ಬೆಂಗಳೂರು: ಕಾಂಗ್ರೆಸ್ ಆಡಳಿತದಿಂದ ದಲಿತರ ವಿರುದ್ಧ ಅನ್ಯಾಯದ ಬಗ್ಗೆ ಒಂದೇ ಒಂದು ಮಾತನಾಡದ ಪ್ರಿಯಾಂಕ್ ಖರ್ಗೆ ಅವರು ಇಲ್ಲಸಲ್ಲದ ವಿಚಾರಗಳಿಗೆ ಸಮಯ ವ್ಯರ್ಥ ಮಾಡುತ್ತಿದ್ದು, ದಲಿತರು ಎನ್ನಿಸಿಕೊಳ್ಳುವುದಕ್ಕೂ ಅವರು ಯೋಗ್ಯರಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಪಲಕ್ಕಾಗಿ, ಪ್ರಚಾರಕ್ಕಾಗಿ ಮತ್ತು ಪತ್ರಿಕೆಗಳ ಮುಖಪುಟದಲ್ಲಿ ಬರುವುದಕ್ಕೆ ಆರ್.ಎಸ್.ಎಸ್.ನ ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಎಚ್ಚರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಆರ್.ಎಸ್.ಎಸ್. ಅವಹೇಳನ ಮಾಡಿದೆಯೇ?; ಅವರ ವಿರುದ್ಧವಾಗಿ ನಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್.ಎಸ್.ಎಸ್.ನ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿ ಇಡಬೇಕು; ಯಾವುದೇ ಸರ್ಕಾರಿ ಶಾಲೆಗಳು, ದೇವಾಲಯಗಳಲ್ಲಿ ಚಟುವಟಿಕೆ ಮಾಡುವುದಕ್ಕೆ ಬಿಡಬಾರದು ಎಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಿಂದ ದಲಿತರು ಇಂದು ಕಂಗಾಲಾಗಿದ್ದಾರೆ. 42 ಸಾವಿರ ಕೋಟಿ ನೀಡಿದ್ದೇವೆ ಎಂದು ಹೇಳಿ ಅವರಿಗೆ ಬಿಡಿಗಾಸು ಸಿಗದ ರೀತಿಯಲ್ಲಿ ನಡೆದುಕೊಂಡಿದ್ದೀರಿ. ಇದರ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಯೋಗ್ಯತೆ ಇಲ್ಲ ಎಂದು ತಿಳಿಸಿದರು.
ಹಿಂದೆ ಕೂಡ ಆರ್.ಎಸ್.ಎಸ್. ಅನ್ನು ನಿಷೇಧಿಸಲಾಗಿತ್ತು. ಮತ್ತೆ ನಿಷೇಧವನ್ನು ಏಕೆ ವಾಪಸ್ ತೆಗೆದುಕೊಳ್ಳಲಾಯಿತು?; ವಾಪಸ್ ತೆಗೆದುಕೊಳ್ಳಲು ಯಾರು ನಿಮಗೆ ಅರ್ಜಿ ಕೊಟ್ಟರು?; ಆರ್.ಎಸ್.ಎಸ್. ಸಂಘಟನೆಯು ಕೇಳಿತ್ತೇ ಎಂದು ಪ್ರಶ್ನಿಸಿದರು. ಪ್ರಿಯಾಂಕ ಖರ್ಗೆ ಅವರೇ, ನಿಮಗೆ ತಾಕತ್ತು ಇದ್ದರೆ ಆರ್.ಎಸ್.ಎಸ್. ಅನ್ನು ನಿಷೇಧಿಸಿ ನೋಡಿ ಎಂದು ಸವಾಲು ಹಾಕಿದರು.
ಪ್ರಿಯಾಂಕ್ ಖರ್ಗೆ ಹುಚ್ಚುತನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನ…
ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಿಮ್ಮಂತ ನಡೆಯಿಲ್ಲ. ಅವರು ಸೌಮ್ಯ ಸ್ವ್ವಭಾವಿಯಾಗಿದ್ದರು, ಎಲ್ಲರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಭಾವನೆ ಇತ್ತು. ಒಂದು ದಿನವೂ ಆರ್.ಎಸ್.ಎಸ್.ನ ವಿರುದ್ಧವಾಗಿ ಮಾತನಾಡಲಿಲ್ಲ. ಆದರೆ ನಿಮಗೆ ಏಕೆ ಹುಚ್ಚುತನ ಬಂದಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದರು.
