ಶಿವಮೊಗ್ಗ : ಸಾಗರ ತಾಲೂಕಿನ ಯಡಮನೆ ರೈತರನ್ನು ಒಕ್ಕಲೆಬ್ಬಿಸುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರೈತರಿಗೆ ದ್ರೋಹ ಬಗೆದಿದ್ದಾರೆ ಎಂಬುದಾಗಿ ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಾಗ್ಧಾಳಿ ನಡೆಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವರಿಗೆ, ಶಾಸಕರಿಗೆ ಯಡಮನೆ 16 ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಮಾಹಿತಿ ಮೊದಲೆ ಗೊತ್ತಿತ್ತು. ಇವರಿಗೆ ಗೊತ್ತಿಲ್ಲದೆ ರೈತರಿಗೆ ನೋಟಿಸ್ ಕೊಡಲು ಸಾಧ್ಯವೇ ಇಲ್ಲ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಫೆಬ್ರವರಿ.6ರಂದು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ ಅಂಬ್ಯುಲೆನ್ಸ್ ಜೊತೆಗೆ ಹೋಗಿ ಯಡಮನೆ ಗ್ರಾಮದ 16 ಕುಟುಂಬವನ್ನು ಒಕ್ಕಲೆಬ್ಬಿಸಲು ಹೋಗಿದ್ದರು. ಆಗ ಬಿಜೆಪಿ ಪ್ರಮುಖರಾದ ಬಿಸಿ ಲಕ್ಷ್ಮೀನಾರಾಯಣ ಭಟ್, ಲೋಕಾಕ್ಷಿ, ಪಾರ್ಶ್ವನಾಥ ಜೈನ್ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ದಾಖಲೆ ಸಂಗ್ರಹಿಸಿದ್ದಾರೆ. ಒಕ್ಕಲೆಬ್ಬಿಸಲು ಬಂದ ಅಧಿಕಾರಿಗಳಿಗೆ ನಮ್ಮ ತಂಡವು ಅಗತ್ಯ ದಾಖಲೆ ತೋರಿಸಿದೆ. ಒಂದೊಮ್ಮೆ ಕುಟುಂಬಗಳನ್ನು ಒಕ್ಕಲೆಬ್ಬಿಸಿದರೆ ಅರಣ್ಯಹಕ್ಕು ಕಾಯ್ದೆಯಡಿ ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಮೇಲೆ ಸ್ಥಳದಿಂದ ಹೋಗಿದ್ದಾರೆ. ಆದರೆ ಶಾಸಕರು ತೆರವು ಮಾಡುತ್ತಿರುವುದು ತಮಗೆ ಗೊತ್ತೆ ಇಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಉಸ್ತುವಾರ ಸಚಿವರು ಒಕ್ಕಲೆಬ್ಬಿಸುವುದಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಸಚಿವರು, ಶಾಸಕರಿಗೆ ಗೊತ್ತಿಲ್ಲದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಯೆ ಎಂದು ಪ್ರಶ್ನಿಸಿದರು.
ಸಾಗರ ತಾಲ್ಲೂಕಿನ ಯಡಮನೆ ಗ್ರಾಮಸ್ಥರನ್ನು ರಕ್ಷಣೆ ಮಾಡುವಲ್ಲಿ ಬಿಜೆಪಿ ಪ್ರಮುಖಪಾತ್ರ ವಹಿಸಿದೆ. ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ರೈತ ವಿರೋಧಿನೀತಿ ಈ ಪ್ರಕರಣದಲ್ಲಿ ಜಗಜ್ಜಾಹೀರವಾಗಿದೆ. ಚುನಾವಣೆ ಮುನ್ನ ಪಾದಯಾತ್ರೆ ನಡೆಸಿ ಶಿವಮೊಗ್ಗದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಲೆನಾಡಿನ ರೈತರಿಗೆ ನೀಡಿದ ಮಾತು ಹುಸಿಯಾಗಿದೆ. ಯಡಮನೆ ಕುಟುಂಬವು 2006ರಿಂದಲೂ ಅರಣ್ಯಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಮಂಜೂರಾತಿಗೆ ಕಾಯುತ್ತಿದೆ. ಅವರನ್ನು ಭಯಭೀತಗೊಳಿಸಿ ಒಕ್ಕಲೆಬ್ಬಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಕೇಳಿದರು.
