ಬಳ್ಳಾರಿ : ರಾಜ್ಯದಲ್ಲಿ ಇದೀಗ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಮೂರನೇ ಮಗು ಹೆಣ್ಣಾಗಿದ್ದಕ್ಕೆ ತಾಯಿಯೊಬ್ಬಳು ಮಗುವನ್ನು ಕಾಲುವಿಗೆ ಎಸೆದು ಕೊಂದಿರುವ ಘೋರ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ನಡೆದಿದೆ. ಪ್ರಿಯಾಂಕಾ ದೇವಿ ತನ್ನ ಮಗುವನ್ನು ಕೊಲೆಗೈದ ತಾಯಿ ಎಂದು ತಿಳಿದುಬಂದಿದೆ.
ಪ್ರಿಯಾಂಕಾ ದೇವಿಯ ಪತಿ ಸರೋಜ್ ಕುಮಾರ್ ಜಿಂದಾಲ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಹಾರ ಮೂಲದ ಈ ದಂಪತಿ ತೋರಣಗಲ್ನಲ್ಲಿ ವಾಸವಾಗಿದ್ದರು. ದಂಪತಿಗೆ ಮೊದಲು ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಮೂರನೇ ಹೆಣ್ಣು ಮಗು ಜನಿಸಿ ಎರಡು ತಿಂಗಳಾಗಿತ್ತು. ಮೂರನೆಯ ಮಗುವೂ ಹೆಣ್ಣಾದ ಕಾರಣ ಕೋಪಗೊಂಡ ಪ್ರಿಯಾಂಕಾ ದೇವಿ ಮಗುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಬಳಿಕ ಮಗು ಇಲ್ಲ ಎಂದು ಗೋಳಾಡಿ ನಾಟಕವಾಡಿದ್ದಾಳೆ.
ಅಮಾಯಕಳಂತೆ ಪೊಲೀಸರ ಮುಂದೆ ತನ್ನ ಮಗು ಇಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಪತಿ ಸರೋಜ್ ಕುಮಾರ್ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ತಾಯಿಯೇ ಮಗುವನ್ನು ಎತ್ತಿಕೊಂಡು ಹೋಗಿದ್ದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ತಾನೇ ಮಗುವನ್ನು ಕೊಲೆ ಮಾಡಿದ್ದನ್ನು ಆಕೆ ಒಪ್ಪಿಕೊಂಡಿದ್ದಾಳೆ. ಮಗುವಿನ ಆರೋಗ್ಯ ಸರಿಯಿಲ್ಲದ ಕಾರಣ ಇಂತಹ ಕೃತ್ಯ ಎಸಗಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.








