ಶಿವಮೊಗ್ಗ: ಸಾಗರ ತಾಲೂಕಿನ ಕಸಬಾ ಹೋಬಳಿ ನಾಡಕಲಸಿ ಗ್ರಾಮದ ಸರ್ವೆ ನಂ. 49ರಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ಭೂ ಒತ್ತುವರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸ್ವಯಂ ಪ್ರೇರಿತ (Suo-Moto) ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ವರದಿಗಾರರಾದಂತ ಮಹೇಶ್ ಹೆಗಡೆ ಅವರು ಮೇ 13, 2026 ರಂದು “ಕಂದಾಯ ಭೂಮಿ ಒತ್ತುವರಿ: ಕ್ರಮ ಕೈಗೊಳ್ಳುವವರು ಯಾರು?” ಎಂಬುದಾಗಿ ವರದಿಯನ್ನು ಪ್ರಕಟಿಸಿದ್ದರು. ಈ ಆಧಾರದ ಮೇಲೆ ಈ ಕ್ರಮ ಜರುಗಿಸಲಾಗಿದೆ. ಸಾಗರದಿಂದ ತ್ಯಾಗರ್ತಿಗೆ ಹೋಗುವ ಮಾರ್ಗದಲ್ಲಿ ರೈಲ್ವೇ ಗೇಟ್ ದಾಟಿದ ನಂತರ ರಸ್ತೆಯ ಎಡಭಾಗದಲ್ಲಿರುವ ಸುಮಾರು 123 ಎಕರೆ ದಟ್ಟ ಅರಣ್ಯ ಪ್ರದೇಶದ ಕಂದಾಯ ಭೂಮಿಯು ರಾಜಾರೋಷವಾಗಿ ಒತ್ತುವರಿಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಒತ್ತುವರಿಯ ಸ್ವರೂಪ:
-
ಕಾಡು ನಾಶ: ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ದಟ್ಟ ಅರಣ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ.
-
ಮರಗಳಿಗೆ ಬೆಂಕಿ: ನೂರಾರು ವರ್ಷ ಹಳೆಯ ಮರಗಳನ್ನು ಕಡಿದು, ಸಾಕ್ಷ್ಯ ನಾಶಪಡಿಸಲು ಮರದ ಬುಡಗಳಿಗೆ ಬೆಂಕಿ ಹಚ್ಚಲಾಗುತ್ತಿದೆ.
-
ಕೃಷಿ ಚಟುವಟಿಕೆ: ಒತ್ತುವರಿ ಮಾಡಿದ ಜಾಗದಲ್ಲಿ ಜೆಸಿಬಿ ಬಳಸಿ ಸಮತಟ್ಟುಗೊಳಿಸಿ, ಶುಂಠಿ ಹಾಗೂ ಅಡಿಕೆ ಸಸಿಗಳನ್ನು ನೆಡಲಾಗಿದೆ.
-
ಶೆಡ್ ನಿರ್ಮಾಣ: ರಸ್ತೆಯ ಪಕ್ಕದಲ್ಲೇ ಸಣ್ಣ ಸಣ್ಣ ಶೆಡ್ಗಳನ್ನು ನಿರ್ಮಾಣ ಮಾಡಿ ಬೇಲಿ ಹಾಕಿಕೊಳ್ಳಲಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿ:
ಗೂಗಲ್ ಮ್ಯಾಪ್ನಲ್ಲಿ ಈಗಲೂ ಈ ಪ್ರದೇಶವು ದಟ್ಟ ಅರಣ್ಯವೆಂದು ಕಾಣಿಸಿದರೂ, ವಾಸ್ತವದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಅವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಆಸ್ತಿ ರಕ್ಷಿಸಬೇಕಾದ ಅಧಿಕಾರಿಗಳ ಈ ನಡವಳಿಕೆಯನ್ನು ಲೋಕಾಯುಕ್ತರು “ಕರ್ತವ್ಯ ಲೋಪ” ಎಂದು ಪರಿಗಣಿಸಿದ್ದಾರೆ.
ಲೋಕಾಯುಕ್ತರ ನಿರ್ದೇಶನಗಳು:
ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಈ ಕೆಳಗಿನ ಕ್ರಮಗಳಿಗೆ ಆದೇಶಿಸಿದ್ದಾರೆ:
-
ತನಿಖೆಗೆ ಆದೇಶ: ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಅವರು ಸಾಗರ ಉಪವಿಭಾಗದ ಸಹಾಯಕ ಕಮೀಷನರ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಫೋಟೋ ಮತ್ತು ವಿಡಿಯೋ ಸಹಿತ ಪ್ರಾಥಮಿಕ ವರದಿಯನ್ನು ಎರಡು ವಾರಗಳೊಳಗೆ ಸಲ್ಲಿಸಬೇಕು.
-
ಜವಾಬ್ದಾರಿ ನಿಗದಿ: ಈ ಒತ್ತುವರಿಗೆ ಕಾರಣರಾದ ಅಥವಾ ಮೌನವಾಗಿದ್ದ ಅಧಿಕಾರಿಗಳ ಹೆಸರು ಮತ್ತು ಹುದ್ದೆಯನ್ನು ಪತ್ತೆಹಚ್ಚಲು ಸೂಚಿಸಲಾಗಿದೆ.
-
ಪ್ರತಿವಾದಿಗಳು: ಸಾಗರ ತಹಶೀಲ್ದಾರ್ ಪ್ರದೀಪ್ ನಿಕ್ಕಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ, ವಲಯ ಅರಣ್ಯಾಧಿಕಾರಿ ಮೋಹನ್ ಮತ್ತು ಸಹಾಯಕ ಭೂ ದಾಖಲೆಗಳ ನಿರ್ದೇಶಕ ನಂಜುಂಡಪ್ಪ ಅವರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಈ ಆದೇಶದ ಪ್ರತಿಯನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಮತ್ತು ಪರಿಸರ ಸಚಿವರಿಗೂ ರವಾನಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯು ಜೂನ್ 01, 2026 ರಂದು ನಡೆಯಲಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..









