ಹುಬ್ಬಳ್ಳಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಮರ್ಶೆಗಳ ನಡುವೆಯೇ, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗೃಹಿಣಿಯೊಬ್ಬರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸದುಪಯೋಗಪಡಿಸಿಕೊಂಡು ಮಾದರಿಯಾಗಿದ್ದಾರೆ.
ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ನಿವಾಸಿ ಈರವ್ವ ಭರಮಪ್ಪ ಅಂಗಡಿ (52).ಗೃಹಲಕ್ಷ್ಮಿ ಯೋಜನೆಯಡಿ ತಮಗೆ ಬಂದ ಒಟ್ಟು 29 ಕಂತುಗಳ ಹಣವನ್ನು ಕೂಡಿಟ್ಟ ಈರವ್ವ, ಸುಮಾರು ₹54,000 ಮೊತ್ತವನ್ನು ಸಂಗ್ರಹಿಸಿದ್ದರು.ಈ ಹಣದಲ್ಲಿ ₹50,000 ವ್ಯಯಿಸಿ ತಮ್ಮ 2.5 ಎಕರೆ ಜಮೀನಿನಲ್ಲಿ 220 ಅಡಿ ಆಳದ ಬೋರ್ವೆಲ್ ಕೊರೆಸಿದ್ದಾರೆ. 90 ಅಡಿಗೇ 5 ಇಂಚು ನೀರು ಬಿದ್ದಿದ್ದು, ಕುಟುಂಬದಲ್ಲಿ ಹರ್ಷ ವ್ಯಕ್ತವಾಗಿದೆ.
ಉಳಿದ ₹4,000 ಹಣ ಹಾಗೂ ವಿವಿಧೆಡೆ ಮಾಡಿದ ಸಾಲದ ನೆರವಿನಿಂದ ₹80,000 ವೆಚ್ಚದಲ್ಲಿ ಮೋಟಾರ್ ಅಳವಡಿಸಿ, ಮಳೆಯನ್ನೇ ನಂಬಿದ್ದ ಒಣ ಬೇಸಾಯದ ಜಮೀನನ್ನು ನೀರಾವರಿ ಜಮೀನನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಕೇವಲ ₹2,000 ಹಣದಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವವರಿಗೆ ಈರವ್ವ ಅವರ ಈ ಕಾರ್ಯವೈಖರಿ ಮತ್ತು ಹಣದ ಉಳಿತಾಯದ ಮನೋಭಾವ ದೊಡ್ಡ ಸ್ಪೂರ್ತಿಯಾಗಿದೆ.








