ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಚಾಲಕರಿಂದ ಉಂಟಾಗುವಂತ ಅಪಘಾತ ತಡೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಅಪಘಾತ ಎಸಗಿದ್ರೆ ಮೊದಲ ಸಲಕ್ಕೆ ಸಸ್ಪೆಂಡ್, ಎರಡನೇ ಸಲಕ್ಕೆ ಕೆಲಸದಿಂದಲೇ ವಜಾಗೊಳಿಸುವಂತ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.
ಈ ಕುರಿತಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದು, ಬೆಂಗಳೂರು ನಗರದಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಚಾಲಕರಿಂದಾಗುವ ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಪ್ರಯಾಣಿಕರ ಜೀವ ರಕ್ಷಣೆ ಹಾಗೂ ರಸ್ತೆ ಸುರಕ್ಷತೆಯನ್ನು ಪ್ರಧಾನ ಗುರಿಯಾಗಿ ಸಂಸ್ಥೆ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳ ವಿವರವನ್ನು ಪ್ರಕಟಿಸಿದೆ.
ಅಪಘಾತಗಳ ಪರಿಶೀಲನೆ
ಆಗಸ್ಟ್ 2025ರಲ್ಲಿ ಒಟ್ಟು 04 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಒಂದು ವಿದ್ಯುತ್ಚಾಲಿತ ಬಸ್ಸಿಗೆ ಸಂಬಂಧಿಸಿದೆ.
ಪರಿಶೀಲನೆಯ ಪ್ರಕಾರ, 03 ಪ್ರಕರಣಗಳಲ್ಲಿ ಬಿಎಂಟಿಸಿ ಚಾಲಕರ ಹೊಣೆಗಾರಿಕೆ ಇರಲಿಲ್ಲ. ಕೇವಲ 01 ಪ್ರಕರಣದಲ್ಲಿ ಪ್ರಯಾಣಿಕರ ನಿರ್ಲಕ್ಷ್ಯ ಹಾಗೂ ವಿದ್ಯುತ್ ಬಸ್ ಚಾಲಕರ ನಿರ್ವಹಣಾ ತಪ್ಪು ಕಾರಣವಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ, ದ್ವಿಚಕ್ರ ವಾಹನ ಸವಾರರು ಬಸ್ಸನ್ನು ಅತಿಕ್ರಮಿಸಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು ಬಸ್ಸಿಗೆ ತಾಕುವುದು ಮುಖ್ಯ ಕಾರಣವೆಂದು ವರದಿ ತಿಳಿಸಿದೆ.
ಚಾಲಕರಿಗೆ ತರಬೇತಿ
ಡಿಸೆಂಬರ್ 2023ರಿಂದ ಸಂಚಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬಿಎಂಟಿಸಿ ಚಾಲಕರಿಗೆ ಸುರಕ್ಷಾ ಚಾಲನಾ ತರಬೇತಿ ನೀಡಲಾಗುತ್ತಿದೆ.
ಜುಲೈ 2025ರವರೆಗೆ 11,835 ಚಾಲಕರು ತರಬೇತಿಗೊಳಗಾಗಿದ್ದಾರೆ.
ಟ್ರಾಫಿಕ್ ಕಮಾಂಡ್ ಸೆಂಟರ್ನಲ್ಲಿ ಅಪಘಾತ ಮತ್ತು ಉಲ್ಲಂಘನೆಗಳ ವೀಡಿಯೋ ತುಣುಕುಗಳನ್ನು ತೋರಿಸಿ ಚಾಲಕರಲ್ಲಿ ಅರಿವು ಮೂಡಿಸಲಾಗಿದೆ.
ವಿದ್ಯುತ್ಚಾಲಿತ ಬಸ್ ಚಾಲಕರಿಗೆ ವಿಶೇಷ ತರಬೇತಿ ಏರ್ಪಡಿಸಲಾಗಿದ್ದು, 1,187 ಚಾಲಕರು ಇದುವರೆಗೆ ಪಾಲ್ಗೊಂಡಿದ್ದಾರೆ.
ಅರಿವು ಕಾರ್ಯಕ್ರಮಗಳು
ಘಟಕಗಳಲ್ಲಿ ‘ಬದುಕು ಬದುಕಿಸು’ ಹಾಗೂ ಬಸ್ ನಿಲ್ದಾಣಗಳಲ್ಲಿ ‘ಬಸ್ ಬಂತು ಬಸ್’ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಲಾಗಿದೆ.
ಪ್ರತಿ ವರ್ಷ ಜನವರಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ/ಮಾಸ ಆಚರಣೆ.
