ದಾವಣಗೆರೆ.ನ.10: ಅಡಕೆ ಬಗ್ಗೆ ಮತ್ತಷ್ಟು ಪರಿಣಾಮಕಾರಿಯಾದ ಸಂಶೋಧನೆಗಳ ಅಗತ್ಯತೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದ್ದು, ಸಂಶೋಧನೆಗೆ ಹೆಚ್ಚು ಅನುದಾನ ನೀಡುವಂತೆ ಕೂಡ ಕೇಂದ್ರ ಮನವಿ ಸಲ್ಲಿಸಲಾಗಿದೆ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಾಗಿನಕಟ್ಟೆ ಗ್ರಾಮದಲ್ಲಿ ಸೋಮವಾರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ದಾವಣಗೆರೆ ಜಿಲ್ಲೆ ದೇಶದಲ್ಲಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾಗಿದ್ದು, ಈ ಭಾಗದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿ ಅಡಿಕೆಯ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಸಬೇಕೆಂದು ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌವಾಣ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಅಡಕೆ ಕ್ಯಾನ್ಸರ್ಕಾರಕ ಎಂದು ಶ್ರೀಲಂಕಾದಲ್ಲಿ ನಡೆದ ಸಮಾವೇಶದಲ್ಲಿ ವಿಶ್ವಸಂಸ್ಥೆ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ಕೇವಲ ಅಡಿಕೆ ಯಿಂದ ಕ್ಯಾನ್ಸರ್ ಬರುವುದಿಲ್ಲ. ಇದರ ಜೊತೆಗೆ ತಂಬಾಕು ಸೇರಿಸಿ ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂದು ನಾವೂ ಸಹ ಒತ್ತಿ ಒತ್ತಿ ಹೇಳುತ್ತಿದ್ದೇವೆ. ಅದರೆ ವಿಶ್ವಸಂಸ್ಥೆ ಅಡಿಕೆಯನ್ನು ಪರೀಕ್ಷೆಗೆ ಒಳಪಡಿಸಿ ಪ್ರಯೋಗಾಲಯದ ವರದಿ ಕೇಳುತ್ತಿದೆ ಎಂದರು.
ಅಡಕೆ ಬಗ್ಗೆ ಸಂಶೋಧನೆಗೆ ಅನುದಾನ ಕಡಿಮೆ ಇದೆ. ಹಾಗಾಗಿ ಅಡಿಕೆ ಬಗ್ಗೆ ಹೆಚ್ಚಿನ ಸಂಶೋಧನೆಗೆ ಅನುದಾನ ಹೆಚ್ಚು ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಹಿಂದಿನ ಸಂಶೋಧನಾ ವರದಿಯನ್ನು 7 ವರ್ಷವಾದರೂ ನೀಡಲು ಸಾಧ್ಯವಾಗಿಲ್ಲ. ಇದೀಗ ರೈತರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ವರದಿಯನ್ನು ಶೀಘ್ರವಾಗಿ ನೀಡಿದರೆ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವುದನ್ನು ಅಭಿಪ್ರಾಯವನ್ನು ತಡೆದು. ಇದರ ಬದಲು ಅಡಿಕೆ ಜೊತೆಗೆ ತಂಬಾಕು ಹಾಕಿದರೆ ಮಾತ್ರ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎನ್ನುವುದನ್ನು ದೃಢಪಡಿಸಿದರೆ ಆಗ ಅಡಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಮಾತನಾಡಿ, ಅಡಕೆ ದರ ಹೆಚ್ಚಳವಾದಾಗಲೆಲ್ಲ ಅಡಕೆ ವ್ಯಾಪಾರಿಗಳು ಇಲ್ಲದ ಪುಕಾರುಗಳನ್ನು ಹಬ್ಬಿಸಿ ದರ ಕುಸಿಯುವಂತೆ ಮಾಡುತ್ತಿದ್ದಾರೆ. ಶತಮಾನಗಳಿಂದಲೂ ದೇಶದ ಜನ ಅಡಿಕೆಯನ್ನು ಬಳಸುತ್ತಿದ್ದಾರೆ. ಆದರೆ ಇದುವರೆಗೂ ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಯಾವ ಸಂಶೋಧನೆಗಳಿಂದಲೂ ದೃಢಪಟ್ಟಿಲ್ಲ. ಆದ್ದರಿಂದ ಲೋಕಸಭಾ ಸದಸ್ಯರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಸದರಿ ಕಟ್ಟಡ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂತೋಷ್ ಸಾಕಷ್ಟು ಶ್ರಮಿಸಿದ್ದಾರೆ. ಲೋಕಸಭಾ ಸದಸ್ಯರು, ಕೆ.ಎಸ್.ಬಸವಂತಪ್ಪ ಅವರ ಶಾಸಕರ ನಿಧಿ ಸೇರಿದಂತೆ 90 ಲಕ್ಷ ರೂ ವೆಚ್ಚದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕುಗಳು ರೈತರಿಗೆ ಹೆಚ್ಚು ಸಾಲ ಸೌಲಭ್ಯ ನೀಡಿದರೆ ಅನುಕೂಲವಾಗಲಿದೆ. ಇದಕ್ಕೆ ನಬಾರ್ಡ್ ಹಣಕಾಸು ನೆರವಿನ ಅಗತ್ಯವಿದೆ ಎಂದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಶೀಘ್ರವೇ ಬಗರ್ಹುಕುಂ ಸಮಿತಿಗಳನ್ನು ರಚಿಸಿ ಅರ್ಹ ಭೂ ರಹಿತರನ್ನು ಗುರುತಿಸಿ ಸಾಗುವಳಿ ಪತ್ರ ವಿತರಣೆ ಮಾಡಲಾಗುವುದು. ಸಾಗುವಳಿ ಪತ್ರಗಳನ್ನು ಕೊಡಿಸುವುದಾಗಿ ಕೆಲ ಏಜೆಂಟರು ಬಡ ರೈತರಿಂದ 2 ರಿಂದ 5 ಲಕ್ಷ ರೂ ತನಕ ಹಣ ಪಡೆಯುತ್ತಿರುವ ದೂರುಗಳು ಕೇಳಿ ಬಂದಿವೆ. ಯಾರೂ ಕೂಡ ಏಜೆಂಟರುಗಳಿಗೆ ಹಣ ನೀಡಬಾರದು ಎಂದು ಹೇಳಿದರು.
ರೈತ ಮುಖಂಡ ತೇಜಸ್ವಿ ವಿ.ಪಟೇಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಜಿ.ಮಹೇಶ್ವರಪ್ಪ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಕೆ.ಬಸಪ್ಪ, ಗ್ರಾಪಂ ಅಧ್ಯಕ್ಷ ಕಿರಣ್ ಕುಮಾರ್ ಇತರರು ಉಪಸ್ಥಿತರಿದ್ದರು.








