ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅವರಿಂದ ಬೆಂಗಳೂರಿನ ಬೊಬ್ಬುರಕಮ್ಮೆ ಸಭಾಭವನದಲ್ಲಿ ನಡೆದ ಆಚಾರ್ಯತ್ರಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ವಿಪ್ರ ಸಮುದಾಯದ ಸ್ವಂತ ಉದ್ಯಮ ನಡೆಸುವವರಿಗೆ ಕಿರು ಸಾಲಯೋಜನೆಯ ಫಲಾನುಭವಿಗಳಿಗೆ ಪತ್ರ ವಿತರಿಸಿ, ಚಾಣಕ್ಯ ಆಡಳಿತ ತರಬೇತಿ ಯೋಜನೆ ಲೊಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಸಚಿವರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ನಾವೇ ಸ್ಥಾಪಿಸಿದ್ದು. ನಮ್ಮ ಸಮಾಜ ಅತ್ಯಂತ ಸ್ವಾಭಿಮಾನಿ ಸಮಾಜ. ಕಷ್ಟದಿಂದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರು ನಮ್ಮಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮುಂದುವರೆದ ಸಮಾಜ ಎಂಬ ಹಣೆಪಟ್ಟಿ ಇದ್ದರೂ, ಬ್ರಾಹ್ಮಣ ಸಮುದಾಯದಲ್ಲಿಯೂ ಬಡವರಿದ್ದಾರೆ, ಹತ್ತಾರು ಸಮಸ್ಯೆಗಳು ಇವೆ. ಯಾರು ಏನೇ ಹೇಳಲಿ. ನಮ್ಮ ಸರ್ಕಾರ ಬ್ರಾಹ್ಮಣರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ, ಮುಂದೆ ಕೂಡ ಸ್ಪಂದಿಸುತ್ತೇವೆ ಎಂದರು.
ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರದ ಉದ್ದೇಶ ಎಲ್ಲ ಸಮಾಜ ಬೆಳಗಬೇಕು ಎಂಬುದಾಗಿದೆ. ಕಷ್ಟದಲ್ಲಿ ಇದ್ದವರಿಗೆ ಸರ್ಕಾರದ ಸಹಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಬ್ರಾಹ್ಮಣರಿಗೆ ಸಮಸ್ಯೆಯೇ ಇಲ್ಲ ಎನ್ನುವುದು ಶುದ್ಧ ತಪ್ಪು.ನಾನಂತೂ ಸದಾ ನಿಮ್ಮ ಬೆಂಬಲಕ್ಕೆ ಇದ್ದೇನೆ. ನಮ್ಮ ಸಮುದಾಯದ ಬಡವರ ಸಮಸ್ಯೆ ಪರಿಹರಿಸಲು ಬದ್ಧನಿದ್ದೇನೆ.
ಜಾತಿ ಗಣತಿ ತಪ್ಪು ಅಂತ ಭಾವಿಸಬೇಡಿ. ಸಲ್ಲದ ವದಂತಿಗಳಿಗೆ ಕಿವಿಗೊಡಬೇಡಿ. ಸರಿಯಾದ, ವೈಜ್ಞಾನಿಕ ಮಾಹಿತಿ ಇದ್ದಾಗ ಮಾತ್ರ ಸರ್ಕಾರ ಸಮರ್ಪಕ ಯೋಜನೆ ರೂಪಿಸಲು ಸಾಧ್ಯ. ಜಾತಿ ಗಣತಿಯಿಂದ ಬ್ರಾಹ್ಮಣರಲ್ಲಿರುವ ಬಡವರು, ಇಲ್ಲಿಯ ಸಮಸ್ಯೆ ಸರಿಯಾಗಿ ತಿಳಿಯಲು ಸಾಧ್ಯವಾಗುತ್ತದೆ. ಆಗ ಹೊಸ ಹೊಸ ಯೋಜನೆ ಮಾಡಲು ಅನುಕೂಲವಾಗುತ್ತದೆ ಎಂದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಲು ನಾನು ಸರ್ಕಾರದ ಮಟ್ಟದಲ್ಲಿ ಎಲ್ಲ ಸಹಕಾರ ನೀಡುತ್ತೇನೆ. ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮ ರೂಪಿಸಿದ್ದಾರೆ. ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವುದು, ಅರ್ಹರಿಗೆ ಸೌಲಭ್ಯ ವಿತರಣೆ ಆಗುತ್ತಿದೆ. ನಾವೆಲ್ಲ ಒಗ್ಗಟ್ಟಾಗಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಪ್ರ ಸಮುದಾಯದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್ ವಿ ದೇಶಪಾಂಡೆ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಸಗೋಡು ಜಯಸಿಂಹ ಹಾಗೂ ನಿರ್ದೇಶಕರುಗಳು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.








