ಶಿವಮೊಗ್ಗ: ಸಾಗರವನ್ನು ಜಿಲ್ಲೆಯಾಗಿ ಮಾಡಬೇಕು ಎಂಬುದಾಗಿ ಆಗ್ರಹಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ನಾಳೆ ಸಾಗರ ಬಂದ್ ಗೆ ಕರೆ ನೀಡಲಾಗಿದೆ. ನಾಳೆಯ ಸಾಗರ ಬಂದ್ ಗೆ ವಿವಿಧ ಸಂಘಟನೆಗಳಿಂದ ಬೆಂಬಲ ಸೂಚಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿ ಮಾಹಿತಿ ನೀಡಿದ್ದು, ಸಾಗರ ಜಿಲ್ಲೆ ಘೋಷಣೆ ಮಾಡಬೇಕು ಎಂಬುದಾಗಿ ಒತ್ತಾಯಿಸಿ ಕಳೆದ 12 ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ, ಆಗ್ರಹ ಮಾಡಿದರೂ ಸರ್ಕಾರ, ಜನಪ್ರತಿನಿಧಿಗಳು, ಯಾವುದೇ ರೀತಿ ಸ್ಪಂದನೆ ಮಾಡಿಲ್ಲ ಎಂಬುದಾಗಿ ಹೇಳಿದೆ.
ಸಾಗರ ಪಟ್ಟಣವು ಐತಿಹಾಸಿಕ ನಗರವಾಗಿದ್ದು, ಸಾಗರ ತಾಲ್ಲೂಕಿನ ಕೆಳದಿ ಸಂಸ್ಥಾನವು ಕ್ರಿ.ಶ 1499ರಿಂದ 1763ರವರೆಗೆ ಸುಮಾರು 265 ವರ್ಷಗ ಕಾಲ ಅರಸರಾದ ಚೌಡಪ್ಪ ನಾಯಕರಿಂದ ಸದಾಶಿವ ನಾಯಕರ, ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮಾಜಿ ಒಟ್ಟು 19 ರಾಜಮಹಾರಾಜರು 13 ಜಿಲ್ಲೆಗಳನ್ನು ಒಳಗೊಂಡು ಆಡಳಿತ ನಡೆಸಿದ ಇತಿಹಾಸವಿದೆ. ಸಾಗರ ಪ್ರಾಂತ್ಯವು ಕೆಳದಿ ಸಂಸ್ಥಾನ ಆಡಳಿತ ನಡೆಸಿದ ಐತಿಹಾಸಿಕ ಸಾಕ್ಷಿಯಾಗಿದೆ ಎಂದು ತಿಳಿಸಿದೆ.
ಸಾಗರವು ಉಪ ವಿಭಾಗ ಕಚೇರಿ ಹೊಂದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಕೃಷಿ ವಿವಿ, ಸಾರಿಗೆ ಉಪ ವಿಭಾಗ, ಜಿಎಸ್ಟಿ ಕಚೇರಿ, ಮೆಸ್ಕಾಂ ಉಪ ವಿಭಾಗ, ಇಂಜಿನಿಯರ್ ಉಪ ವಿಭಾಗ, ತೂಕ ಮತ್ತು ಅಳತೆ ಕಚೇರಿ ಸೇರಿದಂತೆ ವಿವಿಧ ಕಚೇರಿಗಳು ಸಾಗರದಲ್ಲಿವೆ ಎಂದು ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ಸಾಗರ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಕೆಲವು ಕಾಣದ ಕೈಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿವೆ. ಸಾಗರ ನಗರ ವ್ಯಾಪ್ತಿಯಲ್ಲಿ ತ್ಯಾಗರ್ತಿ ಕ್ರಾಸ್ ನಿಂದ ಎಲ್ ಬಿ ಕಾಲೇಜಿನವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಟೆಂಡರ್ ಅವಧಿ ಮುಗಿದು 4 ವರ್ಷವಾದರೂ ಮುಗಿದಿಲ್ಲ ಎಂದಿದೆ.
