ದಕ್ಷಿಣಕನ್ನಡ : ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪ ಕೇಪು ಎಂಬಲ್ಲಿ ಕೋಳಿ ಅಂಕ ನಡೆಸುವ ವಿಚಾರವಾಗಿ ಕೋಳಿ ಅಂಕ ನಡೆಸುವವರ ಪರ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಬಿಜೆಪಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಬಿಜೆಪಿ ಮುಖಂಡರ ದಂಡು ಸ್ಥಳಕ್ಕೆ ಆಗಮಿಸಿ, ಎರಡನೇ ದಿನದ ಕೋಳಿ ಅಂಕ ನಡೆಸಲು ಬೆಂಬಲಿಸಿತು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವರು ಆಗಮಿಸಿದ್ದರು. ಇದೀಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಸತೀಶ್ ಕುಂಪಲ, ಮಠಂದೂರು ಸಹಿತ 27 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ, ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 20 ಜನರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 20 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದವರು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಸಹಿತ ಒಟ್ಟು 27 ಮಂದಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
800 ವರ್ಷಗಳ ಇತಿಹಾಸ
ಸುಮಾರು 800 ವರ್ಷಗಳ ಇತಿಹಾಸವಿರುವ ಕೇಪು ಎಂಬಲ್ಲಿ ಪ್ರತಿ ವರ್ಷ ಜಾತ್ರೋತ್ಸವ ನಡೆಯುತ್ತಿದ್ದು, ಇಲ್ಲಿಗೆ ಸಮೀಪದ ಮಲರಾಯಿ ದೈವಸ್ಥಾನದ ಕೆಳಗಿನ ಗದ್ದೆಯಲ್ಲಿ ಸಂಪ್ರದಾಯದಂತೆ ಜೂಜಾಟವೇ ಇಲ್ಲದೆ ಕೇವಲ ಸಾಂಪ್ರದಾಯಿಕವಾಗಿ ಮೂರು ದಿನಗಳ ಕಾಲ ಕೋಳಿ ಅಂಕ (ಕೋಳಿ ಕಾಳಗ) ನಡೆಯುವುದು ಇದೆ.
ಹರಕೆ ಸ್ವರೂಪದಲ್ಲಿ ನಡೆಯುವ ಕೋಳಿ ಅಂಕ ನಿರ್ಬಂಧ ಮಾಡುವ ಕುರಿತು ಪೊಲೀಸರು ಮುಂದಾದಾಗ ಒಪ್ಪದ ಜನತೆ ಶನಿವಾರ ಶಾಸಕರ ಮೊರೆ ಹೋದ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ರೈ ಸ್ಥಳಕ್ಕೆ ಆಗಮಿಸಿ, ನಾನಿದ್ದೇನೆ ಎಂದು ಬೆಂಬಲಿಸಿದ್ದರು. ಪರಿಣಾಮ ರೈ ಸಹಿತ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ 16 ಮಂದಿ ವಿರುದ್ಧ ಕೇಸು ದಾಖಲಾಗಿತ್ತು.








