ಬೆಂಗಳೂರು : ಇ- ಪೌತಿ ತಂತ್ರಾಂಶದ ಮೂಲಕ ಮೃತ ಖಾತೆದಾರರ ವಾರಸುದಾರರಿಗೆ ಪಹಣಿ ದಾಖಲಿಸಲು ಕ್ರಮವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಪ್ರೋತ್ಸಾಹಧನ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಏನಿದೆ ಸರ್ಕಾರದ ಆದೇಶದಲ್ಲಿ?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26 ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 418 ರಲ್ಲಿ ಘೋಷಿಸಿರುವಂತೆ, ಪಹಣಿಗಳಿಗೆ ಆಧಾರ್ ಜೋಡಣೆ ಸಂದರ್ಭದಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡುವ ಉದ್ದೇಶದಿಂದ ಇ-ಪೌತಿ ಆಂದೋಲನವನ್ನು ಆರಂಭಿಸಲಾಗಿದ್ದು, ಉಲ್ಲೇಖಿತ ಪತ್ರಗಳನ್ವಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇ-ಪೌತಿ ತಂತ್ರಾಂಶವನ್ನು ಅಳವಡಿಸಿ, ಕ್ರಮವಹಿಸುವ ಕುರಿತು ನಿರ್ದೇಶನಗಳನ್ನು ನೀಡಲಾಗಿರುತ್ತದೆ.
ಇ-ಪೌತಿ ತಂತ್ರಾಂಶದ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಪೌತಿ ಖಾತೆ ಮಾಡಲು ಸಂಬಂಧಪಟ್ಟ ರೈತರ ಮನೆ ಬಾಗಿಲಿಗೆ ಸ್ವಯಂಪ್ರೇರಿತವಾಗಿ ತೆರಳಿ, ದಾಖಲೆಗಳನ್ನು ಪಡೆದು ಆಂದೋಲನದ ರೂಪದಲ್ಲಿ ಪೌತಿ ಖಾತೆ ಪ್ರಗತಿ ಸಾಧಿಸಲು ಕ್ರಮವಹಿಸಲಾಗುತ್ತಿದೆ. ಅದರಂತೆ ಮೃತ ಖಾತೆದಾರರ ವಾರಸುದಾರರಿಗೆ ಪಹಣಿ ದಾಖಲಾಗುವುದರಿಂದ ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಅನುಕೂಲವಾಗಿರುತ್ತದೆ.
ಆದುದರಿಂದ, ಸದರಿ ಇ-ಪೌತಿ ಆಂದೋಲನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮವೃತ್ತದಲ್ಲಿ ಒಟ್ಟು 100 ಕ್ಕಿಂತ ಹೆಚ್ಚು ಪೌತಿ ಖಾತೆ ಮಾಡಲಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಪ್ರೋತ್ಸಾಹಧನ ನೀಡಲು ಸರ್ಕಾರವು ನಿರ್ಧರಿಸಿರುತ್ತದೆ. ໖: 10-03-2026 8 ವರೆಗೆ ಇ-ಪೌತಿ ತಂತ್ರಾಂಶದಲ್ಲಿ ಶಿರಸ್ತೇದಾರರಿಂದ ಅನುಮೋದನೆಯಾಗಿ ಭೂಮಿ ತಂತ್ರಾಂಶಕ್ಕೆ ಪುಶ್ ಆಗುವ ಪ್ರತೀ ಸರ್ವೆ ನಂಬರ್ ನ ಪೌತಿ ಖಾತೆ ಗೆ ಗ್ರಾಮ ಆಡಳಿತ ಅಧಿಕಾರಿಗೆ ತಲಾ ರೂ. 50 ರಂತೆ ಹಾಗೂ ಗ್ರಾಮ ಸಹಾಯಕರಿಗೆ ತಲಾ ರೂ. 30 ರಂತೆ ಪ್ರೋತ್ಸಾಹಧನ ನೀಡಲಾಗುವುದು. ಆದ್ದರಿಂದ ಸದರಿ ಅಂಶವನ್ನು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ತಿಳಿಸಲು ಹಾಗೂ ಇ-ಪೌತಿ ತಂತ್ರಾಂಶದಲ್ಲಿ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿಕೊಂಡು ಕಾನೂನುರೀತ್ಯಾ ತ್ವರಿತವಾಗಿ ದಿನಾಂಕ:10-03-2026 ರೊಳಗಾಗಿ ವಾರಸುದಾರರಿಗೆ ಖಾತಾ ಮಾಡಲು ಕ್ರಮವಹಿಸುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ತಾಲೂಕುಗಳ ತಹಶೀಲ್ದಾರರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲು ಈ ಮೂಲಕ ತಿಳಿಸಿದೆ.