ಆರ್.ಎಸ್.ಎಸ್. ಸಂಘಟನೆಯ ಸಮಾವೇಶ ಬೆಂಗಳೂರಿನಲ್ಲಿ ನಡೆದಾಗ ಅಂದಿನ ಗೃಹಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಬಂದು ಉಸ್ತುವಾರಿ ವಹಿಸಿ ಎಲ್ಲಿಯೂ ಯಾವುದೇ ರೀತಿಯ ಅನಾಹುತ ಆಗದ ರೀತಿ ಮಾಡಿ, ಅವರೇ ಮೆಚ್ಚುಗೆ ಸೂಚಿಸಿದ ಉದಾಹರಣೆಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೇಕಿದ್ದರೆ ನೀವು ಹೋಗಿ ನೋಡಿಕೊಳ್ಳಿ ಎಂದು ಹೇಳಿದರು. ನಿಮ್ಮ ಹುಚ್ಚುತನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನ ಮಾಡಬೇಡಿ ಎಂದು ತಿಳಿಸಿದರು.
ಕಲುಷಿತ ಮನಸುಗಳು ಆರ್.ಎಸ್.ಎಸ್. ಅನ್ನು ನಿಷೇಧಿಸಲು, ನಿಯಂತ್ರಿಸಲು ಮಾಡಿರುವ ಎಲ್ಲ ಪ್ರಯತ್ನಗಳ ಮಧ್ಯೆಯು 100 ವರ್ಷಗಳನ್ನು ಕಳೆದು ಶತಮಾನೋತ್ಸವವ ಸಂಭ್ರಮಾಚರಣೆಯನ್ನು ಇಡೀ ದೇಶಾದ್ಯಂತ ಮಾಡುತ್ತಿದೆ. ಬಹುಶಃ ನಿಮ್ಮ ಅಂಡಿಗೆ ಬೆಂಕಿ ಬೀಳುವುದಕ್ಕೆ ಅದು ಒಂದು ಕಾರಣ ಇರಬೇಕು ಎಂದು ಟೀಕಿಸಿದರು. ಈ 100 ಸಂಭ್ರಮ ಇಡೀ ದೇಶಾದ್ಯಂತ ನಡೆಯುವ ಸಂದರ್ಭದಲ್ಲಿ ಬೆಂಗಳೂರಿನ 100 ಕಡೆಗಳಲ್ಲಿ ಪಥಸಂಚಲನ ನಡೆದಿದೆ. ಅದನ್ನು ನೋಡಿ ಅವರಿಗೆ ಉರಿ ಪ್ರಾರಂಭವಾಗಿದೆ ಎಂದು ವ್ಯಂಗ್ಯವಾಡಿದರು.
ಆರ್.ಎಸ್.ಎಸ್. ದೇಶದ ರಕ್ಷಣೆ ಮತ್ತು ದೇಶವನ್ನು ಸದೃಢವಾಗಿ ಇಡಲು ಅನೇಕ ಸ್ವಯಂಸೇವಕರು ಮನೆಗಳನ್ನು ಬಿಟ್ಟು ಈ ಸಂಘಟನೆಯಲ್ಲಿ ಸೇರಿ ತ್ಯಾಗ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಇಂತಹ ತ್ಯಾಗದ ಸಂಘಟನೆ ಈ ದೇಶದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಆದರೆ ಪ್ರಿಯಾಂಕ ಖರ್ಗೆ ಅವರು ದೇಶಕ್ಕೆ ಬಾಂಬ್ ಹಾಕಿದವರನ್ನ ರಕ್ಷಣೆ ಮಾಡುವುದು, ಓಲೈಕೆ ಮಾಡುವುದು, ಉಗ್ರ ಸಂಘಟನೆಗಳ ಪೋಷಿಸುವ ಮನಸ್ಥಿತಿ ಅವರದ್ದು ಎಂದು ಆರೋಪಿಸಿದರು.
