ಚಾಮರಾಜನಗರ : ಇತ್ತೀಚಿಗೆ ಅಷ್ಟೇ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳಿಗೆ ವಿಷ ಉಣಿಸಿ ಕೊಂದಿರುವ ಪ್ರಕರಣ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಕೃತ್ಯ ನಡೆದಿದ್ದು, ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಸಮೀಪ ಕೋತಿಗಳ ಮಾರಣಹೋಮ ನಡೆಸಿದ ಘಟನೆ ನಡೆದಿದೆ.
ಹೌದು ಕಂದೇಗಾಲ – ಕೊಡಸೋಗೆ ರಸ್ತೆಯಲ್ಲಿ ಎರಡು ಚೀಲಗಳಲ್ಲಿ ಕೋತಿಗಳ ಮೃತದೇಹಗಳನ್ನು ಕಟ್ಟಿಟ್ಟು ಬಿಸಾಡಿ ಹೋಗಿದ್ದಾರೆ. ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20ಕ್ಕೂ ಅಧಿಕ ಕೋತಿಗಳ ಕಳೇಬರಗಳು ಪತ್ತೆಯಾಗಿವೆ.ಮೇಲ್ನೋಟಕ್ಕೆ ವಿಷಪ್ರಾಶನ, ಇಲ್ಲವೇ ಹೊಡೆದು ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಕೋತಿಗಳ ಮೃತದೇಹಗಳು ಸಿಕ್ಕ ಪ್ರದೇಶವು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ. ಮಾಹಿತಿ ತಿಳಿದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವರದಿ ಬಂದ ನಂತರವಷ್ಟೇ ಕೋತಿಗಳ ಸಾವಿಗೆ ಏನು ಕಾರಣ ಎನ್ನುವುದು ತಿಳಿದುಬರಲಿದೆ.