ಮಂಡ್ಯ :- ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡೋಕೆ ಮುಂದಾದರೇ ಅದನ್ನು ವಿರೋಧ ಮಾಡೋದು ಕ್ಷೇತ್ರದಲ್ಲಿ ಕಾಯಕವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಪ್ರತಿಭಟನಾಕಾರರ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ಮದ್ದೂರು ಪಟ್ಟಣದ ಪುರಸಭೆ ಕಟ್ಟಡದಲ್ಲಿ ಅಳವಡಿಸಿರುವ ನಗರಸಭಾ ಕಾರ್ಯಾಲಯ ನಾಮ ಫಲಕವನ್ನು ಅನಾವರಣಗೊಳಿಸಿ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮದ್ದೂರು ನಗರಸಭಾ ಕಾರ್ಯಾಲಯ ನಾಮ ಫಲಕವನ್ನು ಶಾಸಕರು ಅನಾವರಣಗೊಳಿಸಬಾರದು ಹಾಗೂ ನಗರಸಭಾ ವ್ಯಾಪ್ತಿಗೆ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಸೇರಿಸಬಾರದೆಂದು ರೈತ ಮುಖಂಡರು ಹಾಗೂ ಸಾರ್ವಜನಿಕರು ಕಪ್ಪು ಬಾವುಟ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಉದಯ್ ಕೆಂಡಾಮಂಡಲರಾದರು.
ಮದ್ದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಗುರಿಯಾಗಿದೆ. ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡೋಕೆ ಮುಂದಾದರೇ ಅದನ್ನು ವಿರೋಧ ಮಾಡೋದು ಕ್ಷೇತ್ರದಲ್ಲಿ ಕೆಲವರ ಕಾಯಕವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದರೇ ಯಾವುದೇ ಕಾರಣಕ್ಕೂ ರಾಜಿಯಾಗುವ ಮಾತೆ ಇಲ್ಲ ಎಂದು ಗುಡುಗಿದರು.
ಮದ್ದೂರು ಪುರಸಭೆ ವ್ಯಾಪ್ತಿಯ ಗೆಜ್ಜಲಗೆರೆ, ಸೋಮನಹಳ್ಳಿ, ಚಾಮನಹಳ್ಳಿ ಹಾಗೂ ಗೊರವನಹಳ್ಳಿ ಪಂಚಾಯಿತಿಗಳಿಂದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ನೀಡಿದ್ದ ಅನುಮೋದನೆಯ ವರದಿ ಬಳಿಕ ಸಂಬಂಧ ಪಟ್ಟ ಇಲಾಖೆಗೆ ಕಡತಗಳನ್ನು ಕಳುಹಿಸಲಾಗಿತ್ತು. ಆನಂತರ ರಾಜ್ಯಪಾಲರು ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೆಲ್ದರ್ಜೆಗೆರಿಸಲು ಅಧಿಸೂಚನೆ ಹೊರಡಿಸಿದ ಆನಂತರವೇ ನಗರಸಭೆಯಾಗಿ ಪರಿವರ್ತನೆಗೊಂಡಿದಿಯೇ. ಹೊರತು ನಮ್ಮ ಸ್ವಹಿತಕ್ಕಾಗಿ ಅನುಮೋದನೆ ಮಾಡಿಸಿಕೊಂಡಿಲ್ಲ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆಲ ದಿನಗಳ ಹಿಂದೆ ರೈತ ಮುಖಂಡರು ಹಾಗೂ ಸಾರ್ವಜನಿಕರು ವಿರೋಧ ಮಾಡಿದರು. ಆಗ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಎಂದು ಹೇಳಿದ್ದೆ. ಆದರೆ, ಯಾರು ಸಹ ಮಾತುಕತೆಗೆ ಬರಲಿಲ್ಲ. ಬಳಿಕ ಮುಷ್ಕರ ಮಾಡಿದ್ರು, ಬೃಹತ್ ಪ್ರತಿಭಟನೆ ಮಾಡಿದ್ರು ಈಗ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಅವರು ಸ್ವತಂತ್ರರಿದ್ದಾರೆ ಅವರು ಎಲ್ಲಿಗೆ ಬೇಕಾದ್ರು ಹೋಗಲಿ ನಮ್ಮ ಉದ್ದೇಶ ಪಟ್ಟಣದ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದರು.
ಮದ್ದೂರು ಪಟ್ಟಣ ಹತ್ತಾರು ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದೆ. ರಸ್ತೆ, ಒಳಚರಂಡಿ, ಪುಟ್ ಪಾತ್, ನಾಲೆಗಳ ನಿರ್ವಹಣಾ ಕೊರತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಂದ ಪಟ್ಟಣ ನರಳುತ್ತಿದ್ದು, ಸಾರ್ವಜನಿಕರು ಸಾಕಷ್ಟು ತೊಂದರೆಗೀಡಾಗಿದ್ದಾರೆ. ಹೀಗಾಗಿ ಮದ್ದೂರು ಪಟ್ಟಣವನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕಲಿದ್ದು, ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸಿದ್ದರಾಜು, ಪ್ರಮೀಳಾ, ಸಚ್ಚಿನ್, ಸುರೇಶ್ ಕುಮಾರ್, ಮಹೇಶ್, ಸರ್ವಮಂಗಳ, ಲತಾ ರಾಮು, ರತ್ನಮ್ಮ, ಸುಮಿತ್ರಾ, ಆಯಿಷಾ ಜುನೇದ್, ಸಿದ್ದರಾಜು, ನಾಮ ನಿರ್ದೇಶನ ಸದಸ್ಯ ಮೋಹನ್, ಕೃಷ್ಣಪ್ಪ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್ ಪುರಸಭಾ ಸಿಬ್ಬಂದಿಗಳು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