್ರ ಕೆಲಸ ಸಾಧ್ಯವಾಗುತ್ತದೆ. ಬೆಂಗಳೂರಿನ ಕಸದಲ್ಲಿ ಆಂಧ್ರದ ಮಾಫಿಯಾ ಇದೆ ಜೊತೆಗೆ ಕಾಂಗ್ರೆಸ್ ಸರ್ಕಾರದ ಮಾಫಿಯಾ ಇದೆ. ನಮಗೆ ಕಸದ ಟೆಂಡರ್ ಸಿಕ್ಕಿಲ್ಲ ಎಂದು ಗುತ್ತಿಗೆದಾರ ಸಂಘ ಹೇಳಿದೆ ಎಂದರು.
ವಿಧಾನಸೌಧಕ್ಕೆ ಮಾಧ್ಯಮ ನಿರ್ಬಂಧದ ಆದೇಶ ಕುರಿತು ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ಸಚಿವರ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂದು ವರದಿ ಮಾಡಿದ್ದರಿಂದ ನಿರ್ಬಂಧ ಹೇರಲಾಗಿದೆ. ಸರ್ಕಾರ ಕಳ್ಳತನ ಮಾಡುತ್ತಿದೆ ಎಂದು ಜನರು ಮಾತಾಡುತ್ತಿದ್ದಾರೆ. ಲೂಟಿ ಮಾಡುತ್ತಿರುವುದನ್ನು ಮಾಧ್ಯಮಗಳು ತಡೆಯಲು ಹೋಗಿರುವುದರಿಂದ ಡಿಪಿಎಆರ್ ಈ ಆದೇಶ ಹೊರಡಿಸಿದೆ. ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಹಾಗೂ ಮುಖ್ಯ ಕಾರ್ಯದರ್ಶಿಯೊಂದಿಗೆ ಈ ಕುರಿತು ಮಾತಾಡುತ್ತೇನೆ ಎಂದರು.
ನಾಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ವಿಷಯ ಮಂಡನೆ ಮಾಡುತ್ತೇನೆ. ಈ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು, ಮುಖಂಡರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಜನರ ಸಮಸ್ಯೆಗಳನ್ನು ಹೇಳುತ್ತೇನೆ ಎಂದರು.
ವಿಕಲಚೇನರ ಗಮನಕ್ಕೆ: ನಾಳೆ ಬೆಂಗಳೂರಲ್ಲಿ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್








