ಬೆಂಗಳೂರು : ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಶಾಂತಿನಗರದ ಇಡಿ ಕಚೇರಿಗೆ ಇದೀಗ ಮಾಜಿ ಸಂಸದ ಡಿಕೆ ಸುರೇಶ್ ವಿಚಾರಣೆಗೆ ಹಾಜರಾಗಿದ್ದಾರೆ.ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಸಿದ ಡಿಕೆ ಸುರೇಶ್ ಅವರು, ಯಾರೋ ಒಬ್ಬ ನಟ ನನ್ನ ಧ್ವನಿಯನ್ನು ಮಿಮಿಕ್ರಿ ಮಾಡಿ ಹಲವರಿಗೆ ವಂಚನೆ ಮಾಡಿದ್ದಾರೆ, ಧ್ವನಿ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ವಿಚಾರಣೆಗು ಮುನ್ನ ವಕೀಲರ ಮೂಲಕ ಮಾಹಿತಿ ಪಡೆದು ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗುತ್ತೇನೆ. ಪ್ರಕರಣಕ್ಕೆ ಸಂಬಂಧವಿಲ್ಲದೆ ನನಗೆ ನೋಟಿಸ್ ಯಾಕೆ ಕೊಟ್ಟಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ಯಾರೋ ಒಬ್ಬ ಮಹಿಳೆ ಮೌಖಿಕವಾಗಿ ನನ್ನ ಸಹೋದರಿ ಅಂತ ಹೇಳಿ ವಂಚನೆ ಮಾಡಿದ್ದಾರೆ. ಈ ವಿಚಾರವಾಗಿ ನಾನೇ ಪೊಲೀಸ್ ಕಮಿಷನರ್ ಗೆ ದೂರು ಸಹ ನೀಡಿದ್ದೆ. ಅವರು ಮಾಡಿದ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ವಿಧವಾದ ಸಂಬಂಧವಿಲ್ಲ. ನನ್ನ ಕ್ಷೇತ್ರದವರು ಅಂತ ಎರಡು ಮೂರು ಬಾರಿ ಭೇಟಿಯಾಗಿದ್ದಾರೆ. ನಾನು ಅವರ ಎರಡು ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ ಇದನ್ನು ಹೊರತುಪಡಿಸಿದರೆ ಬೇರೆ ಏನು ಇಲ್ಲ ಎಂದರು.
ಯಾಕೆ ಇಡಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ ಅಂತ ವಿಚಾರಣೆಗೆ ಹಾಜರಾದ ಮೇಲೆ ಗೊತ್ತಾಗುತ್ತದೆ ವಿಚಾರಣೆಗೆ ಸಂಪೂರ್ಣವಾದ ಸಹಕಾರ ಕೊಡುತ್ತೇನೆ. ಅವರ ಪ್ರಶ್ನೆಗಳು ಯಾವ ಹಾದಿಗಳ ಮೇಲೆ ಇರುತ್ತದೆ ಎಂಬುದರ ಮೇಲೆ ವಿಚಾರಣೆಗೂ ಇದಕ್ಕೂ ಸಂಬಂಧ ಇದೆಯಾ ಎನ್ನುವುದು ಬಳಿಕ ಗೊತ್ತಾಗುತ್ತದೆ. ತನ್ನ ವ್ಯಾಪ್ತಿ ಹೊರತುಪಡಿಸಿ ಇಡೀ ಕೇಸ್ ದಾಖಲಿಸಿಕೊಳ್ಳುತಿದೆ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಈಡಿಯಾಧಿಕಾರಿಗಳ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.