ಚಾಮರಾಜನಗರ : ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯಲ್ಲಿ ಸ್ಪೋಟಕ ಅಂಶ ಬಯಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಸೇಡಿನ ಹತ್ಯೆ ಎಂಬುದು ಬಯಲಾಗಿದೆ.
ಹೌದು ಹುಲಿಯನ್ನು ಕೊಂದಿದ್ದು, ಕಳ್ಳ ಬೇಟೆಗೆ ಅಲ್ಲ ಬದಲಿಗೆ ಸೇಡು ತೀರಿಸಿಕೊಳ್ಳಲು ಎಂದು ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಮೃತ ಹುಲಿಯ ಇನ್ನುಳಿದ ಕಳೆಬರವನ್ನ ಅರಣ್ಯ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಹುಲಿಯ ತಲೆ ಹಾಗು ಮುಂಗಾಲು ಮಣ್ಣಿನಲ್ಲಿ ಹೂಳಲಾಗಿತ್ತು. ಹುಲಿಯ ಮಧ್ಯ ಭಾಗದ ದೇಹವನ್ನು ಎಲೆಗಳಲ್ಲಿ ಮುಚ್ಚಿಟ್ಟಲಾಗಿತ್ತು. ಹುಲಿಯ ಹಿಂಭಾಗದ ದೇಹವನ್ನು ಮರದ ಕೆಳಗೆ ಎಸೆಯಲಾಗಿತ್ತು.
ಹುಲಿಗೆ ವಿಷ ಹಾಕಿ ಸತ್ತ ಬಳಿಕ ಕೊಡಲಿಯಿಂದ ಕತ್ತರಿಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಕೊಡಲಿಯಿಂದ ಕೊಚ್ಚಿ ಮೂರು ಭಾಗ ಮಾಡಿದ್ದಾನೆ. ಹಸು ಕೊಂದಿದ್ದಕ್ಕೆ ಹುಲಿ ಕೊಂದರಾ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಕಣ್ಮರೆ ಆಗಿರುವ ಹಸುವಿನ ಮಾಹಿತಿಯನ್ನು ಕಲೆ ಹಾಕಲು ಸಿಬ್ಬಂದಿಗಳು ಮುಂದಾಗಿದ್ದಾರೆ.