ಜನವರಿ 24ರಂದು ಚಾಲಕರ ದಿನಾಚರಣೆ, ಸುರಕ್ಷಿತ ಚಾಲನೆ ಮಾಡಿದವರಿಗೆ ಗೌರವ.
ಚಾಲಕರ ಮೇಲಿನ ನಿಯಂತ್ರಣ
ಚಾಲಕರ ಒತ್ತಡ ಕಡಿಮೆ ಮಾಡಲು, 2,000 ಅನುಸೂಚಿಗಳಲ್ಲಿ ಸಮಯವನ್ನು ಪರಿಷ್ಕರಿಸಿ ರನ್ನಿಂಗ್ ಟೈಮ್ ಹೆಚ್ಚಿಸಲಾಗಿದೆ.
ಅಪಘಾತರಹಿತ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ.
ಕರ್ತವ್ಯದ ವೇಳೆ ಮೊಬೈಲ್ ಬಳಕೆ ಪತ್ತೆಯಾದರೆ, ಚಾಲಕರಿಗೆ 15 ದಿನಗಳ ಅಮಾನತ್ತು ಹಾಗೂ ಘಟಕ ವರ್ಗಾವಣೆ ಕ್ರಮ ಜಾರಿಯಲ್ಲಿ.
ಘಟಕ ಪ್ರವೇಶ ದ್ವಾರದಲ್ಲೇ ಮದ್ಯಪಾನ ತಪಾಸಣೆ, ಮದ್ಯಪಾನಿತ ಚಾಲಕರಿಗೆ ಕರ್ತವ್ಯ ನಿರಾಕರಣೆ.
ಶಿಕ್ಷಾತ್ಮಕ ಕ್ರಮಗಳು
ಮೊದಲ ಮಾರಣಾಂತಿಕ ಅಪಘಾತಕ್ಕೆ ಅಮಾನತ್ತು ಹಾಗೂ ಎರಡು ವಾರ್ಷಿಕ ವೇತನ ಇಳಿಕೆ.
ಎರಡನೇ ಅಪಘಾತಕ್ಕೆ ಸೇವೆಯಿಂದ ವಜಾ.
ಕಳೆದ ಒಂದು ವರ್ಷದಲ್ಲಿ ನಡೆದ 20 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 20 ಚಾಲಕರನ್ನು ಅಮಾನತ್ತಿನಲ್ಲಿ ಇಡಲಾಗಿದೆ.
ಅಪಘಾತಕ್ಕೆ ಕಾರಣವಾದ ಹಾಗೂ ದುರುಳ ನಡವಳಿಕೆಯನ್ನು ತೋರಿದ ಚಾಲಕರಿಗೆ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ವಿಶೇಷ ತರಬೇತಿ ಕಡ್ಡಾಯ.
ನಿರಂತರ ಮೇಲ್ವಿಚಾರಣೆ
ವ್ಯವಸ್ಥಾಪಕ ನಿರ್ದೇಶಕರ ನಿರ್ದೇಶನದಂತೆ ಎಲ್ಲಾ ಘಟಕಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಸಭೆ ನಡೆಸಿ ಚಾಲಕರಿಗೆ ಸುರಕ್ಷಾ ಚಾಲನೆ ಹಾಗೂ ನಿಯಮ ಪಾಲನೆಯ ಕುರಿತು ದಿನನಿತ್ಯ ಸೂಚನೆ ನೀಡಲಾಗುತ್ತಿದೆ.
ವಲಯವಾರು ವಾರದಲ್ಲಿ ಕನಿಷ್ಠ ಎರಡು ಬಾರಿ ಚಾಲನಾ ತರಬೇತಿ.
ಸಾರ್ವಜನಿಕರಿಗೆ ಮನವಿ
ಬಿಎಂಟಿಸಿ ಸಂಸ್ಥೆಯು ದ್ವಿಚಕ್ರ ವಾಹನ ಸವಾರರು ಹಾಗೂ ಪ್ರಯಾಣಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ. ಭಾರಿ ವಾಹನಗಳ ನಡುವೆ ನಿರ್ಲಕ್ಷ್ಯದಿಂದ ಚಲಿಸುವುದನ್ನು ತಪ್ಪಿಸಿ, ಬಸ್ ಹಿಂದಿಕ್ಕುವಾಗ ಎಡಭಾಗದಿಂದ ಮೀರಬಾರದು ಎಂಬುದಾಗಿ ಬಿಎಂಟಿಸಿ ಸಂಸ್ಥೆ ತಿಳಿಸಿದೆ.
ರಾಜ್ಯದಲ್ಲಿ ‘ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆ’ ಕಡ್ಡಾಯ: ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ
ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ 2.5 ಲಕ್ಷ ಹೊಸ ಉದ್ಯೋಗಗಳು ಲಭ್ಯ