ಬೆಂಗಳೂರು : ಪ್ಲಾಸ್ಟಿಕ್ ತ್ಯಾಜ್ಯ ಜನ-ಜಾನುವಾರುಗಳ ಆರೋಗ್ಯಕ್ಕೆ ಕಂಟಕವಾಗಿದ್ದು, ಪರಿಸರಕ್ಕೂ ಮಾರಕವಾಗಿದೆ. ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಜನರ ಇಚ್ಛಾಶಕ್ತಿ ಅಗತ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಯೋಜಿಸಿದ್ದ ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಬಾರಿಯ ವಿಶ್ವ ಪರಿಸರ ದಿನದ ಧ್ಯೇಯ ವಾಕ್ಯ ಪ್ಲಾಸ್ಟಿಕ್ ತ್ಯಾಜ್ಯ ಕೊನೆಗಾಣಿಸೋಣ ಎಂಬುದಾಗಿದ್ದು. ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದರು.
ಬೆಂಗಳೂರು ನಗರದ ಹಸಿರು ಹೊದಿಕೆ ವೃದ್ಧಿಗೆ ಕ್ರಮ:
ನಿವೃತ್ತರ ಸ್ವರ್ಗ, ಉದ್ಯಾನ ನಗರಿ ಎಂದು ಖ್ಯಾತವಾಗಿದ್ದ ಬೆಂಗಳೂರು ಇಂದು ಕಾಂಕ್ರೀಟ್ ಕಾಡಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಶ್ವಾಸ ತಾಣ ಉಳಿಸಲು ಹೆಸರುಘಟ್ಟ ಹುಲ್ಲುಗಾವಲಿನ 5678 ಎಕರೆ ಪ್ರದೇಶವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ ಎಂದರು.
ಬೆಂಗಳೂರು ಉತ್ತರದ ಯಲಹಂಕ ಬಳಿ 153 ಎಕರೆ ಭೂಮಿಯಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇನ್ನು 2 ತಿಂಗಳೊಳಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದರು.
ಮರುಬಳಕೆ, ಪುನರ್ ಬಳಕೆ ಇಂದಿನ ಅಗತ್ಯ:
ಹಿಂದೆ ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಕೆ ಮಾಡುತ್ತಿದ್ದರು. ಪುನರ್ ಬಳಕೆ ಮಾಡುತ್ತಿದ್ದರು, ಸುಸ್ಥಿರ ಅಭಿವೃದ್ಧಿಗೆ ಪುನರ್ ಬಳಕೆ, ಮರು ಬಳಕೆ ಅನಿವಾರ್ಯ ಎಂದು ತಿಳಿಸಿದರು.
ಮಹಾತ್ಮಾ ಗಾಂಧೀಜಿ ಅವರು “ಪ್ರಕೃತಿ, ಪರಿಸರ ಇರುವುದು ಮನುಷ್ಯನ ಅವಶ್ಯಕತೆ ಪೂರೈಸುವುದಕ್ಕೇ ಹೊರತು, ದುರಾಸೆ ಪೂರೈಸುವುದಕ್ಕಲ್ಲ’’ ಎಂದು ಹೇಳಿದ್ದಾರೆ, ನಾವೆಲ್ಲರೂ ಮಹಾತ್ಮಾ ಗಾಂಧೀ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು.
ವಿಶ್ವ ಪರಿಸರ ದಿನಕ್ಕೆ ಎರಡು ಮಹತ್ವದ ಆದೇಶ:
ವಿದ್ಯಾವಂತ ಜನರೇ ತಾವು ಖರೀದಿಸುವ ಖನಿಜಯುಕ್ತ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ರಸ್ತೆಯಲ್ಲಿ ಎಸೆಯುತ್ತಾರೆ. ಇದನ್ನು ತಡೆಯಲು ಪ್ಲಾಸ್ಟಿಕ್ ತ್ಯಾಜ್ಯದ ಸಮರ್ಪಕ ನಿರ್ವಹಣೆಗೆ ಜಿಲ್ಲಾ ಮಟ್ಟದಲ್ಲಿ ಡಿಸಿ ನೇತೃತ್ವದ ಸಮಿತಿ ರಚಿಸಲು ಆದೇಶ ಮಾಡಲಾಗಿದೆ, ತಯಾರಕರ ವಿಸ್ತರಿತ ಜವಾಬ್ದಾರಿಯಂತೆ ಖಾಲಿ ನೀರಿನ ಬಾಟಲಿ ಮರು ಖರೀದಿಸುವುದನ್ನು ಕಡ್ಡಾಯ ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಅದೇ ರೀತಿ ರಸ್ತೆಯ ಬದಿಯಲ್ಲಿ ಸರ್ಕಾರ ನೆಡುವ ಗಿಡ, ಮರದ ಸುತ್ತ, ಎನ್.ಜಿ.ಟಿ. ಆದೇಶದಂತೆ ಒಂದು ಮೀಟರ್ ಸುತ್ತಳತೆ ಮಣ್ಣಿರಬೇಕು, ಹೀಗಾಗಿ ಅಲ್ಲಿ ಹಾಕಿರುವ ಕಾಂಕ್ರೀಟ್ ತೆಗೆಯುವಂತೆ ಆದೇಶ ಮಾಡಲಾಗಿದ್ದು, ಇದನ್ನು ಇಂದು ಮಾನ್ಯ ಮುಖ್ಯಮಂತ್ರಿಗಳೇ ವಿಶ್ವ ಪರಿಸರ ದಿನದ ಕೊಡುಗೆಯಾಗಿ ಬಿಡುಗಡೆ ಮಾಡುತ್ತಿದ್ದಾರೆ ಎಂದರು.
ವೃಕ್ಷೋ ರಕ್ಷತಿ ರಕ್ಷಿತಃ
ಯಾರು ಮರಗಳನ್ನು ಉಳಿಸುತ್ತಾರೋ ಅವರನ್ನು ಪರಿಸರ ಮತ್ತು ಪ್ರಕೃತಿಯೂ ಸಂರಕ್ಷಿಸುತ್ತದೆ. ಇದನ್ನು ಅರಿತು ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ ಬೆಳೆಸಿಕೊಂಡು ನಿರ್ಮಲ ಪರಿಸರಕ್ಕಾಗಿ ಶ್ರಮಿಸಬೇಕು. ಮನೆಯ ಮುಂದೆ ಗಿಡ ನೆಟ್ಟು ಪೋಷಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪರಿಸರ ಪ್ರಶಸ್ತಿ ಪ್ರದಾನ ಮಾಡಲಾಯಿತು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ 2 ವರ್ಷಗಳ ಸಾಧನೆ ಸಾರುವ ತುಂಬಿತು 2 ವರುಷ, ಹಸಿರು ಸಂರಕ್ಷಣೆಯ ಹರುಷ ಎಂಬ ಕಿರುಹೊತ್ತಗೆಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರುಗಳಾದ ದಿನೇಶ್ ಗುಂಡೂರಾವ್, ಎಂ.ಸಿ. ಸುಧಾಕರ್, ಬೈರತಿ ಸುರೇಶ್, ಪಿಸಿಬಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ, ಶಾಸಕರುಗಳಾದ ಪೊನ್ನಣ್ಣ, ಅಶೋಕ್ ಪಟ್ಟಣ್ ಮತ್ತಿತರರು ಪಾಲ್ಗೊಂಡಿದ್ದರು