ಬೆಂಗಳೂರು : ರಾಜ್ಯ ಸರ್ಕಾರ ಕಳೆದ 3 ವರ್ಷದಲ್ಲಿ 196 ಬಾಂಗ್ಲಾದೇಶಿಗರನ್ನು ಗಡೀಪಾರು ಮಾಡಿದೆ. ಇಡೀ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಜನರನ್ನು ಗುರುತಿಸಿ ಗಡೀಪಾರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಾಂಗ್ಲಾದವರು ಇಡೀ ದೇಶದಲ್ಲಿ ಇದ್ದಾರೆ. ಅವರು ಎಲ್ಲಿಂದ ಬರುತ್ತಾರೆ?, ಅವರು ಬರದಂತೆ ಬಿಎಸ್ಎಫ್ ತಡೆಯಬೇಕು. ಅವರು ಕೇವಲ ಕರ್ನಾಟಕಕ್ಕೆ ಮಾತ್ರ ಬರುವುದಿಲ್ಲ. ದೇಶದಾದ್ಯಂತ ಬೇರೆ ಬೇರೆ ಕಡೆ ಹೋಗಿ ವಾಸವಾಗಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದವರು ಬಂದಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. 2021ರಲ್ಲಿ 15 ಜನರನ್ನು ಗಡೀಪಾರು ಮಾಡಲಾಗಿದೆ. 2022ರಲ್ಲಿ 21 ಅಕ್ರಮ ಬಾಂಗ್ಲಾದವರನ್ನು ಗಡೀಪಾರು ಮಾಡಲಾಗಿದೆ ಎಂದರು.
ನಮ್ಮ ಸರ್ಕಾರ ಬಂದ ಬಳಿಕ 2023ರಲ್ಲಿ 47 ಜನ, 2024ರಲ್ಲಿ 64 ಜನ, 2025ರಲ್ಲಿ 87 ಜನ ಸೇರಿ ಒಟ್ಟು 196 ಜನರನ್ನು ಗಡೀಪಾರು ಮಾಡಿದ್ದೇವೆ. ಇನ್ನು 376 ಜನರನ್ನು ಗುರುತು ಮಾಡಲಾಗಿದ್ದು, ಅವರನ್ನೂ ವಾಪಸ್ ಕಳುಹಿಸುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಒಂದು ಡ್ರೈವ್ ಮಾಡಲು ಮುಂದಾಗಿದ್ದೇವೆ. ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರಲ್ಲಿ ಬಾಂಗ್ಲಾದವರು ಹೆಚ್ಚಿದ್ದಾರೆ. ಅದಕ್ಕಾಗಿ ಇಡೀ ರಾಜ್ಯದಲ್ಲಿ ಡ್ರೈವ್ ಮಾಡಿ ಅಕ್ರಮ ಬಾಂಗ್ಲಾದವರನ್ನು ಗುರುತಿಸಲು ಸೂಚನೆ ನೀಡಿದ್ದೇನೆ. ಈಗಾಗಲೇ ಅದು ಪ್ರಗತಿಯಲ್ಲಿದೆ ಎಂದರು.