ಸಾಗರದ ರಾಜ್ಯಕ್ಕೆ ಬೆಳಕು ನೀಡಲು ಅಣೆಕಟ್ಟು ನಿರ್ಮಾಣ ಮಾಡಲು ರೈತರು ತ್ಯಾಗ ಮಾಡಿದ ಕ್ಷೇತ್ರವಾಗಿದೆ. ಆದರೇ ಮುಳುಗಡೆ ಸಂತ್ರಸ್ತರಿಗೆ ಇದುವರೆಗೆ ನ್ಯಾಯ ಸಿಕ್ಕಿಲ್ಲ. ಗ್ರಾಮೀಣ ಪ್ರದೇಶದಲ್ಲಿ ರೈತರ ಕೃಷಿ ಭೂಮಿಯನ್ನು ಅರಣ್ಯ ಎಂದು ಘೋಷಿಸುತ್ತಿದ್ದಾರೆ. ನಷ್ಟ ಹೊಂದಿದ ರೈತರಿಗೆ ವಿಮೆ ಸಿಕ್ಕಿಲ್ಲ. ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಹೇಳಿದೆ.
ಸಾಗರ ಜಿಲ್ಲೆ ಘೋಷಣೆ ಮಾಡಲು ಒತ್ತಾಯಿಸಿ ಮನವಿ, ಆಗ್ರಹ ನೀಡಿದ್ದನ್ನು ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ. ಸಾಗರ ಜಿಲ್ಲೆ ಘೋಷಣೆಯಾದರೇ 170 ಕಿಲೋಮೀಟರ್ ದೂರದಿಂದ ಓಡಾಡುವ ಜನರಿಗೆ ಸರ್ಕಾರವೇ ಜನರ ಬಳಿಗೆ ಬಂದಂತೆ ಆಗಲಿದೆ. ರಾಜ್ಯದಲ್ಲೇ ಅತೀ ಹೆಚ್ಚು ಪ್ರವಾಸಿ ತಾಣ ಹೊಂದಿರುವ ಸಾಗರವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಕಾರಣವಾಗಲಿದೆ. ಮಲೆನಾಡಿನ ಗುಡ್ಡಗಾಡು ಜನರಿಗೆ, ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶ, ಜೀವನ ಮಟ್ಟವೂ ಹೆಚ್ಚಲಿದೆ ಎಂದಿದೆ.
ಈ ಎಲ್ಲಾ ಕಾರಣದಿಂದಾಗಿ ಡಿಸೆಂಬರ್.17ರ ನಾಳೆ ಸಾಗರ ಜಿಲ್ಲೆಗೆ ಒತ್ತಾಯಿಸಿ ಸಾಗರ ಬಂದ್ ಮಾಡಲಾಗುತ್ತಿದೆ. ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಬಂದ್ ಗೆ ಬೆಂಬಲಿಸಬೇಕು. ಈಗಾಗಲೇ ಹೋಟೆಲ್ ಮಾಲೀಕರ ಸಂಘ, ಸಾಗರ ನಗರ ಬಿಜೆಪಿ, ಟೌನ್ ಫಾಸ್ಟ್ ಪುಡ್ ಸಂಘ, ವಕೀಲರ ಸಂಘ, ರೈತ ಸಂಘಟನೆಗಳು ನಾಳೆಯ ಸಾಗರ ಬಂದ್ ಗೆ ಬೆಂಬಲ ನೀಡಿದ್ದಾವೆ. ಆ ಮೂಲಕ ಸಾಗರ ಜಿಲ್ಲೆ ಹೋರಾಟಕ್ಕೆ ಒತ್ತಾಯಿಸಲಾಗುತ್ತಿದೆ ಎಂಬುದಾಗಿ ಸಾಗರ ಜಿಲ್ಲಾ ಹೋರಾಟ ಸಮಿತಿಯು ತಿಳಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…
BREAKING: ರಾಜ್ಯದ ಹಲವು ‘DC ಕಚೇರಿ’ಗಳಿಗೆ ‘ಬಾಂಬ್ ಬೆದರಿಕೆ ಇ-ಮೇಲ್’
BREAKING : ಈ ಬಾರಿ ಬೆಂಗಳೂರಲ್ಲೆ ‘IPL’ ಪಂದ್ಯ ಉದ್ಘಾಟನೆ : ‘KSCA’ ಅಧ್ಯಕ್ಷ ವೆಂಕಟೇಶ್ ಪ್ರಸಾದ್








