ಧಾರವಾಡ : ಧಾರವಾಡದ ವಿದ್ಯಾಗಿರಿಯ ನಿವಾಸಿಯಾದ ಮಂಜುನಾಥ ಕೋಟುರ ಅನ್ನುವರು ತಮ್ಮ ಉಪಯೋಗಕ್ಕಾಗಿ 2023 ರಲ್ಲಿ ರೂ.1,31,719 ಹಣ ವಿನಿಯೋಗಿಸಿ ಧಾರವಾಡದಲ್ಲಿ ಎದುರುದಾರರ ಓಲಾ ಎಲೆಕ್ಟ್ರಿಕ್ ಕಂಪನಿಯವರ ಸ್ಕೂಟರ್ನ್ನು ಖರೀದಿಸಿದ್ದರು. ಖರೀದಿಸಿದ ಕೆಲವೇ ದಿನಗಳಲ್ಲಿ ಅವರ ಸ್ಕೂಟರ್ ರಸ್ತೆಯಲ್ಲಿ ಹೋಗುವಾಗ ನಿಲ್ಲುವುದು ಹಾಗೂ ಬ್ಯಾಟರಿ ಸಮಸ್ಯೆ ಮಾಡಹತ್ತಿತು. ಈ ಬಗ್ಗೆ ಎದುರುದಾರರ ಸರ್ವಿಸ್ ಸ್ಟೇಷನ್ಗೆ ಹಾಗೂ ಗ್ರಾಹಕರ ಸಹಾಯವಾಣಿಗೆ ವಿಷಯ ತಿಳಿಸಿದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ದೂರುದಾರರು ವಾಹನವನ್ನು ತಮ್ಮ ಉಪಯೋಗಕ್ಕೆ ಬಳಸದೇ ಅದನ್ನು ತಮ್ಮ ಮನೆಯಲ್ಲಿ ಇಟ್ಟಿರುತ್ತಾರೆ. ಸಾಕಷ್ಟು ಹಣ ವ್ಯಯ ಮಾಡಿ ವಾಹನ ಖರೀದಿಸಿದರು ಅದನ್ನು ದೂರುದಾರರಿಗೆ ಉಪಯೋಗಿಸಲು ಸಾಧ್ಯವಾಗದೇ ಇದ್ದು ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಜೂನ್ 28, 2024 ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ.ಅ.ಬೋಳಶೆಟ್ಟಿ ಸದಸ್ಯರು, ದೂರುದಾರರು ರೂ.1,31,719 ಹಣ ವಿನಿಯೋಗಿಸ ತಮ್ಮ ಕೆಲಸಕ್ಕೆ ಅನುಕೂಲವಾಗಲಿ ಅಂತಾ ಎದುರುದಾರ ಓಲಾ ಕಂಪನಿಯಿಂದ ಸ್ಕೂಟರ್ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ಅವು ರಸ್ತೆಯಲ್ಲಿ ಹೋಗುವಾಗ ಸಡನ್ನಾಗಿ ನಿಲ್ಲುವುದು ಮತ್ತು ಬ್ಯಾಟರಿ ಸಮಸ್ಯೆತಂದೊಡ್ಡಿದವು. ಹೊಸ ವಾಹನ ಆ ರೀತಿಆಗುವುದು ಸರಿಯಾದ ಕ್ರಮಅಲ್ಲ. ಎದುರುದಾರ ಓಲಾ ಎಲೆಕ್ಟ್ರಿಕ್ ಕಂಪನಿ ಮತ್ತುಅವರ ಸರ್ವಿಸ್ ಸ್ಟೇಷನಗೆ ಹಾಗೂ ಅವರ ಗ್ರಾಹಕರ ಸಹಾಯವಾಣಿಗೆ ದೂರುಕೊಟ್ಟರೂ ವಾಹನಗಳ ದುರಸ್ತಿಗೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂತಹ ಎದುರುದಾರ ನಡಾವಳಿಕೆ ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗುವುದರೊಂದಿಗೆ ಅನುಚಿತ ವ್ಯಾಪಾರ ಪದ್ಧತಿ ಮಾಡಿದ್ದಾರೆಂದು ಆಯೋಗ ಎದುರುದಾರ ವಿರುದ್ಧ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ಎಲೆಕ್ಟ್ರಿಕ್ ಓಲಾ ಕಂಪನಿಯ ಉತ್ಪಾದನೆಯ ಸ್ಕೂಟರಗಳು ಇಂತಹದೇ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆಆದ ಬಗ್ಗೆ ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು, ದೂರುಗಳು ದಾಖಲಾಗಿ ಎಲೆಕ್ಟ್ರಿಕ್ ಓಲಾ ಕಂಪನಿಯ ಉತ್ಪಾದನಾ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ಕೊಟ್ಟಿದ್ದರು. ಈ ಎಲ್ಲ ಸಂಗತಿಗಳನ್ನು ಆಧರಿಸಿ ಎದುರುದಾರ ಎಲೆಕ್ಟ್ರಿಕ್ ಓಲಾ ಕಂಪನಿ ಆಯಾದೂರುದಾರರಿಗೆ ಅವರು ಸಂದಾಯ ಮಾಡಿದ ವಾಹನಗಳ ಮೌಲ್ಯಗಳನ್ನು, ಹಣವನ್ನು ಶೇ 10% ರಂತೆ ಬಡ್ಡಿ ಸಮೇತ ಹಿಂದಿರುಗಿಸುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.50,000
ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎಲೆಕ್ಟ್ರಿಕ್ ಓಲಾ ಕಂಪನಿಗೆ ನಿರ್ದೇಶಿಸಿದೆ.