ವಿಧಾನಮಂಡಲದ ಅಧಿವೇಶನದಲ್ಲಿ ಪಂಪ್ಡ್ ಸ್ಟೋರೇಜ್ ಬಗ್ಗೆ ಮಾತನಾಡುವ ಶಾಸಕರಿಗೆ ಮಲೆನಾಡಿನ ರೈತರ ಭೂಹಕ್ಕು ಸಮಸ್ಯೆ ಬಗ್ಗೆ ಮಾತನಾಡಲು ಪುರುಷೊತ್ತಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಸುಮಾರು ಎರಡು ಗಂಟೆ ಮಾತನಾಡಲು ಸಾಗರದ ಶಾಸಕರಿಗೆ ಅವಕಾಶ ಸಿಕ್ಕಿತ್ತು. ಆದರೆ ಅವರು ಕೇವಲ ಐದು ನಿಮಿಷ ಮಾತನಾಡಿದ್ದಾರೆ. ಅದು ಕ್ಷೇತ್ರದ ಜ್ವಲಂತ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಯಡಮನೆ ಗ್ರಾಮಸ್ಥರನ್ನು ಸೇರಿ ತಾಲ್ಲೂಕಿನ ರೈತರನ್ನು ಅರಣ್ಯದ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಮುಂದಾದರೆ ಬಿಜೆಪಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಸಿ.ಲಕ್ಷಿನಾರಾಯಣ್ ಭಟ್ ಮಾತನಾಡಿ, ಯಡಮನೆ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಾಗ ಮಾಜಿ ಸಚಿವರಾದ ಹರತಾಳು ಹಾಲಪ್ಪ ಅವರಿಗೆ ವಿಷಯ ತಿಳಿಸಿದ್ದೇವೆ. ಅವರು ಯಾವುದೇ ಕಾರಣಕ್ಕೂ ಮುಗ್ದ ರೈತರನ್ನು ಒಕ್ಕಲೆಬ್ಬಿಸಲು ಬಿಡಬೇಡಿ ಎಂಬ ಸೂಚನೆ ನೀಡಿದ್ದರು. ಬಿಜೆಪಿ ಸ್ಥಳೀಯ ಮುಖಂಡರು ಒಕ್ಕಲೆಬ್ಬಿಸಲು ಬಂದವರನ್ನು ತರಾಟೆಗೆ ತೆಗೆದುಕೊಂಡು, ಸೂಕ್ತ ದಾಖಲೆ ನೀಡಿ ವಾಪಾಸ್ ಕಳಿಸಿದ್ದೇವೆ ಎಂದರು.
ಯಡಮನೆಯಲ್ಲಿ 16 ಈಡಿಗ ಕುಟುಂಬ ವಾಸುಸುತ್ತಿದ್ದು ಒಟ್ಟು 35 ಎಕರೆ ಜಮೀನು ಹೊಂದಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರೇ ಇದ್ದು, ಅವರನ್ನು ಯಾಮಾರಿಸಲಾಗುತ್ತದೆ. ಶಾಸಕರು ತಮ್ಮ ವಿರುದ್ದ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ರೈತರನ್ನು ಅವರೆ ಒಕ್ಕಲೆಬ್ಬಿಸುತ್ತಿದ್ದಾರೆ. ವಿಷಯವನ್ನು ಬೇರೆಡೆ ತಿರುಗಿಸಲು ಇದೀಗ ಮುಪ್ಪಾನೆ ಸೇತುವೆ ನಿರ್ಮಾಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಸೇತುವೆ ನಿರ್ಮಾಣ ಮಾಡುವುದಕ್ಕಿಂತ ಮೊದಲು ಅದರ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು ಜನಸಾಮಾನ್ಯರು ಓಡಾಡಲು ಆಗುತ್ತಿಲ್ಲ. ಹಾಲಪ್ಪ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ 8 ಕಿ.ಮೀ. ರಸ್ತೆ ಅಭಿವೃದ್ದಿಗೆ 30 ಲಕ್ಷ ರೂ. ಇರಿಸಿದ್ದರು. ಗೋಪಾಲಕೃಷ್ಣ ಬೇಳೂರು ಈ ಹಣವನ್ನು ಬೇರೆ ಕಡೆ ವಿನಿಯೋಗ ಮಾಡಿದ್ದಾರೆ. ಸೇತುವೆ ನಿರ್ಮಾಣಕ್ಕಿಂತ ಮೊದಲು 8 ಕಿ.ಮೀ ರಸ್ತೆ ಮಾಡಿ, ಆ ಬಳಿಕ ಸೇತುವೆ ನಿರ್ಮಿಸಿ ತೋರಿಸಿ ಎಂಬುದಾಗಿ ಸವಾಲ್ ಎಸೆದರು.
ಈ ವೇಳೆ ಸುದ್ದಿಗೋಷ್ಟಿಯಲ್ಲಿ ನಾಗರಾಜ್ ಬೊಬ್ಬಿಗೆ, ವಿರೂಪಾಕ್ಷ, ರಮೇಶ್ ಎಚ್.ಎಸ್., ರಾಜು ಜೈನ್ ಇನ್ನಿತರರು ಹಾಜರಿದ್ದರು.
BREAKING: ರಾಜ್ಯದ ಎಲ್ಲಾ ‘ರಕ್ತ ಕೇಂದ್ರ’ಗಳು NABH ಅಥವಾ NQAS ಮಾನ್ಯತೆ ಪಡೆಯುವುದು ಕಡ್ಡಾಯ: ಆರೋಗ್ಯ ಇಲಾಖೆ ಆದೇಶ
ಸಾಗರದಲ್ಲೊಂದು 50 ವರ್ಷವೇ ಕಳೆದರು ‘ಟಾರ್’ ಕಾಣದ ರಸ್ತೆ: ‘ಡಾಂಬಾರೀಕರಣ’ಕ್ಕೆ ನಿವಾಸಿಗಳ ಒತ್ತಾಯ