ಪ್ರಿಯಾಂಕ್À ಖರ್ಗೆ ಅವರಿಗೆ ಕೊಟ್ಟಿರುವ ಸಚಿವ ಜವಾಬ್ದಾರಿಯನ್ನು ನಿಭಾಯಿಸಲಿ; ನಿಮ್ಮ ಕ್ಷೇತ್ರದ ಪರಿಸ್ಥಿತಿ ಏನು ಇದೆ ಎಂಬುದನ್ನು ಪರಿಶೀಲಿಸಲಿ; ನಿಮ್ಮ ಊರಿನ ಶಿಕ್ಷಣ ಪರಿಸ್ಥಿತಿ ನೋಡಿ ಎಂದು ಒತ್ತಾಯಿಸಿದರು. ಪ್ರಿಯಾಂಕ ಖರ್ಗೆ ಅವರು ನನಗೆ ಗೃಹ ಮಂತ್ರಿ ಮಾಡಿ ನಾನು ಎಲ್ಲವನ್ನು ಹತೋಟಿಗೆ ತರುತ್ತೇನೆ ಎಂದು ಹೇಳಿರುವ ಬಗ್ಗೆ ಮಾತುಗಳು ಬರುತ್ತಿವೆ. ಅವರಿಗೆ ಏನಾದರೂ ಗೃಹಮಂತ್ರಿ ಹುದ್ದೆಯನ್ನು ನೀಡಿದರೆ ಇಡೀ ಕರ್ನಾಟಕಕ್ಕೆ ಬೆಂಕಿಯನ್ನು ಹಾಕುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ನಿಮ್ಮಂಥ ಸಚಿವರನ್ನ ಹದ್ದುಬಸ್ತಿನಲ್ಲಿ ಇಡುವುದು ನಿಮ್ಮ ಪಕ್ಷದ ಆದ್ಯ ಕರ್ತವ್ಯವಾಗಬೇಕು. ಅದು ಸಾಧ್ಯವಾಗಲಿಲ್ಲ ಎಂದರೆ ಕರ್ನಾಟಕ ಜನ ನಿಮ್ಮ ದುರಹಂಕಾರಕ್ಕೆ ಬುದ್ಧಿಕಲಿಸುವ ಕೆಲಸ ಮಾಡುತ್ತಾರೆ ಎಂದು ಎಚ್ಚರಿಸಿದರು. ಪ್ರಿಯಾಂಕ್ ಖರ್ಗೆ ಅವರು ಮಾತನಾಡುವ ಮುಂಚೆ ಅಂಬೇಡ್ಕರ್ ರಕ್ತ ಎಂದು ಬೊಗಳೆ ಹೊಡೆಯುತ್ತಾರೆ. ಆದರೆ ಅವರು ಅಂಬೇಡ್ಕರ್ ರಕ್ತ ಹೀರುವ ಜನ ಎಂದು ಆರೋಪಿಸಿದರು.
ಕಾಂಗ್ರೆಸ್ ಕುತಂತ್ರ ಮಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ಅದನ್ನು ಅವರೇ ಒಪ್ಪಿಕೊಂಡಿದ್ದಾರೆ. ನಾವು ರಾಜಕೀಯ ಪಕ್ಷ ಅದಕ್ಕಾಗಿ ನಾವು ಸೋಲಿಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ನೆನಪಿಸಿದರು. ಹಾಗಿದ್ದಲ್ಲಿ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ವಿರೋಧಿ ಅಲ್ಲವೇ ಎಂದು ಕೇಳಿದರು. ಇಂದು ಎಲ್ಲ ಸಮುದಾಯಗಳನ್ನು ಒಗ್ಗೂಡಿಸುತ್ತಿರುವ ಆರ್.ಎಸ್.ಎಸ್. ಬಗ್ಗೆ ಕ್ಷುಲ್ಲಕ ಹೇಳಿಕೆಯನ್ನು ನೀಡುವುದನ್ನು ಬಿಟ್ಟು ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
BREAKING: ತಮಿಳುನಾಡಿನಲ್ಲಿ ಕೈಗೊಂಡಂತೆ ‘RSS’ ವಿರುದ್ಧ ಕರ್ನಾಟಕದಲ್ಲಿ ಕ್ರಮ: ಸಿಎಂ ಸಿದ್ಧರಾಮಯ್ಯ ಘೋಷಣೆ
SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!